2022 ರ ಯುಪಿ ಚುನಾವಣೆ: ಚಿಕ್ಕಪ್ಪ ಶಿವಪಾಲ್ರೊಂದಿಗೆ ಅಖಿಲೇಶ್ ಮೈತ್ರಿ
ಲಕ್ನೋ ಡಿಸೆಂಬರ್ 17: ಮುಂಬರುವ ವಿಧಾನಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪಕ್ಷವನ್ನು ಬಲಪಡಿಸಲು ಸಣ್ಣ ಪಕ್ಷಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಗುರುವಾರ ತಮ್ಮ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಪಕ್ಷದ ಜೊತೆ ಮೈತ್ರಿ ಘೋಷಿಸಿದ್ದಾರೆ. ನಿನ್ನೆ ಮಧ್ಯಾಹ್ನ ಎಸ್ಪಿ ಮುಖ್ಯಸ್ಥ ಶಿವಪಾಲ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ.
"ಪಿಎಸ್ಪಿಎಲ್ನ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಮೈತ್ರಿಯನ್ನು ಅಂತಿಮಗೊಳಿಸಿದೆ. ಪ್ರಾದೇಶಿಕ ಪಕ್ಷಗಳನ್ನು ಕರೆದುಕೊಂಡು ಹೋಗುವ ಎಸ್ಪಿಯ ನೀತಿಯನ್ನು ಪ್ರಗತಿಶೀಲ ಸಮಾಜವಾದಿ ಪಕ್ಷ ಬಲಪಡಿಸುತ್ತಿದೆ. ಎಸ್ಪಿ ಮತ್ತು ಅದರ ಮಿತ್ರಪಕ್ಷಗಳನ್ನು ಗೆಲುವಿನತ್ತ ಕೊಂಡೊಯ್ಯುತ್ತಿದೆ" ಎಂದು ಅಖಿಲೇಶ್ ಸಭೆಯ ನಂತರ ಅಖಿಲೇಶ್ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಎಸ್ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಶಿವಪಾಲ್ ಅವರ ನಿವಾಸಕ್ಕೆ ಅಖಿಲೇಶ್ ತಲುಪುವ ಮೊದಲು ಅಲ್ಲಿಗೆ ಹಾಜರಾಗಿದ್ದರು ಎಂದು ಎಸ್ಪಿ ಮೂಲಗಳು ತಿಳಿಸಿವೆ. ಇಬ್ಬರ ಭೇಟಿ ಬಳಿಕ ಎರಡೂ ಪಕ್ಷಗಳ ನೂರಾರು ಬೆಂಬಲಿಗರು ಶಿವಪಾಲ್ ಅವರ ನಿವಾಸದ ಹೊರಗೆ "ಚಾಚಾ-ಭಟಿಜ ಜಿಂದಾಬಾದ್" ಎಂಬ ಘೋಷಣೆಯನ್ನು ಕೂಗಿದರು.

2016ರಲ್ಲಿ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿವಪಾಲ್ ಅವರನ್ನು ವಜಾಗೊಳಿಸುವುದರೊಂದಿಗೆ ಚಿಕ್ಕಪ್ಪ ಮತ್ತು ಯಾದವ್ ನಡುವಿನ ಸಂಬಂಧ ಹಳಸಿತ್ತು. ಅಖಿಲೇಶ್ ಅವರು ಜನವರಿ 2017 ರಲ್ಲಿ ಎಸ್ಪಿ ಅಧ್ಯಕ್ಷರಾದರು ಮತ್ತು ಶಿವಪಾಲ್ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಈ ಮೈತ್ರಿ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. 2022ರಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಬಹುಮತದ ಸರ್ಕಾರ ರಚಿಸಲಿದೆ. 'ಚಾಚಾ' ಭಟಿಜಾ' ಅಥವಾ 'ಬುವಾ ಭಟಿಜಾ', ಎಸ್ಪಿ ಅಥವಾ ಕಾಂಗ್ರೆಸ್ ಅಥವಾ ಬೇರೆ ಯಾರೇ ಮೈತ್ರಿ ಮಾಡಿಕೊಂಡರೂ ಉತ್ತರಪ್ರದೇಶದಲ್ಲಿ ಕಮಲ (ಬಿಜೆಪಿಯ ಚುನಾವಣಾ ಚಿಹ್ನೆ) ಮಾತ್ರ ಅರಳುತ್ತದೆ" ಎಂದು ಅವರು ಹೇಳಿದರು.
ಬಹಳ ದಿನಗಳಿಂದೆ ಶಿವಪಾಲ್ ಸಿಂಗ್ ಯಾದವ್ ಅವರು ಅಖಿಲೇಶ್ ಜೊತೆಗಿನ ಮೈತ್ರಿ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಅಖಿಲೇಶ್ ಯಾದವ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಶಿವಪಾಲ್ ಯಾದವ್ ಅವರು ತಮ್ಮ ಪಕ್ಷವನ್ನು ಎಸ್ಪಿಯೊಂದಿಗೆ ವಿಲೀನಗೊಳಿಸಲು ಸಿದ್ಧ ಎಂದು ನವೆಂಬರ್ನಲ್ಲಿ ಪಿಟಿಐಗೆ ತಿಳಿಸಿದ್ದರು.
ಸದ್ಯ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ (ಪಿಎಸ್ಪಿಎಲ್) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಸಮಾಜವಾದಿ ಪಕ್ಷವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ.
2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ ಚುನಾವಣೆ ಹೊಸ ರಣತಂತ್ರ ಒಬಿಸಿ ಮತಗಳತ್ತ ಅಖಿಲೇಶ್ ಚಿತ್ತವಿದ್ದು ಸಣ್ಣ ಪಕ್ಷಗಳೊಂದಿಗಿನ ಮೈತ್ರಿ ನಮ್ಮ ಪಕ್ಷವನ್ನು 400 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು ಎನ್ನುವ ವಿಶ್ವಾಸ ಅಖಿಲೇಶ್ ಅವರಿಗಿದೆ. ಹೀಗಾಗಿ ಬಿಜೆಪಿ ವಿರುದ್ಧ ಈ ಬಾರೀ ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಅಖಿಲೇಶ್ ಯಾದವ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ.











Click it and Unblock the Notifications