'ವಿಭಜನೀಯ ಮೂಲಭೂತವಾದಿಗಳು': ಓವೈಸಿ ವಿರುದ್ಧ ದೀದಿ ವಾಗ್ದಾಳಿ
ಕೋಲ್ಕತಾ, ನವೆಂಬರ್ 19: ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ಸಮುದಾಯಗಳನ್ನು ವಿಭಜಿಸುತ್ತಿದೆ. 'ತೀವ್ರಗಾಮಿತನ' ಎಂದು ತಾವು ವಿವರಿಸುವ ಆ ಶಕ್ತಿಗಳ ವಿರುದ್ಧ ಅಲ್ಪಸಂಖ್ಯಾತರು ಎಚ್ಚರಿಕೆಯಿಂದ ಇರಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಗಡಿ ಜಿಲ್ಲೆ ಕೋಚ್ ಬಿಹಾರದಲ್ಲಿ ಸೋಮವಾರ ಸಮಾವೇಶವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಎಐಎಂಐಎಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಎಐಎಂಐಎಂ ಅಥವಾ ಅಸಾದುದ್ದೀನ್ ಓವೈಸಿ ಹೆಸರನ್ನು ನೇರವಾಗಿ ಉಲ್ಲೇಖಿಸದ ಮಮತಾ, ಹೈದರಾಬಾದ್ ಮೂಲದವರಿಂದ ಈ ಸಮಸ್ಯೆಗಳಾಗುತ್ತಿದೆ ಎಂದಿದ್ದಾರೆ.

ಎಐಎಂಐಎಂ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಜನರು ಅಂತಹ ಶಕ್ತಿಗಳನ್ನು ನಂಬುವ ತಪ್ಪನ್ನು ಮಾಡಬಾರದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದೇ ವೇಳೆ ಅವರು ಮತದಾರರಿಗೆ ಹಿಂದೂ ಮೂಲಭೂತವಾದಿ ಶಕ್ತಿಗಳ ಕುರಿತೂ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಅಸಾದುದ್ದೀನ್ ಓವೈಸಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಹೈದರಾಬಾದ್ನಿಂದ ಬಂದವರ ಬಗ್ಗೆ ದೀದಿ ಚಿಂತೆಗೊಳಗಾಗಿದ್ದರೆ, ಚುನಾವಣೆಯಲ್ಲಿ ಬಿಜೆಪಿ 18 ಸೀಟುಗಳನ್ನು ಗೆದ್ದಿದ್ದು ಹೇಗೆ ಎಂದು ನಮಗೆ ಹೇಳಲಿ ಎಂದು ಪ್ರಶ್ನಿಸಿದ್ದಾರೆ.
'ಬಂಗಾಳದ ಮುಸ್ಲಿಮರ ಮಾನವ ಅಭಿವೃದ್ಧಿ ಸೂಚ್ಯಂಕವು ತೀರಾ ಕಳಪೆಯಾಗಿದೆ ಎಂದು ಹೇಳುವುದು ಧಾರ್ಮಿಕ ಮೂಲಭೂತವಾದಿತನವಲ್ಲ. 'ಹೈದರಾಬಾದ್ನಿಂದ ಬಂದ' ನಮ್ಮ ಗುಂಪಿನ ಬಗ್ಗೆ ದೀದಿಗೆ ಚಿಂತೆಯಾಗಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಂಗಾಳದಲ್ಲಿ 18/42 ಕ್ಷೇತ್ರಗಳಲ್ಲಿ ಗೆದ್ದಿದ್ದು ಹೇಗೆ ಎಂದು ಅವರು ನಮಗೆ ವಿವರಿಸಿಲಿ' ಎಂದು ಓವೈಸಿ ಪ್ರಶ್ನಿಸಿದ್ದಾರೆ.












Click it and Unblock the Notifications