ಅಮಿತ್ ಶಾ ಭೇಟಿ ನಂತರದ ಒಂದೇ ವಾರದಲ್ಲಿ ಉತ್ತರ ಕೊಟ್ಟ ದೀದಿ
ಕೋಲ್ಕತ್ತಾ, ಡಿಸೆಂಬರ್ 29: ಪಶ್ಚಿಮ ಬಂಗಾಳದ ಬೋಲ್ಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯೋತ್ಸವ ಮೆರವಣಿಗೆ ನಡೆದ ಒಂದೇ ವಾರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕೂಡ ರೋಡ್ ಶೋ ನಡೆಸಿದ್ದಾರೆ. ಮಂಗಳವಾರ ರೋಡ್ ಶೋದಲ್ಲಿ ಭಾಗವಹಿಸಿ ಮುಂದಿನ ವರ್ಷದ ವಿಧಾನ ಸಭಾ ಚುನಾವಣೆಗೆ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ.
ಏಳು ಶಾಸಕರು ತಮ್ಮ ಪಕ್ಷ ತೊರೆದು ಹೊರನಡೆದಿದ್ದು, ಈ ಬಗ್ಗೆ ಬಿಜೆಪಿಗೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, "ರವೀಂದ್ರನಾಥ್ ಠ್ಯಾಗೂರ್ ಅವರ ಈ ನೆಲದಲ್ಲಿ ದ್ವೇಷದ ರಾಜಕಾರಣವನ್ನು ಎಂದೂ ಪ್ರಚೋದಿಸುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...
ಮೋದಿ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ; ಮಮತಾ ಬ್ಯಾನರ್ಜಿ
"ತೃಣಮೂಲ ಕಾಂಗ್ರೆಸ್ ಅನ್ನು ಖರೀದಿಸಿಲ್ಲ"
ಬಿಜೆಪಿ ಮೇಲೆ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, "ಬಿಜೆಪಿ ಹೊರಗಿನ ಪಕ್ಷ" ಎಂದು ಕರೆದಿದ್ದಾರೆ. ಕೆಲವು ಶಾಸಕರನ್ನು ಖರೀದಿಸುವ ಮೂಲಕ, ಅದೂ ಪಕ್ಷದ ಮಟ್ಟದಲ್ಲಿ ಕೊಳೆತು ಹೋದಂಥವರನ್ನು ಖರೀದಿಸಿದ ಮಾತ್ರಕ್ಕೆ ಇಡೀ ತೃಣಮೂಲ ಕಾಂಗ್ರೆಸ್ ಅನ್ನೇ ಖರೀದಿಸಿದಿರಿ ಎಂದುಕೊಳ್ಳಬೇಡಿ" ಎಂದು ಹತ್ತು ದಿನಗಳ ಹಿಂದೆ ತಮ್ಮ ಪಕ್ಷ ತೊರೆದು ಹೋದ ಏಳು ಶಾಸಕರ ಕುರಿತು ಹೇಳಿದ್ದಾರೆ.
"ನಮ್ಮ ನೆಲದಲ್ಲಿ ಇವೆಲ್ಲಾ ನಡೆಯುವುದಿಲ್ಲ"
ದ್ವೇಷ ಹಾಗೂ ನಕಲಿ ರಾಜಕಾರಣವನ್ನು ಮಾಡಿಕೊಂಡು ಪಶ್ಚಿಮ ಬಂಗಾಳವನ್ನು ಒಡೆಯಲು ಹೊಂಚು ಹಾಕಿದ್ದೀರ. ಚಿನ್ನದ ಬಂಗಾಳ ಎಂದು ಕರೆಸಿಕೊಂಡಿರುವ ರವೀಂದ್ರನಾಥ್ ಠ್ಯಾಗೂರ್ ಅವರ ಈ ನೆಲದಲ್ಲಿ ಇವೆಲ್ಲಾ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ: ಖ್ಯಾತ ಜ್ಯೋತಿಷಿಯ ಭವಿಷ್ಯ
"ಪಶ್ಚಿಮ ಬಂಗಾಳ ಈಗಾಗಲೇ ಚಿನ್ನದ ಬಂಗಾಳವಾಗಿದೆ"
ಮಹಾತ್ಮಾ ಗಾಂಧಿ ಬಗ್ಗೆ ಯಾರು ಗೌರವವಿಟ್ಟುಕೊಂಡಿಲ್ಲವೋ ಅವರು ಪಶ್ಚಿಮ ಬಂಗಾಳವನ್ನು ಕಟ್ಟುವ ಕುರಿತು ಮಾತನಾಡುತ್ತಿದ್ದಾರೆ. ಪಶ್ಚಿಮ ಬಂಗಾಳ ಈಗಾಗಲೇ ಚಿನ್ನದ ಬಂಗಾಳವಾಗಿದೆ. ನಾವು ಮಾಡಬೇಕಿರುವ ಒಂದೇ ಕೆಲಸ ಎಂದರೆ, ಬಿಜೆಪಿಯಂಥ ಕೋಮುವಾದಿಗಳಿಂದ ಈ ಚಿನ್ನದಂಥ ಸ್ಥಳವನ್ನು ಕಾಪಾಡಿಕೊಳ್ಳುವುದು ಎಂದಿದ್ದಾರೆ.
"ಕ್ಯಾಂಪಸ್ ನಲ್ಲೂ ಕೋಮುವಾದಿ ರಾಜಕಾರಣ"
ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿಯೂ ಕೋಮುವಾದಿ ರಾಜಕೀಯ ಮಾಡಲು ಮುಂದಾಗುತ್ತಿರುವುದನ್ನು ನೋಡಿ ಬೇಸರವಾಗಿದೆ. ಈ ನಡೆಯಿಂದ ಶ್ರೀಮಂತ ಪರಂಪರೆಗೆ ಚ್ಯುತಿ ತರುತ್ತಿದ್ದಾರೆ ಎಂದು ದೂರಿದರು. ಮಂಗಳವಾರ ಬೋಲ್ಪುರದಲ್ಲಿ ನಾಲ್ಕು ಕಿಲೋಮೀಟರ್ ರೋಡ್ ಶೋ ಹಮ್ಮಿಕೊಂಡಿದ್ದು, ಇದರಲ್ಲಿ ಅಮಿತ್ ಶಾ ಭೇಟಿ ನಂತರ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಜನಪದ ಗಾಯಕ ಬಸುದೇವ್ ದಾಸ್ ಬೌಲ್ ಅವರಿಂದ ಹಾಡು ಹಾಡಿಸಿದರು.