ಕೊಪ್ಪಳ; ಮಳೆಗಾಗಿ ನರೇಗಾ ಕೂಲಿ ಕಾರ್ಮಿಕರಿಂದ ಪ್ರಾರ್ಥನೆ
ಕೊಪ್ಪಳ, ಮೇ 30; ನರೇಗಾ ಕಾರ್ಯದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರು ಮುಂದಿನ ದಿನಗಳಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಗ್ರಾಮ ದೇವತೆಗೆ ಉಡಿ ತುಂಬಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮ ಪಂಚಾಯಿತಿಯ ಹಲಗೇರಿ ಗ್ರಾಮ ದೇವತೆ ಶಾಂಭವಿ ಕೆರೆ ಎಂದೇ ಹೆಸರಾದ ಕೆರೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಮಹಾತ್ಮಾ ಗಾಂಧಿ ನರೇಗಾದಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 7 ದಿನಗಳ ಅವಧಿಯ 410 ಕೂಲಿಕಾರರಿಗೆ ಕೂಲಿ ಕೆಲಸ ನೀಡಲಾಗಿತ್ತು.

ನರೇಗಾ ಕಾರ್ಯದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರು ಸೋಮವಾರ ಕೆಲಸ ಮುಗಿಸಿದ ಬಳಿಕ ಬರುವ ದಿನಗಳಲ್ಲಿ ಗ್ರಾಮದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲೆಂದು ಗ್ರಾಮ ದೇವತೆಗೆ ಉಡಿ ತುಂಬಿ ವಿಶೇಷ ಪೂಜೆ ನೆರವೇರಿಸಿದರು.
ನರೇಗಾ ಅನುಷ್ಠಾನ; ಕೂಲಿ ಕಾರ್ಮಿಕರು ವಿಶೇಷ ಪೂಜೆ ಸಲ್ಲಿಸುವಾಗ ಹಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶರಣಮ್ಮ ತಳವಾರ, ಗ್ರಾಮ ಪಂಚಾಯತಿ ಸದಸ್ಯ ಜಗದೀಶ ಓಜನಹಳ್ಳಿ, ಕಾಯಕ ಮಿತ್ರ ವಿಜಯಲಕ್ಷ್ಮಿ ಉಳಗೇರ, 11 ಕಾಯಕ ಬಂಧುಗಳು ಮತ್ತು ಇತರರು ಪಾಲ್ಗೊಂಡಿದ್ದರು.

ಕೊಪ್ಪಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ನಿರ್ದೇಶನದಂತೆ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಸ್ಥಳಕ್ಕೆ ಸಿಇಓ ರಾಹುಲ್ ರತ್ನಂ ಪಾಂಡೆಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನರೇಗಾ ಯೋಜನೆ ಅನುಷ್ಠಾನದ ಕುರಿತು ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ. ಬಹದ್ದೂರಬಂಡಿ, ಹೊಸಹಳ್ಳಿ, ಹುಲಿಗಿ, ಹಿಟ್ನಾಳ ಗ್ರಾಮ ಪಂಚಾಯತಿಯ ನರೇಗಾ ಕೂಲಿಕಾರರ ಜೊತೆಗೆ ರಾಹುಲ್ ರತ್ನಂ ಪಾಂಡೆ ಚರ್ಚಸಿದರು.
ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ವೈಯಕ್ತಿಕವಾಗಿ ಗಮನಹರಿಸಬೇಕು. ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆಯಲ್ಲಿ ಬಿಪಿ, ಶುಗರ್, ಸಣ್ಣ ಪುಟ್ಟ ಕಾಯಿಲೆಗಳಾದ ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಕುರಿತು ಮಾತ್ರೆಗಳನ್ನು ವಿತರಿಸಲಾಗುತ್ತದೆ ಎಂದು ಸಿಇಓಗೆ ಮಾಹಿತಿ ನೀಡಿದರು. ಕೂಲಿ ಹಣ ಪಾವತಿ, ಆರೋಗ್ಯ ತಪಾಸಣೆ, ಕೂಲಿ ಕೆಲಸ ನೀಡಿಕೆ ಕುರಿತು ಕೂಲಿ ಕಾರ್ಮಿಕರ ಜೊತೆ ಸಿಇಓ ಚರ್ಚಿಸಿದರು.
ನರೇಗಾ ಅನುಷ್ಠಾನದಲ್ಲಿ ಮೊದಲ ಸ್ಥಾನ; ಕೊಪ್ಪಳ ಜಿಲ್ಲೆ ನರೇಗಾ ಯೋಜನೆ ಅನುಷ್ಠಾನದಲ್ಲಿ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ನಿತ್ಯ ಲಕ್ಷಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಲಾಗಿದ್ದು, ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. 2022ರ ಏಪ್ರಿಲ್ 26ರ ಮಾಹಿತಿ ಅನ್ವಯ ರಾಜ್ಯದಲ್ಲಿ ನರೇಗಾ ಯೋಜನೆಯಡಿ 9,15,433 ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕೊಪ್ಪಳ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 1,08,389 ಜನರಿಗೆ ಕೆಲಸ ನೀಡಲಾಗಿದೆ.
ರಾಜ್ಯದಲ್ಲಿ ಕೊಪ್ಪಳದಲ್ಲಿ 1,08,389 ಕೂಲಿ ಕಾರ್ಮಿಕರು, ದ್ವೀತಿಯ ಸ್ಥಾನದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ 1,05,816, ಮೂರನೇ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ 94,590 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಳ್ಳಾರಿ 4, ಗದಗ 5 ಮತ್ತು ವಿಜಯನಗರ ಜಿಲ್ಲೆ 6ನೇ ಸ್ಥಾನದಲ್ಲಿದೆ.
ಏಪ್ರಿಲ್ 1ರಿಂದ ನರೇಗಾ ಯೋಜನೆಯಡಿ ನೀಡುವ ಕೂಲಿ ಮೊತ್ತವನ್ನು 316 ರೂ. ಗೆ ಹೆಚ್ಚಳ ಮಾಡಲಾಗಿದೆ. ಬೇಸಿಗೆ ಅವಧಿಯಲ್ಲಿ ಪ್ರತಿ ವರ್ಷ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಊರಲ್ಲಿ ಕೆಲಸವಿಲ್ಲದ ಕಾರಣ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರು. ಆದರೆ ಈ ಬಾರಿ ಅವರ ಗ್ರಾಮದಲ್ಲಿಯೇ ನರೇಗಾ ಯೋಜನೆಯಡಿ ಕೆಲಸ ನೀಡಿ ಗುಳೆ ತಡೆಯಲಾಗಿದೆ.











Click it and Unblock the Notifications