ಬಿಜೆಪಿಯನ್ನು ಚಂಬಲ್ ಕಣಿವೆ ಡಕಾಯಿತರಿಗೆ ಹೋಲಿಸಿದ ಮಮತಾ ಬ್ಯಾನರ್ಜಿ!
ನವದೆಹಲಿ,ಡಿಸೆಂಬರ್ 15: ಬಿಹಾರದ ಚುನಾವಣೆ ನಂತರ, ಈಗ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿ ಪರಸ್ಪರ ರಾಜಕೀಯ ಪಕ್ಷಗಳು ಪ್ರತ್ಯಾರೋಪ ಮಾಡುತ್ತಿವೆ. ಚುನಾವಣಾ ಆಯೋಗವು ಇನ್ನೂ ದಿನಾಂಕಗಳನ್ನೇ ಘೋಷಿಸಿಲ್ಲ, ಆದರೆ ಬಿಜೆಪಿ ಮತ್ತು ಟಿಎಂಸಿ ನಡುವಿನ ಗುದ್ದಾಟವು ಉತ್ತುಂಗದಲ್ಲಿದೆ.
ಒಂದೆಡೆ ಬಂಗಾಳದಲ್ಲಿ ಕಳಪೆ ಕಾನೂನು ಸುವ್ಯವಸ್ಥೆ ಎಂದು ಬಿಜೆಪಿ ಟೀಕೆ ಮಾಡುತ್ತಿದೆ, ಮತ್ತೊಂದೆಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಬಿಜೆಪಿಯ ಭರವಸೆಗಳನ್ನು ಗುರಿಯಾಗಿಸಿಕೊಂಡು ಮಾತಿನ ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು ಚಂಬಲ್ ಕಣಿವೆಯ ಡಕಾಯಿತರಿಗೆ ಹೋಲಿಸಿದ್ದಾರೆ.
ಬಂಗಾಳದಲ್ಲಿ ಮೊದಲಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಬಿಜೆಪಿ
ಜಲ್ಪೈಗುರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಗಿಂತ ದೊಡ್ಡ ಕಳ್ಳ ಇನ್ನಿಲ್ಲ, ಅವರು ಚಂಬಲ್ನ ಡರೋಡೆಕೋರರು ಎಂದಿದ್ದಾರೆ. 2014, 2016, 2019 ರ ಚುನಾವಣೆಯಲ್ಲಿ ಏಳು ಟೀ ತೋಟಗಳನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿದರು. ಅಲ್ಲದೆ ಇದನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂದಿದ್ದರು. ಇದೀಗ ಅವರು ಜನರಿಗೆ ಉದ್ಯೋಗ ನೀಡುವ ಭರವಸೆ ನೀಡುತ್ತಿದ್ದಾರೆ. ಅವರ ಭರವಸೆಗಳೆಲ್ಲಾ ಸುಳ್ಳು, ಹಾಗೆಯೇ ಸಾರ್ವಜನಿಕರನ್ನು ಮೋಸಗೊಳಿಸುತ್ತವೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಬಿಜೆಪಿ ಹೈದರಾಬಾದ್ನಿಂದ ಒಂದು ಪಕ್ಷವನ್ನು ಕೈ ಹಿಡಿದಿದ್ದು, ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು ಅವರಿಗೆ ಹಣವನ್ನು ನೀಡುತ್ತದೆ ಮತ್ತು ಅವರು ಮತಗಳನ್ನು ವಿಭಜಿಸುತ್ತಿದ್ದಾರೆ. ಬಿಹಾರ ಚುನಾವಣೆಯು ಅದನ್ನು ಸಾಭೀತುಪಡಿಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.