ಜನರನ್ನು ಬಿಜೆಪಿಯಿಂದ ದೂರವಿಡಲು ಮಮತಾ ಮಾಡಿದ ಪ್ಲ್ಯಾನ್ ಸಕ್ಸಸ್
ಕೋಲ್ಕತಾ, ಆಗಸ್ಟ್ 3: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ 'ಚುನಾವಣಾ ಚಾಣಕ್ಯ' ಪ್ರಶಾಂತ್ ಕಿಶೋರ್ ಅವರು ಮಮತಾ ಬ್ಯಾನರ್ಜಿ ಅವರಿಗೆ ನೀಡಿರುವ ಐಡಿಯಾ ಕೆಲಸ ಮಾಡುವ ಸೂಚನೆ ನೀಡಿದೆ.
ಬಿಜೆಪಿಯ ಸೆಳೆತಕ್ಕೆ ಒಳಗಾಗುತ್ತಿರುವ ಜನರನ್ನು ಹಿಡಿದಿಟ್ಟುಕೊಳ್ಳಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರಂಭಿಸಿರುವ 'ದೀದಿಗೆ ಹೇಳಿ' ಯೋಜನೆಯಡಿ ಪ್ರಶಾಂತ್ ಕಿಶೋರ್ ನಡೆಸುತ್ತಿರುವ ಐ-ಪ್ಯಾಕ್ ಕಾಲ್ ಸೆಂಟರ್ಗೆ ಕರೆಗಳ ಮಹಾಪೂರವೇ ಹರಿದುಬರುತ್ತಿದೆ. ಮೂರು ದಿನಗಳಲ್ಲಿಯೇ ಸಾವಿರಾರು ಮಂದಿ ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ಅಭಿಪ್ರಾಯ, ದೂರು ಹಂಚಿಕೊಂಡಿದ್ದಾರೆ.
ಈ ಕರೆಗಳಲ್ಲಿ ಹೆಚ್ಚಿನವು ತೃಣಮೂಲ ಕಾಂಗ್ರೆಸ್ನ ಪ್ರಮುಖ ವಿರೋಧಪಕ್ಷವಾಗಿದ್ದ ಸಿಪಿಎಂಅನ್ನು ತೊರೆದು ಇತ್ತೀಚೆಗಷ್ಟೇ ಟಿಎಂಸಿ ಸೇರಿದವರ ಕುರಿತದ್ದಾಗಿದೆ. ಯಾವುದೇ ಹಿನ್ನೆಲೆಯನ್ನು ಪರಿಶೀಲನೆ ಮಾಡದೆಯೇ ಸಿಪಿಎಂನಿಂದ ಬಂದವರನ್ನು ಟಿಎಂಸಿಗೆ ಸೇರಿಸಿಕೊಂಡಿದ್ದರ ಕುರಿತು ಜನರು ಕರೆ ಮಾಡಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಈ ಕರೆಗಳನ್ನು ನಿರ್ವಹಿಸುವ ತಂಡ ತಿಳಿಸಿದೆ.

ತೃಣಮೂಲ ಕಾಂಗ್ರೆಸ್ನ ಹಿರಿಯ ಮತ್ತು ಮೂಲ ನಾಯಕರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಪ್ರಾಮಾಣಿಕರಾಗಿ ಬದ್ಧರಾಗಿದ್ದಾರೆ. ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನೆ ಹೊಂದಿದ್ದಾರೆ. ಆದರೆ, ಹೊಸದಾಗಿ ಸೇರಿಕೊಂಡವರು ವಿವಿಧ ಸಂಘ, ಸಂಸ್ಥೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಆತಂಕಗಳು ವ್ಯಕ್ತವಾಗಿದೆ.
ಸಹಾಯವಾಣಿ ಆರಂಭಿಸಿದ ಮೊದಲ ದಿನವೇ 700ಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದಾರೆ. ಹೊಸ ತೃಣಮೂಲ ಕೇಡರ್ ಬಗ್ಗೆ ದೂರುಗಳನ್ನು ನೀಡಿದ್ದು, ಅವರು ಅಪ್ರಾಮಾಣಿಕರು ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಗಂಟೆಗೇ 17,000-18,000 ಸರಾಸರಿ ಕರೆಗಳು ಬರುತ್ತಿವೆ ಎಂದು ಐ-ಪ್ಯಾಕ್ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಯೋಜನೆಗಳ ಕುರಿತಾದ ಸಮಸ್ಯೆಗಳಿಗೂ ಅಧಿಕ ಕರೆಗಳು ಬರುತ್ತಿವೆ.












Click it and Unblock the Notifications