ರೈಲು ಡಿಕ್ಕಿಯಾಗಿ ಆನೆ ಸಾವು: ಭೀಕರ ಘಟನೆಯ ವೈರಲ್ ವಿಡಿಯೋ
ಕೋಲ್ಕತಾ, ಸೆಪ್ಟೆಂಬರ್ 29: ವೇಗವಾಗಿ ಸಾಗುತ್ತಿದ್ದ ರೈಲು ಹಳಿ ದಾಟುತ್ತಿದ್ದ ಆನೆಗೆ ಡಿಕ್ಕಿ ಹೊಡೆದ ಮನಕಲಕುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ. ಸೆ. 27ರಂದು ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಆನೆ ಶನಿವಾರ ಮೃತಪಟ್ಟಿದೆ.
ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಭಾರತದಲ್ಲಿ ಹೊಸದಲ್ಲ. ಪಶ್ಚಿಮ ಬಂಗಾಳದ ಡೂವರ್ಸ್ ವನ್ಯಜೀವಿ ಪ್ರದೇಶದಲ್ಲಿ ಈ ರೀತಿಯ ಅನೇಕ ಘಟನೆಗಳು ಇತ್ತೀಚೆಗೆ ನಡೆದಿವೆ. ಆನೆಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಭೀಕರವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಬಂಗಾಳದಲ್ಲಿರುವ ಸಿಲಿಗುರಿಯಿಂದ ಧುಬ್ರಿಗೆ ತೆರಳುತ್ತಿದ್ದ 75741 ಸಂಖ್ಯೆಯ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಶುಕ್ರವಾರ ಬೆಳಿಗ್ಗೆ ಎಂದಿನಂತೆ ಜಲ್ಪೈಗುರಿ ಜಿಲ್ಲೆಯನ್ನು ಹಾದು ಬನರ್ಹಾಟ್ ಮತ್ತು ನಗ್ರಾಕಟಾ ನಡುವೆ ಸಂಚರಿಸುತ್ತಿತ್ತು. ಬೆಳಿಗ್ಗೆ 8.30ರ ವೇಳೆಗೆ ರೈಲು ಹಳಿಯನ್ನು ದಾಟಿ ಕಾಡಿನ ಮತ್ತೊಂದು ಬದಿಗೆ ಪ್ರಯತ್ನಿಸುತ್ತಿದ್ದ ಆನೆಗೆ ರೈಲಿನ ಎಂಜಿನ್ ಬಲವಾಗಿ ಡಿಕ್ಕಿ ಹೊಡೆದಿದೆ. ರೈಲು ಅಪ್ಪಳಿಸಿದ ವೇಗಕ್ಕೆ ಆನೆ ಉರುಳಿ ಬಿದ್ದಿದ್ದು ತೀವ್ರ ಗ್ರಾಯಗೊಂಡಿತ್ತು.

ಮೇಲೇಳಲಾಗದೆ ಆನೆಯ ನರಳಾಟ
ಆನೆಯ ಕಾಲು, ಹೊಟ್ಟೆ ಭಾಗದ ಚರ್ಮ ಕಿತ್ತು ಬಂದಿದ್ದು ಮಾತ್ರವಲ್ಲದೆ, ದೇಹದಿಂದ ಮಾಂಸ ಕೂಡ ಹೊರಬಂದಿತ್ತು. ಬಿದ್ದ ಆನೆ ಮೇಲೇಳಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಗಾಯಗೊಂಡಿದ್ದ ಆನೆ ನೋವಿನಿಂದ ಒದ್ದಾಡುತ್ತಿತ್ತು. ಬಳಿಕ ಕಷ್ಟ ಪಟ್ಟು ತೆವಳುತ್ತಲೇ ರೈಲ್ವೆ ಹಳಿಯಿಂದ ಪಕ್ಕಕ್ಕೆ ಜಾರಿಕೊಂಡಿತು. ಈ ಮನಕಲಕುವ ಸನ್ನಿವೇಶದ 45 ಸೆಕೆಂಡುಗಳ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಫಲಕಾರಿಯಾಗದ ಚಿಕಿತ್ಸೆ
ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ವೈದ್ಯರು ಮತ್ತು ಇತರೆ ಸಿಬ್ಬಂದಿ ತಂಡ ಸ್ಥಳಕ್ಕೆ ಧಾವಿಸಿತು. ಜತೆಗೆ ಕೆಲವು ಸಾಕಾನೆಗಳನ್ನು ಕೂಡ ಕರೆದೊಯ್ದು ಆನೆಯನ್ನು ಮೇಲೆತ್ತಲು ಪ್ರಯತ್ನಿಸಲಾಯಿತು. ತಕ್ಷಣವೇ ಚಿಕಿತ್ಸೆ ನೀಡಿ ರಕ್ತಸ್ರಾವವಾಗದಂತೆ ತಡೆಯಲು ಕ್ರಮ ತೆಗೆದುಕೊಳ್ಳಲಾಯಿತು. ಆದರೆ ಆನೆಯ ದೇಹದೊಳಗೆ ಭಾರಿ ಪೆಟ್ಟು ಬಿದ್ದಿತ್ತು. ಎಲ್ಲೆಲ್ಲಿ ಗಾಯವಾಗಿದೆ ಎಂಬುದನ್ನು ತಿಳಿಯವುದೂ ಕಷ್ಟವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆನೆ ಮೃತಪಟ್ಟಿತು.

ಆನೆ ದಾರಿಗೆ ಅಡ್ಡ ಬಂದಿರುವುದು ಮನುಷ್ಯ
ಆನೆಯ ಸಾವಿಗೆ ಸಿನಿಮಾ ಕಲಾವಿದರು ಸೇರಿದಂತೆ ಅನೇಕರು ನೋವು ಹಂಚಿಕೊಂಡಿದ್ದಾರೆ. ಆನೆಗಳು ನೂರಾರು ವರ್ಷಗಳಿಂದ ತಮ್ಮ ದಾರಿಯನ್ನು ಕಂಡುಕೊಂಡಿರುತ್ತವೆ. ಆನೆಗಳು ಓಡಾಡದಂತೆ ಅದಕ್ಕೆ ವಿವಿಧ ಕ್ರಮಗಳನ್ನು ತೆಗೆದುಕೊಂಡಿದ್ದರೂ ಅವರು ತಮ್ಮ ಪಥವನ್ನು ಬದಲಿಸುವುದಿಲ್ಲ. ಆದರೆ ಆನೆಗಳು ಅಡ್ಡಾಡುವ ದಾರಿಯಲ್ಲಿಯೇ ರಸ್ತೆ, ರೈಲು ಮಾರ್ಗ, ಕಟ್ಟಡಗಳನ್ನು ನಿರ್ಮಿಸಿಕೊಂಡಿರುತ್ತೇವೆ. ಆನೆಯ ಪೀಳಿಗೆಗಳು ದಾಟಿದರೂ ಅವರು ಅದೇ ಹಾದಿಯಲ್ಲಿ ಸಾಗುವುದರಿಂದ ಈ ಸಂಘರ್ಷಗಳು ಸಹಜ ಎನ್ನುವಷ್ಟು ನಡೆಯುತ್ತಿರುತ್ತವೆ.

ರಣದೀಪ್ ಹೂಡಾ ಮನವಿ
ಈ ವಿಡಿಯೋ ಹಂಚಿಕೊಂಡಿರುವ ನಟ ರಣದೀಪ್ ಹೂಡಾ, ಆನೆಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಇಂತಹ ಅಪಘಾತಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಹಾಗೂ ಇಂತಹ ಭೀಕರ ಅಪಘಾತಗಳು ಮುಂದೆ ಉಂಟಾಗದಂತೆ ಎಚ್ಚರ ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ರೈಲ್ವೆ ಇಲಾಖೆ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದಾರೆ.

ವೇಗ ಇಳಿಕೆಯಾದರೂ ಪ್ರಯೋಜನವಿಲ್ಲ
ಬನರ್ಹಾಟ್-ನಗ್ರಾಕಟಾ ರೈಲು ಮಾರ್ಗವು ಪ್ರಮುಖ ಆನೆ ಕಾರಿಡಾರ್ ಆಗಿದೆ. ಇಲ್ಲಿ ಆನೆಗೆ ರೈಲು ಡಿಕ್ಕಿ ಹೊಡೆಯುವ ಘಟನೆಗಳು ಹಲವು ಬಾರಿ ನಡೆದಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರೈಲ್ವೆ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ತಜ್ಞರು ಅನೇಕ ಸಭೆಗಳನ್ನು ನಡೆಸಿ ಚರ್ಚಿಸಿದ್ದಾರೆ. 2015-16ರಲ್ಲಿ ರೈಲುಗಳ ಗರಿಷ್ಠ ವೇಗಮಿತಿಯನ್ನು ಗಂಟೆಗೆ 25 ಕಿಮೀಗೆ ಇಳಿಸಲಾಗಿತ್ತು. ಈ ಭಾಗದಲ್ಲಿ ಆನೆಗಳು ಗಾಯಗೊಳ್ಳುವುದು ಮತ್ತು ಸಾವಿಗೀಡಾಗುವುದರ ಪ್ರಮಾಣ ಕಡಿಮೆಯಾಗಿರುವುದನ್ನು ಕಂಡು ವೇಗಮಿತಿಯನ್ನು ಹಗಲಿನ ವೇಳೆ ಗಂಟೆಗೆ 50 ಕಿ.ಮೀ.ಯಷ್ಟು ಹೆಚ್ಚಿಸಲಾಯಿತು.

ಏರುತ್ತಲೇ ಇದೆ ಆನೆಗಳ ಸಾವು
2013 ರಿಂದ 2019ರ ಜೂನ್ ಅವಧಿಯಲ್ಲಿ 67 ಆನೆಗಳು ರೈಲು ಡಿಕ್ಕಿಯಾಗಿ ಸಾವಿಗೀಡಾಗಿವೆ. 2018ರ ಜುಲೈನಲ್ಲಿ ಅಪಘಾತವೊಂದು ನಡೆದ ಬಳಿಕ ಡೂವರ್ಸ್ ಪ್ರದೇಶದಲ್ಲಿನ ಚಲ್ಸಾ ಮತ್ತು ಬನಾರ್ಹಟ್ ನಿಲ್ದಾಣಗಳ ನಡುವಿನ 15 ಕಿಮೀ ದೂರದವರೆಗೆ 24 ಗಂಟೆಯೂ ವೇಗ ಮಿತಿಯ ನಿರ್ಬಂಧ ವಿಧಿಸಲಾಗಿದೆ. 2004ರಲ್ಲಿ ಈ ಮಾರ್ಗವನ್ನು ಮೀಟರ್ ಗೇಜ್ನಿಂದ ಬ್ರಾಡ್ಗೇಜ್ಗೆ ಪರಿವರ್ತಿಸಲಾಗಿತ್ತು. ಇದರ ಬಳಿಕ ಇಲ್ಲಿ ಓಡಾಡುವ ರೈಲುಗಳ ಸಂಖ್ಯೆ ಹೆಚ್ಚಳವಾಗಿದೆ. ಜತೆಗೆ ಆನೆಗಳ ಸಾವಿನ ಸಂಖ್ಯೆಯೂ ಏರಿಕೆಗೆ ಕೂಡ ಕಾರಣವಾಗಿದೆ.
ಘಟನೆಯ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:












Click it and Unblock the Notifications