ಬಿಜೆಪಿ ಎಂದರೆ ಬೆಂಕಿ, ಜಗಳ ಹಚ್ಚುವ ಪಕ್ಷ : ದಿನೇಶ್ ಗುಂಡೂರಾವ್
ಕೊಪ್ಪಳ, ಡಿಸೆಂಬರ್ 14: ಬಿಜೆಪಿ ಎಂದರೆ ಬೆಂಕಿ (ಬಿ), ಜಗಳ (ಜೆ) ಹಚ್ಚುವ ಪಕ್ಷವೇ(ಪಿ) ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿಗೆ ಹೊಸ ಅರ್ಥ ನೀಡಿದರು.
ಕೊಪ್ಪಳ ಜಿಲ್ಲಾಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ
ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ' ಬಿಜೆಪಿ ಅತ್ಯಂತ ಬೇಜವಾಬ್ದಾರಿಯುತ ವಿರೋಧ ಪಕ್ಷ. ರಾಜ್ಯದಲ್ಲಿ ಸಾವುಗಳು ಸಂಭವಿಸಿದರೆ ಬಿಜೆಪಿಯವರು ರಾಜಕೀಯ ಮಾಡಲು, ಗಲಭೆ ಎಬ್ಬಿಸಲು ಅವಕಾಶ ಸಿಕ್ಕಿತು ಎಂದು ಖುಷಿಪಡುತ್ತಾರೆ' ಎಂದು ಹೇಳಿದರು.
'2012ರಿಂದ ಇಲ್ಲಿವರೆಗೆ ರಾಜ್ಯದಲ್ಲಿ ಸುಮಾರು 17- 18 ಕೊಲೆಗಳು ನಡೆದಿವೆ. ಅದರಲ್ಲಿ ಹಿಂದೂ ಸಂಘದ ಸದಸ್ಯರೂ ಇದ್ದಾರೆ, ಬೇರೆಯವರೂ ಇದ್ದಾರೆ. ಆರೋಪಿಗಳ ಸ್ಥಾನದಲ್ಲಿಯೂ ಅದೇ ಸಂಘಟನೆಗಳಿಗೆ, ಪಿಎಫ್ಐ ಸಂಘಟನೆಗೆ ಸೇರಿದವರಿದ್ದಾರೆ. ಆದರೆ ಇಂಥ ಅಪರಾಧ ಪ್ರಕರಣಗಳಲ್ಲಿ ಯಾವ ಕಾಂಗ್ರೆಸ್ ಕಾರ್ಯಕರ್ತರ ಹೆಸರೂ ಕೂಡ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
'ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ. ಚರ್ಚೆಗೆ ಅವರು ಸಿದ್ಧರಿಲ್ಲ ಎಂದ ಅವರು ರಾಜ್ಯಕ್ಕೆ ಕೇಂದ್ರ ಸರ್ಕಾರದ ಅನುದಾನ ಕೊಡುವಲ್ಲಿ ತಾರತಮ್ಯ ಆಗುತ್ತಿದೆ. ಈ ಬಗ್ಗೆ ಕೇಂದ್ರದ ಜತೆ ಬಿಜೆಪಿ ಮುಖಂಡ ಯಡಿಯೂರಪ್ಪ ಮಾತನಾಡಿದ್ದಾರೆಯೇ' ಎಂದು ಪ್ರಶ್ನಿಸಿದರು.