WBSSC ಹಗರಣ: ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿ ಆಸ್ತಿಯೇ 103 ಕೋಟಿ!
ಕೋಲ್ಕತ್ತಾ, ಸೆಪ್ಟೆಂಬರ್ 19: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (WBSSC) ನೇಮಕಾತಿ ಅಕ್ರಮಗಳಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯ ಸಚಿವ ಪಾರ್ಥ ಚಟರ್ಜಿ ಮತ್ತು ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ.
ಕೋಲ್ಕತ್ತಾದ ವಿಶೇಷ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ ಪ್ರಮುಖ ಆರೋಪಿಗಳಾದ ಇವರಿಬ್ಬರ ಬಳಿಯೇ ಬರೋಬ್ಬರಿ 103.10 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಉಲ್ಲೇಖಿಸಲಾಗಿದೆ.
Breaking:ಅರ್ಪಿತಾ ಮುಖರ್ಜಿಯ ಮತ್ತಷ್ಟು ಸ್ಥಳಗಳ ಮೇಲೆ ಇಡಿ ದಾಳಿ
ಜುಲೈನಲ್ಲಿ ಕೋಲ್ಕತ್ತಾದಲ್ಲಿರುವ ಮುಖರ್ಜಿಯ ಎರಡು ನಿವಾಸಗಳಿಂದ 49.80 ಕೋಟಿ ರೂಪಾಯಿ ನಗದು ಮತ್ತು 5.08 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
103 ಕೋಟಿ ರೂ. ಲೆಕ್ಕಾಚಾರ ಹೇಗಿದೆ?
ಪಶ್ಚಿಮ ಬಂಗಾಳದಲ್ಲಿ ಈ ಇಬ್ಬರು ಆರೋಪಿಗಳ ಬಳಿ 49.80 ಕೋಟಿ ರೂಪಾಯಿ ನಗದು ಹಣವೇ ಪತ್ತೆಯಾಗಿದ್ದು, ಉಳಿದ ಮೊತ್ತವನ್ನು ಬ್ಯಾಂಕ್ ಠೇವಣಿ ಮತ್ತು ಇತರ ಸ್ಥಿರ ಆಸ್ತಿಗಳ ರೂಪದಲ್ಲಿದೆ. ಭೂಮಿ ಮತ್ತು ನಿವಾಸಗಳ ರೂಪದಲ್ಲಿ ಭೂ ಆಸ್ತಿ ಮತ್ತು ಹಲವಾರು ಕಂಪನಿಗಳಲ್ಲಿ ಹೂಡಿಕೆಯಾಗಿದೆ. ಈ ಹಗರಣದ ಆದಾಯವನ್ನು ಬೇರೆಡೆಗೆ ತಿರುಗಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ನಕಲಿ ಕಂಪನಿಗಳನ್ನು ತೆರೆಯಲಾಗಿದ್ದು, ಈ ಕಂಪನಿಯ ನಿರ್ದೇಶಕರನ್ನೂ ಸಹ ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ.
ಮೊದಲ ಚಾರ್ಜ್ ಶೀಟ್ 58 ದಿನಗಳ ನಂತರ ಸಲ್ಲಿಕೆ
ಇಡಿ ತನಿಖೆ ಆರಂಭಿಸಿದ 58 ದಿನಗಳ ನಂತರದಲ್ಲಿ ಮೊದಲ ಚಾರ್ಜ್ಶೀಟ್ನ್ನು ಸಲ್ಲಿಸಲಾಗಿದೆ. ಅದರಲ್ಲಿ 35 ಬ್ಯಾಂಕ್ ಖಾತೆಗಳ ಒಟ್ಟು ಠೇವಣಿ 7.89 ಕೋಟಿ ರೂ. ಹಗರಣದಲ್ಲಿ ಚಟರ್ಜಿ ಮತ್ತು ಮುಖರ್ಜಿ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಒಟ್ಟು 872 ಪುಟಗಳ ಚಾರ್ಜ್ ಶೀಟ್ನ್ನು ಸಲ್ಲಿಕೆ ಮಾಡಲಾಗಿದೆ. "ತನಿಖಾ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಮುಂದಿನ ತನಿಖೆಯು ಹಗರಣದ ಆದಾಯದ ಅಕ್ರಮ ಸಂಪತ್ತನ್ನು ಬಳಸಿಕೊಂಡು ಸಂಗ್ರಹಿಸಿದ ಅಂತಹ ಹೆಚ್ಚಿನ ಆಸ್ತಿಗಳನ್ನು ಬಹಿರಂಗಪಡಿಸುತ್ತದೆ ಎಂದು ನಮಗೆ ಖಚಿತವಾಗಿದೆ", ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂಕಿತ ಹಾಕುವುದೊಂದೇ ಉಳಿದಿರುವ ಅಧಿಕಾರ!
ಪ್ರಸ್ತುತ ಸಿಬಿಐ ಕಸ್ಟಡಿಯಲ್ಲಿರುವ ಮತ್ತು ವಿಚಾರಣೆಯನ್ನು ಎದುರಿಸುತ್ತಿರುವ ಚಟರ್ಜಿ, ಮಾಜಿ ರಾಜ್ಯ ಶಿಕ್ಷಣ ಸಚಿವರಾಗಿ ಡಬ್ಲ್ಯುಬಿಎಸ್ಎಸ್ಸಿಯ ಕಾರ್ಯಚಟುವಟಿಕೆಗಳ ಮೇಲೆ ಯಾವುದೇ ಅಧಿಕಾರವನ್ನು ಹೊಂದಿಲ್ಲ. ಆಯೋಗವು ಕಳುಹಿಸಿರುವ ಫೈಲ್ಗಳಿಗೆ ಸಹಿ ಹಾಕಿದ್ದಾರೆ ಎಂದು ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಚಟರ್ಜಿ ಡಬ್ಲ್ಯುಬಿಎಸ್ಎಸ್ಸಿ ಅಧಿಕಾರಿಗಳ ಮೇಲೆ ಸಂಪೂರ್ಣ ಆರೋಪ ಹೊರಿಸಿದ್ದಾರೆ. ಸಚಿವರಾಗಿ ಅವರು ಸಂಪೂರ್ಣವಾಗಿ ಆಯೋಗದ ಅಧಿಕಾರಿಗಳನ್ನು ಅವಲಂಬಿಸಿ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಸಿಬಿಐ ಕಸ್ಟಡಿಯಲ್ಲಿ ಇರುವುದು ಚಟರ್ಜಿ ಅಷ್ಟೇ ಅಲ್ಲ!
ಪಾರ್ಥ ಚಟರ್ಜಿ ಅಲ್ಲದೆ, ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷ ಕಲ್ಯಾಣ್ಮೋಯ್ ಗಂಗೋಪಾಧ್ಯಾಯ ಮತ್ತು ಡಬ್ಲ್ಯುಬಿಎಸ್ಎಸ್ಸಿ ಸ್ಕ್ರೀನಿಂಗ್ ಕಮಿಟಿಯ ಮಾಜಿ ಸಂಚಾಲಕ ಎಸ್ಪಿ ಸಿನ್ಹಾ ಕೂಡ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಕೇಂದ್ರೀಯ ಸಂಸ್ಥೆ ತನಿಖಾಧಿಕಾರಿಗಳು ಅವರ ಹೇಳಿಕೆಗಳಲ್ಲಿನ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಒಟ್ಟಿಗೆ ಇಬ್ಬರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ಡಬ್ಲ್ಯುಬಿಎಸ್ಎಸ್ಸಿ ಹಗರಣದ ಬಗ್ಗೆ ತಿಳಿಯಿರಿ
ಡಬ್ಲ್ಯುಬಿಎಸ್ಎಸ್ಸಿಯ ಹಗರಣವು 2014ರ ಹಿಂದಿನದಾಗಿದ್ದು, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (SSC) ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ (SLST) ಮೂಲಕ ಶಿಕ್ಷಕರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿತು. ಅಂದು ಪಾರ್ಥ ಚಟರ್ಜಿ ಪಶ್ಚಿಮ ಬಂಗಾಳದಲ್ಲಿ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಸ್ತುವಾರಿ ಸಚಿವರಾಗಿದ್ದು, 2016 ರಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು. ಆದಾಗ್ಯೂ, ನೇಮಕಾತಿ ಪ್ರಕ್ರಿಯೆಯಲ್ಲಿನ ಅವ್ಯವಹಾರಗಳನ್ನು ಆರೋಪಿಸಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಸರಣಿ ಅರ್ಜಿಗಳನ್ನು ಸಲ್ಲಿಸಲಾಯಿತು. ಕಡಿಮೆ ಅಂಕಗಳನ್ನು ಪಡೆದ ಅನೇಕ ಪರೀಕ್ಷಾರ್ಥಿಗಳು ಮೆರಿಟ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಮೆರಿಟ್ ಪಟ್ಟಿಯಲ್ಲೂ ಇಲ್ಲದ ಕೆಲವು ಅರ್ಜಿದಾರರು ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ ಎಂಬ ಹಲವಾರು ಆರೋಪಗಳಿವೆ ಎಂದು ಅರ್ಜಿದಾರರು ಆರೋಪಿಸಿದ್ದರು.