ಮಮತಾರನ್ನು ನಂದಿಗ್ರಾಮದಲ್ಲಿ ಸುಲಭವಾಗಿ ಸೋಲಿಸುವೆ ಎಂದ ಸುವೇಂದು
ಕೋಲ್ಕತ್ತಾ, ಮಾರ್ಚ್ 07: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಅಭ್ಯರ್ಥಿಯಾಗಿರುವ ಸಿಎಂ ಮಮತಾ ಬ್ಯಾನರ್ಜಿಯನ್ನು ನಂದಿ ಗ್ರಾಮದಲ್ಲಿ ಸುಲಭವಾಗಿ ಸೋಲಿಸುತ್ತೇನೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನಂದಿಗ್ರಾಮಕ್ಕೆ ಹೊರಗಿನವರಾಗಿರುವುದರಿಂದ ಅವರನ್ನು ಚುನಾವಣೆಯಲ್ಲಿ ಸೋಲಿಸುವುದು ಶೇ.200ರಷ್ಟು ಖಚಿತ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮಮತಾ ಅವರು ತಮ್ಮ ವಿಧಾನಸಭಾ ಕ್ಷೇತ್ರ ಕೋಲ್ಕತ್ತದ ಭವಾನಿಪುರ ಬಿಟ್ಟು ಈ ಬಾರಿ ನಂದಿಗ್ರಾಮದಿಂದ ಕಣಕ್ಕಿಳಿಯುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು, ಅದರಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುವುದು ಖಚಿತವಾಗಿತ್ತು.
ಶನಿವಾರ ಬಿಜೆಪಿಯು 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡಿರುವ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಲಾಗಿದೆ.

ಮಮತಾ ನಂದಿಗ್ರಾಮಕ್ಕೆ ಹೊರಗಿನವರು
ನೀವು ಭವಾನಿಪುರ ಕ್ಷೇತ್ರ ಬಿಟ್ಟು ಯಾಕೆ ಓಡಿ ಹೋಗುತ್ತಿದ್ದೀರಿ, 2019ರ ಲೋಕಸಭೆ ಚುನಾವಣೆಯಲ್ಲಿ ಮಿತ್ರಾ ಇನ್ಸ್ಟಿಟ್ಯೂಟ್ ಬೂತ್ನಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು ಎಂದೇ?, ನಿಮ್ಮ ಸ್ವಂತ ಕ್ಷೇತ್ರದಲ್ಲೇ ನಿಮಗೆ ಗೆಲ್ಲಲಾಗದು ಎಂದು ಬಿಜೆಪಿ ಪ್ರಚಾರ ಸಭೆಯಲ್ಲಿ ಹೇಳಿದರು.

ನಂದಿಗ್ರಾಮದಲ್ಲಿ ಲಕ್ಷ್ಮಣ್ ಸೇಠ್ ಅವರನ್ನು ಸೋಲಿಸಿದ್ದೇನೆ
ನಂದಿಗ್ರಾಮದಲ್ಲಿ ಲಕ್ಷ್ಮಣ್ ಸೇಠ್ ಅವರನ್ನು ಸೋಲಿಸಿದ್ದೇನೆ, ಈ ಬಾರಿ ಗೌರವಾನ್ವಿತರನ್ನು ಸೋಲಿಸಲಿದ್ದೇನೆ, ಅವರು ನಂದಿಗ್ರಾಮಕ್ಕೆ ಹೊರಗಿನವರು, ನಾನು ಆ ಪ್ರದೇಶಕ್ಕೆ ಮಣ್ಣಿನ ಮಗ ಎಂದರು.

ಸಿಬಿಐ ಸರಿಯಾದುದನ್ನೇ ಮಾಡಿದೆ
ಒಂದು ಕುಟುಂಬದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ದೊಡ್ಡ ಉದ್ಯಮಿಗಳಿಗೆ ಜಾಗ ನೀಡಲಾಗಿದೆ. ಇದರಿಂದಾಗಿ ಸಣ್ಣಪುಟ್ಟ ಉದ್ಯಮಿಗಳು ಉದ್ಯಮ ಮುಚ್ಚುವಂತಾಗಿದೆ ಎಂದು ಅವರು ದೂರಿದ್ದಾರೆ. ಬ್ಯಾನರ್ಜಿ ಕುಟುಂಬವನ್ನು ಪ್ರಶ್ನಿಸುವ ಮೂಲಕ ಸಿಬಿಐ ಸರಿಯಾದುದನ್ನೇ ಮಾಡಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಯಾವಾಗ?
ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ.











Click it and Unblock the Notifications