Gavi Siddeshwara Jatra : ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ 2023; ಸಿದ್ಧತೆ ಪರಿಶೀಲಿಸಿದ ಜಿಲ್ಲಾಡಳಿತ
ಕೊಪ್ಪಳ, ಜನವರಿ 03; ಕೊಪ್ಪಳ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿವೆ. ಜನವರಿ 8ರಂದು ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಐತಿಹಾಸಿಕ ಶ್ರೀ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೋತ್ಸವ ಸಿದ್ಧತೆಯನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಮತ್ತು ಎಸ್ಪಿ ಖುದ್ದಾಗಿ ಮಠದ ಆವರಣಕ್ಕೆ ತೆರಳಿ ಪರಿಶೀಲಿಸಿದರು. ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ಅಧಿಕಾರಿಗಳು ಮಠದ ಒಳಾಂಗಣದಲ್ಲಿ ಭಕ್ತರಿಗೆ ಏರ್ಪಾಡು ಮಾಡಿರುವ ವ್ಯವಸ್ಥೆಯನ್ನು ವೀಕ್ಷಣೆ ಮಾಡಿದರು.

ಬಳಿಕ ಅಧಿಕಾರಿಗಳು ಅನ್ನದಾಸೋಹ ನಡೆಯುವ ಸ್ಥಳಕ್ಕೆ ತೆರಳಿ ಕೌಂಟರ್ ಮೂಲಕ ಏರ್ಪಾಡು ಮಾಡಿದ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಮಠದ ಎದುರಿನ ಬಯಲು ಆವರಣಕ್ಕೆ ತೆರಳಿ, ಅಲ್ಲಿ ನಾನಾ ಅಂಗಡಿಗಳನ್ನು ಹಾಕಲು ಏರ್ಪಾಡು ಮಾಡಿದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಅಧಿಕಾರಿಗಳಿಗೆ ಸೂಚನೆ: ಜಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಹಲವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳು ಸೂಚಿಸಿದರು.
ಪ್ರಸಾದ ಸಿದ್ಧಗೊಳಿಸುವ ಸ್ಥಳದಲ್ಲಿ ಮತ್ತು ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಈ ಕುರಿತು ಅಧಿಕಾರಿಗಳು ಸಮರ್ಪಕ ಮೇಲ್ವಿಚಾರಣೆ ಮಾಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹೇಳಿದರು.

ತೇರು ಸಾಗುವ ಮಾರ್ಗದಲ್ಲಿ ಬರುವ ಅಪಾಯಕಾರಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಇದೆ ವೇಳೆ ಜಿಲ್ಲಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಜಾತ್ರೆಯು ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಹೇಳಿದರು.
ಕೊಪ್ಪಳ ಜಾತ್ರೆಯ ದಿನಾಂಕ; ಜನವರಿ 4ರಿಂದ 10ರ ತನಕ ಆರು ದಿನಗಳ ಕಾಲ ಗವಿಸಿದ್ದೇಶ್ವರ ಜಾತ್ರೆಯು ನಡೆಯಲಿದೆ. ಜನವರಿ 8ರಂದು ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದೆ.
ಕೋವಿಡ್ ಹಿನ್ನಲೆಯಲ್ಲಿ ಎರಡು ವರ್ಷಗಳ ಕಾಲ ಸರಳವಾಗಿ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಸಲಾಗಿತ್ತು. ಈ ಬಾರಿ ಸಂಭ್ರಮದಿಂದ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ; ಗವಿಸಿದ್ದೇಶ್ವರ ಶ್ರೀಗಳು ಪ್ರತಿ ವರ್ಷವೂ ಜಾತ್ರೆಯಲ್ಲಿ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಇದು ಪರಂಪರೆಯಾಗಿಯೂ ನಡೆದುಕೊಂಡು ಬಂದಿದೆ.
2023ರ ಜಾತ್ರೋತ್ಸವ ಅಂಗವಾಗಿ ಅಂಗಾಂಗ ದಾನ ಜಾಗೃತಿ ಜಾಥಾವನ್ನು ಆಯೋಜನೆ ಮಾಡಲಾಗಿದೆ. ಗವಿಮಠ ಸಂಸ್ಥಾನ ಹಾಗೂ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶ್ರೀ ಗವಿಸಿದ್ದೇಶ್ಚರ ಜಾತ್ರಾ ಮಹೋತ್ಸವ ಅಂಗವಾಗಿ ಅಂಗಾಂಗ ದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜನವರಿ 4ರಂದು ಆಯೋಜಿಸಲಾಗಿದೆ.
'ಸತ್ತ ಮೇಲೂ ಬದುಕುವ ಯೋಗ ಸಾಯುವವನಿಗೆ ಅಂಗಾಂಗ ಯೋಗ' ಎನ್ನುವ ಸಂದೇಶದಿಂದ ಮಠದ ಜಾಗೃತಿ ನಡಿಗೆ-2023ರಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಅಂಗಾಂಗ ದಾನ ಜಾಗೃತಿ ನಡಿಗೆಯು ಶ್ರೀ ಅಭಿನವ ಗವಿಸಿದ್ದೇಶ್ಚರ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ.
ಈ ಜಾಗೃತಿ ಜಾಥಾ ಕಾರ್ಯಕ್ರಮ ತಾಲೂಕು ಕ್ರೀಡಾಂಗಣದಿಂದ ಆರಂಭಗೊಂಡು ಅಶೋಕ ಸರ್ಕಲ್, ಗಡಿಯಾರ ಕಂಬ ಮಾರ್ಗವಾಗಿ ಶ್ರೀಮಠದವರೆಗೆ ನಡೆಯಲಿದೆ. ಜಾತ್ರೋತ್ಸವ ಮುಗಿಯುವವರೆಗೂ ಒಂದು ಸ್ಟಾಲ್ ಹಾಕಿ ಜಾಗೃತಿಗೆ ಮತ್ತು ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳ ಸಹಯೋಗ ಕೂಡ ಪಡೆದುಕೊಳ್ಳಲಾಗಿದೆ.












Click it and Unblock the Notifications