ವಾಹನಕ್ಕೆ ಕೊಳೆತ ಶವ ತುಂಬಿದ ವಿಡಿಯೋ: ವರದಿ ಕೇಳಿದ ರಾಜ್ಯಪಾಲ
ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದಲ್ಲಿ ಕೊಳೆತ ಶವಗಳನ್ನು ಎಳೆದುಕೊಂಡು ಬಂದು ವಾಹನಕ್ಕೆ ತುಂಬುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಕುರಿತು ರಾಜ್ಯಪಾಲ ಜಗದೀಪ್ ಧಂಕರ್ ಸರ್ಕಾರದ ಬಳಿಕ ವರದಿ ಕೇಳಿದ್ದಾರೆ.
ಕೊರೊನಾ ವೈರಸ್ನಿಂದ ಮೃತಪಟ್ಟ ಸುಮಾರು 13 ಕೊಳೆತ ಶವಗಳನ್ನು ಸುಡಲು ಕೊಲ್ಕತ್ತಾ ಪುರಸಭೆ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದರು. ಇದಕ್ಕೆ ಸ್ಥಳಿಯರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಕೊಳೆತ ಶವಗಳನ್ನು ಸಿಬ್ಬಂದಿಗಳು ಹಗ್ಗದಲ್ಲಿ ಕಟ್ಟಿ ಎಳೆದುಕೊಂಡು ಬಂದು ವಾಹನಕ್ಕೆ ತುಂಬುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ವೈರಲ್ ಆಗುತ್ತಿದ್ದಂತೆ ಇದು ಕೊವಿಡ್ ರೋಗಿಗಳ ಶವವಲ್ಲ ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಮತ್ತು ಪೊಲೀಸರು ನಿರಾಕರಿಸಿದ್ದಾರೆ.

''ಇದು ಕೊರೊನಾ ವೈರಸ್ ರೋಗಿಗಳಲ್ಲ, ಆಸ್ಪತ್ರೆ ಮೋರ್ಗ್ನಿಂದ ಹಕ್ಕು ಪಡೆಯದ ಅಥವಾ ಗುರುತಿಸಲಾಗದ ಶವಗಳಾಗಿವೆ. ಸುಳ್ಳು ಸುದ್ದಿಗಳನ್ನು ಹರಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆದರೂ, ವಿಡಿಯೋ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ದಂಕಲ್ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ''ನಮ್ಮ ಸಮಾಜದಲ್ಲಿ ಮೃತ ದೇಹಕ್ಕೆ ಗೌರವ ನೀಡಲಾಗುತ್ತೆ. ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ, ಹೃದಯರಹಿತ ವ್ಯಕ್ತಿಗಳಂತೆ ನಡೆದುಕೊಂಡಿರುವುದು ಬೇಸರದ ಸಂಗತಿ'' ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈವರೆಗೂ 9768 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ 440 ಜನರಿಗೆ ಕೊವಿಡ್ ತಗುಲಿದೆ. ಒಟ್ಟು 442 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.












Click it and Unblock the Notifications