ರಾಮಮಂದಿರ ನಿರ್ಮಾಣಕ್ಕಾಗಿ 1 ರು ನೀಡಿದ ಕೇಂದ್ರ ಸರ್ಕಾರ
ಲಕ್ನೋ, ಫೆಬ್ರವರಿ 06: ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ನೀಡಿದ ತೀರ್ಪಿನ ಅನ್ವಯ ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಟ್ರಸ್ಟ್ ರಚಿಸಿದೆ. ಆದರೆ, ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಅನುದಾನವನ್ನು ನೀಡುತ್ತಿಲ್ಲ. ಬದಲಿಗೆ ಸರ್ಕಾರದಿಂದ ಅಧಿಕೃತವಾಗಿ ಒಂದು ರುಪಾಯಿ ದೇಣಿಗೆ ನೀಡಲಾಗಿದೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಒಂದು ರೂಪಾಯಿ ದೇಣಿಗೆ ಸಿಗುತ್ತಿದ್ದಂತೆ, ಮಂದಿರ ನಿರ್ಮಾಣ ಟ್ರಸ್ಟ್ ಅಧಿಕೃತವಾಗಿ ಶುರುವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಮುರ್ಮು ಅವರು ಒಂದು ರೂಪಾಯಿಯನ್ನು ಟ್ರಸ್ಟ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ಟ್ರಸ್ಟಿಗೆ ಸಾರ್ವಜನಿಕರು ಕೂಡಾ ದೇಣಿಗೆ ನೀಡಬಹುದು. ನಗದು ಅಥವಾ ಯಾವುದೇ ರೂಪದಲ್ಲಿ ದೇಣಿಗೆ ನೀಡಬಹುದು.

ಹಿರಿಯ ನ್ಯಾಯವಾದಿ ಕೆ.ಪರಾಸರನ್ ಅವರ ಮನೆಯಲ್ಲೇ ಟ್ರಸ್ಟ್ ಕಚೇರಿ ಆರಂಭಗೊಂಡಿದ್ದು, ನಂತರ ಪ್ರತ್ಯೇಕ ಕಚೇರಿ ಹೊಂದಲಾಗುತ್ತದೆ ಎಂದು ಆಧಿಕಾರಿಗಳು ಹೇಳಿದ್ದಾರೆ.
ಈ ಟ್ರಸ್ಟ್ನಲ್ಲಿ ಹಿರಿಯ ನ್ಯಾಯವಾದಿ ಕೆ.ಪರಾಸರನ್, ಅಲಹಾಬಾದ್ನ ಜಗದ್ಗುರು ಶಂಕರಾಚಾರ್ಯ ಜ್ಯೋತಿಷ್ಪೀಠಾಧೀಶ್ವರ ಸ್ವಾಮಿ ವಾಸುದೇವಾನಂದ ಸರಸ್ವತೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹರಿದ್ವಾರದ ಯುಗಪುರುಷ ಪರಮಾನಂದ ಜೀ ಮಹಾರಾಜ್, ಪುಣೆಯ ಸ್ವಾಮಿ ಗೋವಿಂದದೇವ್ ಗಿರಿಜೀ ಮಹಾರಾಜ್, ಅಯೋಧ್ಯೆಯ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಅಯೋಧ್ಯೆಯ ಹೋಮಿಯೋಪತಿ ಡಾಕ್ಟರ್ ಅನಿಲ್ ಮಿಶ್ರಾ, ಪಾಟ್ನದ ಕಾಮೇಶ್ವರ ಚೌಪಾಲ್(ಎಸ್ಸಿ) , ಮಹಾಂತ ದಿನೇಂದ್ರ ದಾಸ್, ಅಯೋಧ್ಯೆಯ ನಿರ್ಮೋಹಿ ಅಖಾಡದ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ.












Click it and Unblock the Notifications