ಖಾಸಗಿ ಆಸ್ಪತ್ರೆಯಲ್ಲಿ ಸತ್ತನೆಂದು ಘೋಷಿಸಿದ್ದ ವ್ಯಕ್ತಿ ಸಮಾಧಿ ಎದುರು ಬದುಕಿದ!
ಲಖನೌ (ಉತ್ತರಪ್ರದೇಶ), ಜುಲೈ 2: ಸಮಾಧಿಗಾಗಿ ಹಳ್ಳ ತೋಡಲಾಗಿತ್ತು ಮತ್ತು ಇನ್ನೇನು ಆತನ ದೇಹವನ್ನು ಹೂಳಬೇಕಿತ್ತು. ಆಗ ದೇಹದಲ್ಲಿ ಕದಲಿಕೆ ಆದದ್ದನ್ನು ಕುಟುಂಬ ಸದಸ್ಯರು ಗಮನಿಸಿದರು. ಶೋಕಾಚರಣೆ ನಿಲ್ಲಿಸಲಾಯಿತು. ತಕ್ಷಣವೇ ಮೊಹ್ಮದ್ ಫರ್ಕಾನ್ ನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಆತನಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಯಿತು.
ಜೂನ್ ಇಪ್ಪತ್ತೊಂದರಂದು ಅಪಘಾತವಾಗಿ ಇಪ್ಪತ್ತು ವರ್ಷದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರದಂದು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಹಾಗೂ ಆಂಬುಲೆನ್ಸ್ ನಲ್ಲಿ ಮನೆಗೆ ದೇಹವನ್ನು ತರಲಾಯಿತು.
ದಿಗ್ಭ್ರಾಂತರಾದೆವು. ನಾವು ಅವನ ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಕೆಲವರು ಅವನ ಕಾಲಿನಲ್ಲಿ ಕದಲಿಕೆ ಕಂಡರು. ಆ ಕೂಡಲೇ ಫರ್ಕಾನ್ ನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ವೆಂಟಿಲೆಟರ್ ನ ಸಹಾಯದಲ್ಲಿ ಅವನನ್ನು ಇಡಲಾಗಿದೆ ಎಂದು ಫರ್ಕಾನ್ ನ ಸೋದರ ಮೊಹ್ಮದ್ ಇರ್ಫಾನ್ ಹೇಳಿದ್ದಾರೆ.

ನಾವು ಖಾಸಗಿ ಆಸ್ಪತ್ರೆಗೆ ಏಳು ಲಕ್ಷ ರುಪಾಯಿ ಪಾವತಿಸಿದ್ದೆವು. ನಮ್ಮ ಹತ್ತಿರ ಇನ್ನು ಹಣ ಇಲ್ಲ ಎಂದು ಹೇಳಿದಾಗ, ಫರ್ಕಾನ್ ಸಾವನ್ನಪ್ಪಿದ್ದಾನೆ ಎಂದು ಸೋಮವಾರ ಘೋಷಿಸಿದರು ಎಂದು ಅವರು ಹೇಳಿದ್ದಾರೆ.
ಲಖನೌನ ಮುಖ್ಯ ವೈದ್ಯಕೀಯ ಅಧಿಕಾರಿ ನರೇಂದ್ರ ಅಗರ್ವಾಲ್ ಮಾತನಾಡಿ, ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಹೇಳಿದ್ದಾರೆ. "ರೋಗಿಯ ಸ್ಥಿತಿ ಗಂಭೀರವಾಗಿ ಇರುವುದು ಹೌದು. ಆದರೆ ಮೆದುಳು ನಿಷ್ಕ್ರಿಯ ಆಗಿಲ್ಲ. ನಾಡಿ ಮಿಡಿತ, ರಕ್ತದೊತ್ತಡ ಹಾಗೂ ಸ್ಪಂದನೆ ಚೆನ್ನಾಗಿದೆ. ಜೀವರಕ್ಷಕ ಸಲಕರಣೆ ಸಹಾಯದಲ್ಲಿ ಆತನನ್ನು ಇರಿಸಲಾಗಿದೆ" ಎಂದು ಫರ್ಕಾನ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.












Click it and Unblock the Notifications