ಯುಪಿ ಚುನಾವಣೆ: ಎಎಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದ ಸಂಜಯ್ ಸಿಂಗ್
ಲಕ್ನೋ ಜನವರಿ 09: 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ಆರಂಭಿಸಿವೆ. ಈ ಸಮಯದಲ್ಲಿ ಆಮ್ ಆದ್ಮಿ ಪಕ್ಷವು ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಆಮ್ ಆದ್ಮಿ ಪಕ್ಷ ಇನ್ನು ಮುಂದೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಯುಪಿ ಉಸ್ತುವಾರಿ ಹಾಗೂ ಸಂಸದ ಸಂಜಯ್ ಸಿಂಗ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಈ ಬಾರಿ ಗೆಲ್ಲುವ ಗುರಿ ಹೊಂದಿರುವ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಹಲವಾರು ಸಣ್ಣ ಸಣ್ಣ ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಸಣ್ಣ ಪಕ್ಷಗಳನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷ ಬಲಗೊಳಿಸುತ್ತಿದ್ದಾರೆ. ಇದರಿಂದ ಉತ್ತರಪ್ರದೇಶದಲ್ಲಿ ಈ ಬಾರಿ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಆದರೆ, ಸಂಜಯ್ ಸಿಂಗ್ ಮಾತ್ರ ಯುಪಿಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಮತದಾರರನ್ನು ಆಕರ್ಷಿಸುವಲ್ಲಿ ಹಲವಾರು ಯೋಜನೆಗಳ ಭರವಸೆ ನೀಡುವ ಆಮ್ ಆದ್ಮಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದೇ ತಂತ್ರದೊಂದಿಗೆ ಪಂಜಾಬ್ ನಲ್ಲೂ ಆಡಳಿತಪಕ್ಷಗಳಿಗೆ ಸವಾಲು ಒಡ್ಡಿದೆ. ಉತ್ತರಪ್ರದೇಶದಲ್ಲಿ ಘಟಾನುಘಟಿ ಪಕ್ಷಗಳ ಪೈಪೋಟಿ ನಡುವೆ ಎಎಪಿ ಯಾರೊಂದಿಗೂ ಮೈತ್ರಿ ಸಾಧ್ಯವಿಲ್ಲ ಎಂದಿದೆ. ಈ ಹೇಳಿಕೆ ಉ.ಪ್ರದೇಶ ಚುನಾವಣೆಯತ್ತ ಎಲ್ಲರ ಚಿತ್ತ ನೆಡುವಂತೆ ಮಾಡಿದೆ.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಶನಿವಾರ ದಿನಾಂಕವನ್ನು ಪ್ರಕಟಿಸಿದೆ. ಪಂಚರಾಜ್ಯಗಳ ಪೈಕಿ 403 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪಂಚರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕೊವಿಡ್-19 ಹೊಸ ಶಿಷ್ಟಾಚಾರ ಮತ್ತು ನಿಯಮಗಳ ಪಾಲನೆಗೆ ಸೂಚಿಸಲಾಗಿದೆ. ಪಂಚರಾಜ್ಯ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ನೌಕರರನ್ನು ಮುಂಚೂಣಿಯ ಕಾರ್ಯಕರ್ತರು ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಅರ್ಹ ಅಧಿಕಾರಿಗಳಿಗೆ 'ಮುನ್ನೆಚ್ಚರಿಕೆಯ ಡೋಸ್' ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತದಲ್ಲಿ ಫೆಬ್ರವರಿ 10ರಂದು ಮತದಾನ, ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ, ಮೂರನೇ ಹಂತದಲ್ಲಿ ಫೆಬ್ರವರಿ 20ರಂದು, ನಾಲ್ಕನೇ ಹಂತದಲ್ಲಿ ಫೆಬ್ರವರಿ 23ರಂದು ಮತ್ತು ಐದನೇ ಹಂತದಲ್ಲಿ ಫೆಬ್ರವರಿ 27ರಂದು ಹಾಗೂ ಆರನೇ ಹಂತದಲ್ಲಿ ಮಾರ್ಚ್ 3ರಂದು ಮತದಾನ, ಏಳನೇ ಹಂತದಲ್ಲಿ ಮಾರ್ಚ್ 7ರಂದು ಮತದಾನ ನಡೆಯಲಿದೆ.
ಕೋವಿಡ್ ಮುಕ್ತ ಚುನಾವಣೆ ನಡೆಸುವ ಆಶಯ ವ್ಯಕ್ತಪಡಿಸಿರುವ ಕೇಂದ್ರ ಚುನಾವಣಾ ಆಯೋಗವು, ಜ.15ರವರೆಗೆ ಚುನಾವಣಾ ಮೆರವಣಿಗೆ, ರೋಡ್ ಶೋ, ಪಾದಯಾತ್ರೆ, ಪ್ರಚಾರ ಸಭೆಗಳಿಗೆ ನಿರ್ಬಂಧ ವಿಧಿಸಿದೆ. ನಾಮಪತ್ರ ಸಲ್ಲಿಕೆ ವೇಳೆಯೂ ಮೆರವಣಿಗೆ ನಡೆಸುವಂತಿಲ್ಲ ಎಂದು ಆಯೋಗ ಹೇಳಿದೆ. ಸುವಿಧಾ ಆ್ಯಪ್ ಮೂಲಕ ಆನ್ಲೈನ್ನಲ್ಲಿ ನಾಮಪತ್ರ ಸಲ್ಲಿಕೆ ಮಾಡಬಹುದು. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ. ಚುನಾವಣಾ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಚುನಾವಣೆಗೆ 900 ವೀಕ್ಷಕರ ನೇಮಕ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ತಿಳಿಸಬೇಕು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಬಗ್ಗೆ ಪಕ್ಷ ಕಾರಣ ನೀಡಬೇಕು. ಅಭ್ಯರ್ಥಿಗಳು ಆನ್ಲೈನ್ನಲ್ಲಿ ನಾಮಪತ್ರವನ್ನು ಸಲ್ಲಿಸಬಹುದು.
ಇನ್ನೂ ಉತ್ತರಪ್ರದೇಶದಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವಾರು ಕಸರತ್ತು ನಡೆಸಿವೆ. ಒಂದೆಡೆ ಸಿಎಂ ಯೋಗಿ ಆದಿತ್ಯನಾಥ್, ಇನ್ನೊಂದೆಡೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮದ್ಯೆ ತೀವ್ರ ಪೈಪೋಟಿ ಇದೆ. ಶತಾಯಗತಾಯ ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯಲು ಅಖಿಲೇಶ್ ಯಾದವ್ ಪಣ ತೊಟ್ಟಿದ್ದಾರೆ. ಇತ್ತ ಬಿಜೆಪಿ ಕೂಡ ಕಠಿಣ ಪೈಪೋಟಿ ನೀಡುವ ಮೂಲಕ ಚುನಾವಣಾ ಕಣಕ್ಕಿಳಿಯಲಿದೆ.
ಸಮಾಜವಾದಿ ಪಕ್ಷವು ಅಖಿಲೇಶ್ ಯಾದವ್ ಮತ್ತು ಅವರ ತಂದೆ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಪಕ್ಷದ ಸರ್ಕಾರಗಳ ಅವಧಿಯಲ್ಲಿ ಮಹಿಳೆಯರಿಗಾಗಿ ಕೈಗೊಂಡ ಉಪಕ್ರಮಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸಿದೆ. ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications