ಯೋಗಿ ಸರ್ಕಾರದ ವಿರುದ್ಧ ಮಾಜಿ ಐಎಎಸ್ ಅಧಿಕಾರಿಗಳ ಕಿಡಿ
ನವದೆಹಲಿ, ಡಿಸೆಂಬರ್ 30: ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮತಾಂತರ ವಿರೋಧಿ ಕಾಯ್ದೆ (ಲವ್ ಜಿಹಾದ್) ವಿರುದ್ಧವಾಗಿ 104 ಮಾಜಿ ಐಎಎಸ್ ಅಧಿಕಾರಿಗಳು ಯೋಗಿ ಆದಿತ್ಯನಾಥ್ಗೆ ಪತ್ರ ಬರೆದಿದ್ದಾರೆ. ಲವ್ ಜಿಹಾದ್ ಕಾನೂನು ಸುಗ್ರೀವಾಜ್ಞೆಯು ರಾಜ್ಯವನ್ನು 'ದ್ವೇಷ ರಾಜಕಾರಣ, ವಿಭಜನೆ ಮತ್ತು ಧರ್ಮಾಂಧತೆಯ ಅಧಿಕೇಂದ್ರವಾಗಿ ಪರಿವರ್ತಿಸುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪತ್ರ ಬರೆದ ನಿವೃತ್ತ ಐಎಎಸ್ ಅಧಿಕಾರಿಗಳಲ್ಲಿ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪ್ರಧಾನಿ ಮಂತ್ರಿಗಳ ಮಾಜಿ ಸಲಹೆಗಾರ ಟಿಕೆಎ ನಾಯರ್ ಸೇರಿದ್ದಾರೆ.
ಈ ಕೂಡಲೇ ಅಕ್ರಮ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಮಾಜಿ ಅಧಿಕಾರಿಗಳು, 'ಮುಖ್ಯಮಂತ್ರಿ ಸೇರಿದಂತೆ ಎಲ್ಲ ರಾಜಕಾರಣಿಗಳೂ ಪ್ರಮಾಣವಚನ ಸ್ವೀಕಾರದ ವೇಳೆ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಹೇಳಿದ್ದವರು ಸಂವಿಧಾನದ ಬಗ್ಗೆ ನಿಮ್ಮನ್ನು ಮತ್ತೆ ಶಿಕ್ಷಣಕ್ಕೆ ಒಳಪಡಿಸಿಕೊಳ್ಳಬೇಕಿದೆ' ಎಂದು ಕಟುಪದಗಳಿಂದ ಹೇಳಿದ್ದಾರೆ.

'ಒಂದು ಕಾಲದಲ್ಲಿ ಗಂಗಾ-ಯಮುನಾ ನಾಗರಿಕತೆಯ ಕೇಂದ್ರವಾಗಿದ್ದ ಉತ್ತರ ಪ್ರದೇಶವು ಈಗ ದ್ವೇಷ ರಾಜಕಾರಣ, ವಿಭಜನೆ ಮತ್ತು ಧರ್ಮಾಂಧತೆಯ ಅಧಿಕೇಂದ್ರವಾಗಿದೆ. ಆಡಳಿತಾತ್ಮಕ ಸಂಸ್ಥೆಗಳು ಈಗ ಕೋಮು ವಿಷವಾಗಿ ಪರಿಣಮಿಸಿವೆ' ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಿಮ್ಮ ಆಡಳಿತವು ಉತ್ತರ ಪ್ರದೇಶದುದ್ದಕ್ಕೂ ಸ್ವತಂತ್ರ ದೇಶದಲ್ಲಿ ಸ್ವತಂತ್ರ ನಾಗರಿಕರಾಗಿ ತಮ್ಮ ಬದುಕನ್ನು ಸಾಗಿಸಲು ಬಯಸಿರುವ ಯುವ ಭಾರತೀಯರ ಮೇಲೆ ಸರಣಿ ಹೀನ ದೌರ್ಜನ್ಯಗಳನ್ನು ಎಸಗುತ್ತಿದೆ' ಎಂದು ಆರೋಪಿಸಿರುವ ಅವರು, ಉತ್ತರ ಪ್ರದೇಶದ ವಿವಿಧೆಡೆ ನಡೆದ ಕೆಲವು ದೌರ್ಜನ್ಯದ ಘಟನೆಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.












Click it and Unblock the Notifications