Breaking: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸೊಸೆ ಮನೇಕಾ ಗಂಭೀರ್ಗೆ ಇಡಿ ಸಮನ್ಸ್
ಕೋಲ್ಕತ್ತಾ, ಸೆಪ್ಟೆಂಬರ್ 12: ಪಶ್ಚಿಮ ಬಂಗಾಳದಲ್ಲಿ ರಾತ್ರೋರಾತ್ರಿ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ದೊಡ್ಡ ಹೈಡ್ರಾಮಾ ನಡೆದು ಹೋಗಿದೆ. ವಿಮಾನ ಏರಲು ಹೊರಟಿದ್ದ ಮೇನಕಾ ಗಂಭೀರ್ ಅನ್ನು ಅಧಿಕಾರಿಗಳು ತಡೆದಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಸೊಸೆ ಮನೇಕಾ ಗಂಭೀರ್ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದಾರೆ. ಶನಿವಾರ ಸಂಜೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮೇನಕಾ ಗಂಭೀರ್ ವಿದೇಶಕ್ಕೆ ಹಾರುವುದನ್ನು ಇಡಿ ಅಧಿಕಾರಿಗಳು ತಡೆದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದರು.

ಗಂಭೀರ್ ರಾತ್ರಿ 9 ಗಂಟೆ ಸುಮಾರಿಗೆ ವಿಮಾನದಲ್ಲಿ ಬ್ಯಾಂಕಾಕ್ಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ಫೆಡರಲ್ ತನಿಖಾ ಸಂಸ್ಥೆಯು ತನ್ನ ವಿರುದ್ಧ ಹೊರಡಿಸಿದ ಲುಕ್ ಔಟ್ ನೋಟಿಸ್ ಮೇಲೆ ಮನೇಕಾ ಗಂಭೀರ್ಗೆ ವಲಸೆ ಕ್ಲಿಯರೆನ್ಸ್ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಇಡಿ ಅಧಿಕಾರಿಗಳಿಗೆ ಇಮಿಗ್ರೇಷನ್ ಪ್ರಾಧಿಕಾರದ ಮಾಹಿತಿ:
ಬ್ಯಾಂಕಾಕ್ಗೆ ಹೊರಟಿದ್ದ ಮನೇಕಾ ಗಂಭೀರ್ ಅನ್ನು ವಿಮಾನ ನಿಲ್ದಾಣದ ಇಮಿಗ್ರೇಷನ್ ಪ್ರಾಧಿಕಾರದ ಅಧಿಕಾರಿಗಳು ತಡೆದರು. ತದನಂತರದಲ್ಲಿ ಈ ಬಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಇಡಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ತಲುಪಿದ ನಂತರದಲ್ಲಿ ಉಭಯ ಅಧಿಕಾರಿಗಳು ಚರ್ಚಿಸಿ, ಮನೇಕಾ ಗಂಭೀರ್ ಪ್ರಯಾಣಕ್ಕೆ ಅನುಮತಿಯನ್ನು ನಿರಾಕರಿಸಲಾಯಿತು. ಈ ಬೆಳವಣಿಗೆ ನಂತರದಲ್ಲಿ ಶನಿವಾರ ರಾತ್ರಿ 10:30 ರ ಸುಮಾರಿಗೆ ವಿಮಾನ ನಿಲ್ದಾಣದಿಂದ ಮನೇಕಾ ಗಂಭೀರ್ ಕೋಲ್ಕತ್ತಾದ ತಮ್ಮ ಮನೆಗೆ ವಾಪಸ್ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಮನೇಕಾ ಗಂಭೀರ್ ವಿಚಾರಣೆ:
ಪಶ್ಚಿಮದ ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆಪ್ಟೆಂಬರ್ 12ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದುವರೆಗೂ ಮನೇಕಾ ಗಂಭೀರ್ ಅನ್ನು ವಿಚಾರಣೆ ನಡೆಸಿಲ್ಲ. ಆದರೆ ಈ ಹಿಂದೆ ಇದೇ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳನ್ನು ಇವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಟಿಎಂಸಿ) ಮತ್ತು ಅವರ ಪತ್ನಿ ರುಜಿರಾ ಅವರನ್ನು ಈ ಹಿಂದೆ ಇಡಿ ಇದೇ ಪ್ರಕರಣದಲ್ಲಿ ಪ್ರಶ್ನಿಸಿತ್ತು.












Click it and Unblock the Notifications