'ಮಹಾ' ಪೆಟ್ಟು ಕೊಟ್ಟವರಿಗೆ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು!
ಕೋಲ್ಕತ್ತಾ, ನವೆಂಬರ್.14: ಮಹಾರಾಷ್ಟ್ರ ರಾಜಕಾರಣದಲ್ಲಿ ಈಗ ನಾಯಕರು ಆಡಿದ್ದೇ ಆಟ. ಇಲ್ಲಿ ಮತ ಹಾಕಿದ ಮತದಾರರಿಗೆ ಕಿಮ್ಮತ್ತೇ ಇಲ್ಲದಂತಾಗಿ ಬಿಟ್ಟಿದೆ. ಸರ್ಕಾರವಿಲ್ಲದ ರಾಜ್ಯ, ತಂದೆಯಿಲ್ಲದ ಮನೆಯಂತೆ ಆಗಿ ಬಿಟ್ಟಿದೆ. ಇಲ್ಲಿ ಪ್ರಜೆಗಳೇ ಮಕ್ಕಳು, ಕೇಳುವವರಿಗೆ ಮತ ಹಾಕಿದವರ ಗೋಳು.
ಬಿಜೆಪಿ ಅತಿದೊಡ್ಡ ಪಕ್ಷವಾದರೂ ಸರ್ಕಾರ ರಚಿಸಿಲ್ಲ. ಮೊದಲಿಗೆ ದೋಸ್ತಿ ದೋಸ್ತಿ ಎಂದು ಅಖಾಡಕ್ಕಿಳಿದ ಶಿವಸೇನೆ ಇದೀಗ ಕೇಸರಿ ಪಡೆಯೊಂದಿಗೆ ಇಲ್ಲ. ಮಹಾರಾಷ್ಟ್ರ ಟೈಗರ್ಸ್ ಗೆ ಎನ್ ಸಿಪಿ ಬೆಂಬಲ ನೀಡಿದರೂ ಅದ್ಯಾಕೋ ವರ್ಕೌಟ್ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಈ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಗಿನಿಗಿ ಕೆಂಡವಾಗಿದ್ದಾರೆ.

ಇವರೆಲ್ಲ ಬಿಜೆಪಿಯ ಮುಖವಾಣಿ ಆಗಿ ಬಿಟ್ಟಿದ್ದಾರೆ:
ದೇಶದ ಹಲವು ರಾಜ್ಯಗಳಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವವರೇ ಬಿಜೆಪಿಯ ಮುಖವಾಣಿಯಂತೆ ವರ್ತಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್, ನಿರ್ಧಾರವನ್ನು ದೀದಿ ವಿರೋಧಿಸಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರೇ ಈಗ ಬಿಜೆಪಿಗರಂತೆ ನಡೆದುಕೊಳ್ಳುತ್ತಿದ್ದಾರೆ. ಇಂಥವರು ಇರುವಾಗ ರಾಜ್ಯಗಳಲ್ಲಿ ಸಮಾನಾಂತರ ಆಡಳಿತ ನಡೆಸಲು ಹೇಗೆ ತಾನೇ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ನಾನು ಸಾಂವಿಧಾನಿಕ ಹುದ್ದೆಯಲ್ಲಿರುವವರ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಸಹಿಸಲು ಆಗುತ್ತಿಲ್ಲ. ಅವರು ಬಿಜೆಪಿ ಮುಖವಾಣಿ ಹಾಗೆ ವರ್ತಿಸುತ್ತಿದ್ದು, ಇದಕ್ಕೆ ಪಶ್ಚಿಮ ಬಂಗಾಳ ಕೂಡ ಹೊರತಾಗಿಲ್ಲ ಎಂದು ಕಿಡಿ ಕಾರಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರಿಂದ ಜನರಿಗಾಗಿ ಜನರಿಗೋಸ್ಕರ ಜಾರಿಗೆ ಬಂದಿರುತ್ತವೆ. ಜನರೇ ಆಯ್ಕೆ ಮಾಡಿದ ಸರ್ಕಾರವನ್ನು ಅಧಿಕಾರ ನಡೆಸಲು ಬಿಡಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಇತ್ತೀಚಿಗಷ್ಟೇ ಸರ್ಕಾರದ ಹಲವು ವಿಚಾರಗಳಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ತಿಕ್ಕಾಟ ನಡೆದಿತ್ತು.












Click it and Unblock the Notifications