ತಬ್ಲಿಘಿಗಳ ಸಂಪರ್ಕದಿಂದ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಲಕ್ನೌ, ಏಪ್ರಿಲ್ 24: ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಬ್ಲಿಘಿಗಳ ಜೊತೆ ಸಂಪರ್ಕದಲ್ಲಿದ್ದ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಮದರಸಾ ವಿದ್ಯಾ ಸಂಸ್ಥೆಯ 13 ವಿದ್ಯಾರ್ಥಿಗಳಲ್ಲಿ ಕೊವಿಡ್ ಸೋಂಕು ದೃಢವಾಗಿದೆ. ಈ ವಿದ್ಯಾರ್ಥಿಗಳು ತಬ್ಲಿಘಿ ಸದಸ್ಯರ ಸಂಪರ್ಕದಲ್ಲಿದ್ದರು ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ಗುರುವಾರ ಒಟ್ಟು 50 ಮಾದರಿಗಳನ್ನು ಪರೀಕ್ಷಿಸಲಾಯಿತು. ಅದರಲ್ಲಿ 13 ಫಲಿತಾಂಶಗಳು ಪಾಸಿಟಿವ್ ಬಂದಿದೆ. ಈ ಎಲ್ಲರೂ ಕೂಲಿ ಬಜಾರ್ನಲ್ಲಿರುವ ಮದರಸಾ ವಿದ್ಯಾರ್ಥಿಗಳು. ಇದು ಕೊರೊನಾ ಹಾಟ್ಸ್ಪಾಟ್ ಪ್ರದೇಶವಾಗಿದ್ದು, ಇಲ್ಲಿ ಈಗಾಗಲೇ 30 ಜನರು ಕೊರೊನಾ ಪೀಡಿತರಿದ್ದರು ಎಂದು ವರದಿಯಾಗಿದೆ. ಈ 13 ವಿದ್ಯಾರ್ಥಿಗಳು ತಬ್ಲಿಘಿ ಸದಸ್ಯರ ಸಂಪರ್ಕಕ್ಕೆ ಬಂದಿದ್ದರು'' ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ ಅಶೋಕ್ ಶುಕ್ಲಾ ಮಾಹಿತಿ ನೀಡಿದ್ದಾರೆ.

ಅಂದ್ಹಾಗೆ, ಈ ವಿದ್ಯಾರ್ಥಿಗಳನ್ನು ಮದರಸಾದಲ್ಲಿ ಐಸೋಲೇಟ್ ಮಾಡಲಾಗಿತ್ತು. ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿತ್ತು. ಈಗ ಸೋಂಕು ದೃಢವಾದ್ದರಿಂದ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈವರೆಗೂ ಕಾನ್ಪುರದಲ್ಲಿ 107 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮೂರು ಜನರ ಸೋಂಕಿನಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 1510 ಜನರಿಗೆ ಸೋಂಕು ಪತ್ತೆಯಾಗಿದ್ದು, 24 ಜನ ಸಾವನ್ನಪ್ಪಿದ್ದಾರೆ.












Click it and Unblock the Notifications