ಪ್ರವಾದಿ ವಿರುದ್ಧ ಹೇಳಿಕೆ: ಹೌರದಲ್ಲಿ ಹಿಂಸಾಚಾರ- ಜೂ.15 ರವರೆಗೆ ನಿಷೇಧಾಜ್ಞೆ ಜಾರಿ
ಕೋಲ್ಕತ್ತಾ, ಜೂ. 11: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಇಬ್ಬರು ಬಿಜೆಪಿ ನಾಯಕರ ಹೇಳಿಕೆಗಳ ವಿರುದ್ಧ ನಡೆದ ಪ್ರತಿಭಟನೆ ಸತತ ಎರಡನೇ ದಿನವೂ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹೊಸ ಘರ್ಷಣೆಗಳು ವರದಿಯಾಗಿವೆ.
ಹೌರಾ ಜಿಲ್ಲೆಯ ಪಂಚ್ಲಾ ಬಜಾರ್ ಪ್ರದೇಶದಲ್ಲಿ ನಡೆದ ಹಿಂಸಾಚಾರದ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಎಸೆದಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹೌರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಜೂನ್ 15 ರವರೆಗೆ ನಿಷೇಧಾಜ್ಞೆಗಳನ್ನು ವಿಧಿಸಿದೆ. ಜೂನ್ 13 ರವರೆಗೆ ಜಿಲ್ಲೆಯಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|
ರೈಲು ಸಂಚಾರಕ್ಕೆ ಅಡ್ಡಿ, ರಸ್ತೆಗಳು ಬಂದ್
ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಅಮಾನತುಗೊಂಡಿರುವ ಬಿಜೆಪಿ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ಪಕ್ಷದ ದೆಹಲಿಯ ಮಾಜಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಿನ್ನೆಯಿಂದ ಹೌರಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಶುಕ್ರವಾರ, ನೂರಾರು ಪ್ರತಿಭಟನಾಕಾರರು ಹೌರಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆಗಳು ಮತ್ತು ರೈಲು ಹಳಿಗಳನ್ನು ತಡೆದರು ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಪ್ರಯತ್ನಿಸಿದಾಗ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಪ್ರತಿಭಟನಾಕಾರರು ಹೌರಾ-ಖರಗ್ಪುರ ವಿಭಾಗದ ಚೆಂಗೈಲ್, ಫುಲೇಶ್ವರ ಮತ್ತು ಸಂತ್ರಗಚಿ ನಿಲ್ದಾಣಗಳಲ್ಲಿ ಮಧ್ಯಾಹ್ನ 1.22 ರಿಂದ ರೈಲು ಹಳಿಗಳನ್ನು ತಡೆದರು.
ಪ್ರತಿಭಟನೆಯಿಂದಾಗಿ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಎರಡನ್ನು ಬೇರೆಡೆಗೆ ತಿರುಗಿಸಲಾಗಿದೆ. ಗುರುವಾರವೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದು, ಹೌರಾ ಜಿಲ್ಲೆಯ ಅಂಕುರ್ಹಾಟಿಯಲ್ಲಿ ಸುಮಾರು 11 ಗಂಟೆಗಳ ಕಾಲ ಚಳವಳಿಗಾರರು ಸಂಚಾರಕ್ಕೆ ಅಡ್ಡಿಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಂದ ಲಾಠಿ ಚಾರ್ಜ್
ಧುಲಾಘರ್ ಮತ್ತು ಪಂಚಲಾದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಅಲ್ಲಿ ಪ್ರತಿಭಟನಾಕಾರರು ಪ್ರತೀಕಾರವಾಗಿ ಕಲ್ಲುಗಳನ್ನು ಎಸೆದರು, ಹತ್ತಿರದ ಕಾರುಗಳಿಗೆ ಹಾನಿಯನ್ನುಂಟುಮಾಡಿದರು.ಅವರು ಪಂಚ್ಲಾ ಮತ್ತು ಧುಲಾಘರ್ನಲ್ಲಿ ಟೈರ್ಗಳನ್ನು ರಸ್ತೆಯಲ್ಲಿ ಇರಿಸಿ ಬೆಂಕಿ ಹಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಉಲುಬೇರಿಯಾದಲ್ಲಿ ಪೊಲೀಸ್ ಕಿಯೋಸ್ಕ್ಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ. ಈ ನಡುವೆ ರಾಜ್ಯಪಾಲ ಜಗದೀಪ್ ಧಂಖರ್ ಅವರು ಶಾಂತಿಗಾಗಿ ಮನವಿ ಮಾಡಿದ್ದಾರೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯಿಂದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ತುರ್ತು ನವೀಕರಣವನ್ನು ಕೋರಿದ್ದಾರೆ.

ಸುವೇಂದು ಅಧಿಕಾರಿ ಆರೋಪ
ಹಿಂಸಾಚಾರವನ್ನು ಟಿಎಂಸಿ ಪ್ರಾಯೋಜಿತ ಗೂಂಡಾಗಳು ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧದ ಪ್ರತಿಭಟನೆಗಳು ಇಂದು ಕಲ್ಲು ತೂರಾಟದೊಂದಿಗೆ ಹಿಂಸಾತ್ಮಕ ತಿರುವು ಪಡೆದುಕೊಂಡಿವೆ. ಹೀಗಾಗಿ ಶುಕ್ರವಾರ ಹೊವಾರ್ನಲ್ಲಿ ಬಿಗುವಿನ ವಾತಾವರಣ ಮನೆ ಮಾಡಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು.

ದೇಶ ವಿದೇಶದಲ್ಲಿ ಸರ್ಕಾರದ ಮೇಲೆ ಒತ್ತಡ
ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳು ಭಾರತ ಮತ್ತು ವಿದೇಶಗಳಲ್ಲಿನ ಮುಸ್ಲಿಮರನ್ನು ಕೆರಳಿಸಿದೆ.ಟಿವಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಸೌದಿ ಅರೇಬಿಯಾ, ಕುವೈತ್, ಕತಾರ್ ಮತ್ತು ಇರಾನ್ನಂತಹ ದೇಶಗಳ ಪ್ರತಿಭಟನೆಯೊಂದಿಗೆ ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಳ ಮೇಲಿನ ಗಲಾಟೆ ಉಲ್ಬಣಗೊಂಡಿದೆ. ವಿರೋಧ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಲಾಗಿದೆ. ಜೊತೆಗೆ ತಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಬಿಜೆಪಿ ಪ್ರತಿಪಾದಿಸಿದೆ.












Click it and Unblock the Notifications