ಟಿಎಂಸಿ ಕಾರ್ಯಕರ್ತರಿಗೆ ನಾಯಿಗೆ ಬಡಿದಂತೆ ಬಡಿಯುತ್ತಾರೆ ಎಂದ ಮಾಜಿ ಪೊಲೀಸಮ್ಮ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಮೇ 5: ಪಶ್ಚಿಮ ಬಂಗಾಲದ ಘಟಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ತೃಣಮೂಲ್ ಕಾಂಗ್ರೆಸ್ ಕಾರ್ಯಕರ್ತರಿಗೆ ಧಮಕಿ ಹಾಕಿದ್ದಾರೆ. "ನೀವು ಜನರನ್ನು ಹೆದರಿಸುತ್ತಾ ಇದ್ದೀರಿ. ಸರಿಯಾದ ಮತದಾನಕ್ಕೆ ಅವಕಾಶ ನೀಡಲ್ಲ. ಜನರನ್ನು ಹೆದರಿಸಬೇಡಿ. ನಿಮ್ಮನ್ನು (ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು) ಮನೆಯಿಂದ ಹೊರಗೆಳೆದು ನಾಯಿಗೆ ಬಡಿದಂತೆ ಬಡಿಯುತ್ತಾರೆ" ಎಂದು ಘೋಷ್ ಹೇಳಿದ್ದಾರೆ.
ನಿಮ್ಮನ್ನು ಹೊಡೆಸಲು ಉತ್ತರಪ್ರದೇಶದಿಂದ ಒಂದು ಸಾವಿರ ಜನರನ್ನು ಕರೆಸುತ್ತೇನೆ ಎಂದು ಹೇಳಿದ್ದಾರೆ. ಘೋಷ್ ಅವರು ಒಂದು ಕಾಲಕ್ಕೆ ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದರು. ಪಶ್ಚಿಮ ಮಿಡ್ನಾಪುರ್ ನಿಂದ ಹೊರಗೆ ವರ್ಗಾವಣೆ ಮಾಡಿದ ಮೇಲೆ ಎರಡು ವರ್ಷದ ಹಿಂದೆ ರಾಜೀನಾಮೆ ನೀಡಿದ್ದರು. ಆ ನಂತರ ಆಕೆ, ರಾಜ್ಯದ ಸಿಐಡಿಯಿಂದ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಅರೋಪ ಮಾಡಿದ್ದರು.
ಘೋಷ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಜನರನ್ನು ಹೆದರಿಸುವುದನ್ನು ಬಿಡಿ ಎಂದಿದ್ದಾರೆ. "ನೀವು ಸೇವೆಯಲ್ಲಿದ್ದಾಗ ನನಗೆ ಕಳುಹಿಸಿದ್ದ ಟೆಕ್ಸ್ಟ್ ಮೆಸೇಜ್ ಗಳನ್ನು ಜನರ ಜತೆ ಹಂಚಿಕೊಂಡರೆ ನೀವು ಎಲ್ಲಿಯೂ ಇರಲ್ಲ. ನಿಮ್ಮ ಬಹಳ ಹಿಂದೆಯೇ ನಿಮ್ಮನ್ನು ಬಂಧಿಸಬೇಕಿತ್ತು'' ಎಂದು ಬ್ಯಾನರ್ಜಿ ಹೇಳಿದ್ದಾರೆ.

ಬಂಗಾಲದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರು ಮಾಜಿ ಪೊಲೀಸ್ ಅಧಿಕಾರಿ ಭಾರತಿ ಘೋಷ್ ರನ್ನು ಬೆಂಬಲಿಸಿದ್ದಾರೆ. ಆಕೆ ಸರಿಯಾಗಿಯೇ ಹೇಳಿದ್ದಾರೆ ಎಂದಿದ್ದಾರೆ. ಇನ್ನು ತೃಣಮೂಲ ಕಾಂಗ್ರೆಸ್ ನಿಂದ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದು, ಆಕೆ ಅಭ್ಯರ್ಥಿತನವನ್ನೇ ರದ್ದು ಮಾಡಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications