ಜೂಜುಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿದ ಪೊಲೀಸರು
ಕೊಪ್ಪಳ ಜನವರಿ 17: ಜೂಜಾಟ ಹಾಗೂ ಗ್ಯಾಂಬ್ಲಿಂಗ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿರುವ ಅನೇಕ ಘಟನೆ ನಡೆದಿದೆ. ಅಷ್ಟೇ ಅಲ್ಲದೇ ದಾಳಿ ಮಾಡಿರುವ ಪೊಲೀಸರು ಜೂಜುಕೋರರನ್ನು ಬಂಧಿಸಿರುವ ಪ್ರಕರಣಗಳು ಕೂಡ ನಡೆದಿದೆ. ಆದರೆ ಕೊಪ್ಪಳದಲ್ಲಿ ನಡೆದಿರುವ ಘಟನೆ ನಗೆಪಾಟಲಿಗೀಡಾಗಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಠಾಣೆ ಪೊಲೀಸರು ಕೋಳಿ ಅಂಕಣದಲ್ಲಿ ಜೂಜುಕೋರರನ್ನು ಬಂಧಿಸುವ ಬದಲು ಹುಂಜಗಳನ್ನು ಬಂಧಿಸಿದ್ದಾರೆ. ಕಾರಟಗಿ ತಾಲೂಕಿನ ಪನ್ನಾಪುರ ಹತ್ತಿರದ ಬಸವಣ್ಣ ಕ್ಯಾಂಪ್ನಲ್ಲಿ ಸಂಕ್ರಮಣ ನಿಮಿತ್ಯ ಕೋಳಿ ಕಾಳಗ ಏರ್ಪಡಿಸಲಾಗಿತ್ತು.
ಸೋಮವಾರ ಸಂಜೆ ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಯಾವ ಒಬ್ಬ ಜೂಜುಕೋರನನ್ನು ಬಂಧಿಸಿಲ್ಲ, ಬದಲಾಗಿ ಘಟನಾ ಸ್ಥಳದಲ್ಲಿದ್ದ ಹುಂಜಗಳನ್ನು ಬಂಧಿಸಿ, 9 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಸಿಕ್ಕಿರುವ ಹುಂಜಗಳನ್ನು ಠಾಣೆಗೆ ಕರೆತಂದಿರುವ ಪೊಲೀಸರು ಬಂಧಿಕಾನೆಯಲ್ಲಿ ಇಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ದಾಳಿ ವೇಳೆ ಜೂಜುಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಸಬೂಬು ಹೇಳಿದ್ದಾರೆ. ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬದ ನೆಪದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಡೆ ನಿಷೇಧಿತ ಕೋಳಿ ಕಾಳಗ ನಡೆಸಲಾಗುತ್ತದೆ. ಕೋಳಿ ಕಾಳಗದಲ್ಲಿ ಕೋಟ್ಯಂತರ ರೂಪಾಯಿ ಜೂಜು ವಹಿವಾಟು ನಡೆಯುತ್ತದೆ. ರಾಜಕೀಯ ಮುಖಂಡರೇ ಕೋಳಿ ಕಾಳಗ ಆಯೋಜನೆ ಮಾಡುತ್ತಾರೆ.
ಈ ಕಾರಣಕ್ಕೆ ಪೊಲೀಸರು ಅವರನ್ನು ಅಲ್ಲೇ ಬಿಟ್ಟು, ಕೋಳಿ, ಬೈಕ್ಗಳನ್ನು ಮಾತ್ರ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ನಾಟಕ ಆಡುತ್ತಿದ್ದಾರೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ, ಇದೇ ಠಾಣೆ ಸರಹದ್ದಿನಲ್ಲಿ ಬಿಜೆಪಿ ಮುಖಂಡನೊರರ್ವ ಕೋಳಿ ಕಾಳಗ ನಡೆಸಿ ಸಿಕ್ಕಿಬಿದ್ದಿದ್ದನು. ಅಷ್ಟಾದರೂ ಪೊಲೀಸರು ಮಾತ್ರ ಕಠಿಣ ಕ್ರಮ ಕೈಗೊಳ್ಳದೆ ಈ ರೀತಿ ನಗೆಪಾಟಿಲನ ಕೆಲಸ ಮಾಡಿದ್ದು, ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಾರಟಗಿ ಪೊಲೀಸರು, ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದಾರೆಂದು ಷರಾ ಬರೆದಿದ್ದಾರೆ. ಆರೋಪಿಗಳ ಬದಲಿಗೆ ಹುಂಜಗಳನ್ನು ಬಂಧಿಸಿಟ್ಟಿರುವ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕ ಪೊಲೀಸರೆಂದರೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಸರಾಗಿದ್ದು, ಕೆಲವು ಪೊಲೀಸರು ಮಾಡುವ ಕೆಲಸಕ್ಕೆ ಇಲಾಖೆಯ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ.












Click it and Unblock the Notifications