ಪಶ್ಚಿಮ ಬಂಗಾಳ: ಬಿಜೆಪಿ ಅಧ್ಯಕ್ಷರ ಬೆಂಗಾವಲಿನ ಮೇಲೆ ದಾಳಿ
ಕೋಲ್ಕತಾ, ನವೆಂಬರ್ 12: ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಪಕ್ಷದ ಇತರೆ ನಾಯಕರ ಬೆಂಗಾವಲು ತಂಡದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದ ಅಲಿಪುರ್ದೌರ್ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಕಲ್ಚಿನಿಯ ಶಾಸಕ ವಿಲ್ಸನ್ ಚಂಪಾಮರಿ ಅವರು ಪ್ರಯಾಣಿಸುತ್ತಿದ್ದ ವಾಹನವು ದಾಳಿಯಲ್ಲಿ ಜಖಂಗೊಂಡಿದೆ ಎಂದು ವರದಿಯಾಗಿದೆ. ಬಿಜೆಪಿ ಅಧ್ಯಕ್ಷರ ಬೆಂಗಾವಲಿನ ಮೇಲೆ ನಡೆದ ದಾಳಿಯ ಹಿಂದೆ ಯಾರಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ದಿಲೀಪ್ ಘೋಷ್ ಅವರ ವಾಹನ ದಾಳಿಯಲ್ಲಿ ಭಾಗಶಃ ಹಾನಿಗೊಳಗಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಗುರುವಾರ ಅಲಿಪುರ್ದೌರ್ ಜಿಲ್ಲೆಯ ಜೈಗಾನ್ ಪ್ರದೇಶದಲ್ಲಿ ದಿಲೀಪ್ ಘೋಷ್ ಅವರ ಬೆಂಗಾವಲಿನತ್ತ ಕಪ್ಪು ಬಾವುಟ ತೋರಿಸಿದ್ದಲ್ಲದೆ ಕಲ್ಲು ತೂರಾಟ ನಡೆಸಲಾಗಿದೆ. ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಘೋಷ್ ತೆರಳುತ್ತಿದ್ದರು.

ಘೋಷ್ ವಿರುದ್ಧ ಗೋರ್ಖಾ ಜನಮುಕ್ತಿ ಮೋರ್ಚಾದ (ಜಿಜೆಎಂ) ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದರು. ಘೋಷ್ ಅಲ್ಲಿಂದ ಹೊರಡುವಂತೆ ಅವರು ಆಗ್ರಹಿಸುತ್ತಿದ್ದರು. ಬಳಿಕ ಪೊಲೀಸರ ತಂಡವು ಬಲಪ್ರಯೋಗ ಮಾಡಿ ಪ್ರತಿಭಟನಾಕಾರರು ಮತ್ತು ಬಿಜೆಪಿ ಬೆಂಬಲಿಗರನ್ನು ಅಲ್ಲಿಂದ ಚೆದುರಿಸಿತು.
'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಸುಳಿವನ್ನು ಗ್ರಹಿಸಿರುವ ಟಿಎಂಸಿ ಮತ್ತು ಅವರ ಗೆಳೆಯರು ಹತಾಶರಾಗಿದ್ದಾರೆ. ಆದರೆ ಇಂತಹ ತಂತ್ರಗಳು ನಡೆಯುವುದಿಲ್ಲ. ಜನರು ನಮ್ಮೊಂದಿಗೆ ಇದ್ದಾರೆ' ಎಂದು ದಿಲೀಪ್ ಘೋಷ್ ಹೇಳಿದ್ದಾರೆ.












Click it and Unblock the Notifications