ಸರ್ವಪಕ್ಷ ಮುಖ್ಯಸ್ಥರ ಸಭೆಗೂ ಬರುವುದಿಲ್ಲ ಎಂದ ಮಮತಾ ಬ್ಯಾನರ್ಜಿ
ಕೋಲ್ಕತಾ, ಜೂನ್ 18: ಕೇಂದ್ರ ಸರ್ಕಾರದ ಎಲ್ಲ ಸಭೆಗಳು, ಕಾರ್ಯಕ್ರಮಗಳಿಗೆ ಹಾಜರಾಗದೆ ಇರುವ ಮೂಲಕ ಬಿಜೆಪಿ ವಿರುದ್ಧದ ಅಸಹನೆಯನ್ನು ನಿರಂತರವಾಗಿ ವ್ಯಕ್ತಪಡಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬುಧವಾರ ಆಯೋಜಿಸಿರುವ ಸರ್ವಪಕ್ಷಗಳ ಮುಖ್ಯಸ್ಥರ ಸಭೆಗೂ ಹಾಜರಾಗುವುದಿಲ್ಲ ಎಂದಿದ್ದಾರೆ.
ಈ ಸಭೆಯ ಚರ್ಚೆಯ ವಿಷಯವನ್ನು ಒಂದು ದಿನದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇದು ಅತ್ಯಂತ ಮಹತ್ವದ ಸಂಗತಿ ಎಂದು ಮಮತಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾದ 'ಒಂದು ದೇಶ ಒಂದು ಚುನಾವಣೆ'ಯ ಕುರಿತು ಚರ್ಚಿಸಲು ಬುಧವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಇದುವರೆಗೂ ಬಹುತೇಕ ವಿರೋಧ ಪಕ್ಷಗಳು ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿವೆ. ಆದರೆ, ಕೆಲವು ಪಕ್ಷಗಳು ಸರ್ಕಾರದ ಮಾತುಕತೆಯ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿವೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಬರೆದಿರುವ ಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರು, ಈ ವಿಚಾರದ ಕುರಿತಂತೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಪರಿಣತರೊಂದಿಗೆ ಚರ್ಚಿಸಿ ಮುಂದುವರಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.
'ಒಂದು ದೇಶ ಒಂದು ಚುನಾವಣೆ'ಯಂತಹ ಸೂಕ್ಷ್ಮ ಮತ್ತು ಗಂಭೀರ ವಿಷಯಕ್ಕೆ ಸಂಬಂಧಿಸಿದಂತೆ ಅದಕ್ಕೆ ಅರ್ಹವಾದ ನ್ಯಾಯ ಒದಗಿಸಲು ಇಷ್ಟು ಅಲ್ಪ ಸಮಯ ಖಂಡಿತಾ ಸಾಕಾಗುವುದಿಲ್ಲ. ಈ ಸಂಗತಿಯನ್ನು ಸಾಂವಿಧಾನಿಕ ಪರಿಣತರು, ಚುನಾವಣಾ ತಜ್ಞರು ಮತ್ತು ಎಲ್ಲ ಪಕ್ಷಗಳ ಸದಸ್ಯರ ಅಭಿಪ್ರಾಯ, ಸಲಹೆಗಳನ್ನು ಪಡೆದು ಚರ್ಚಿಸಬೇಕಾಗುತ್ತದೆ ಎಂದು ಮಮತಾ ತಿಳಿಸಿದ್ದಾರೆ.
'ಈ ವಿಚಾರವನ್ನು ಗಡಿಬಿಡಿಯಲ್ಲಿ ಚರ್ಚಿಸುವ ಬದಲು ಎಲ್ಲ ಪಕ್ಷಗಳಿಗೂ ಸಾಕಷ್ಟು ಸಮಯಾವಕಾಶ ನೀಡಿ ಅವರ ಅಭಿಪ್ರಾಯ, ದೃಷ್ಟಿಕೋನಗಳನ್ನು ಆಹ್ವಾನಿಸಿ ದಯವಿಟ್ಟು ಶ್ವೇತಪತ್ರ ಹೊರಡಿಸುವಂತೆ ಮನವಿ ಮಾಡುತ್ತೇನೆ. ನೀವು ಹಾಗೆ ಮಾಡಿದರೆ ಮಾತ್ರ ಈ ಮಹತ್ವದ ವಿಚಾರಕ್ಕೆ ಪರಿಣಾಮಕಾರಿ ಸಲಹೆಗಳನ್ನು ನಾವು ನೀಡಲು ಸಾಧ್ಯ' ಎಂದು ಬರೆದಿದ್ದಾರೆ.
'ಮಹತ್ವಾಕಾಂಕ್ಷೆಯ ಜಿಲ್ಲೆ'ಗಳನ್ನು ಅಭಿವೃದ್ಧಿಪಡಿಸುವ ನೀತಿ ಆಯೋಗದ ಪ್ರಸ್ತಾವದ ಜತೆಗೆ ಇತರೆ ಪ್ರಮುಖ ವಿಚಾರಗಳ ಕುರಿತಾದ ಚರ್ಚೆಯಲ್ಲಿಯೂ ಭಾಗವಹಿಸಲು ಅವರು ಒಪ್ಪಿಕೊಂಡಿಲ್ಲ.












Click it and Unblock the Notifications