ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ತಿರಸ್ಕಾರ: ಪ್ರಧಾನಿಗೆ ಮಮತಾ ಪತ್ರ
ಕೋಲ್ಕತ್ತಾ, ಜನವರಿ 16: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಕುರಿತ ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ಕೇಂದ್ರವು ತಿರಸ್ಕರಿಸಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಭಾನುವಾರ ಪತ್ರ ಬರೆದಿದ್ದಾರೆ.
ಸುಭಾಷ್ ಚಂದ್ರ ಬೋಸ್ ಕುರಿತ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿದ ವಿಚಾರದಲ್ಲಿ ಆಶ್ಚರ್ಯವನ್ನು ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಪಶ್ಚಿಮ ಬಂಗಾಳ ಸರ್ಕಾರದ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ನಿಂದ ಹಠಾತ್ತನೆ ಹೊರಗಿಡುವ ಭಾರತ ಸರ್ಕಾರದ ನಿರ್ಧಾರದಿಂದ ನನಗೆ ನೋವಾಗಿದೆ," ಎಂದು ಹೇಳಿದ್ದಾರೆ.
ಶಾಲಾ-ಕಾಲೇಜು ತೆರೆಯುವ ಬಗ್ಗೆ ಮಮತಾ ಪರಿಶೀಲನಾ ಸಭೆ
"ಯಾವುದೇ ಕಾರಣಗಳು ಅಥವಾ ಸಮರ್ಥನೆಗಳನ್ನು ನೀಡದೆ ಸರ್ಕಾರವು ನಮ್ಮ ರಾಜ್ಯದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವುದು ನಮಗೆ ಇನ್ನಷ್ಟು ಗೊಂದಲದ ಸಂಗತಿಯಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಅವರ ಐಎನ್ಎಯನ್ನು ನೇತಾಜಿಯ 125 ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಿಂದಾಗಿ ನಮ್ಮ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ನಾವು ತಯಾರಿ ಮಾಡಿದ್ದೇವೆ. ಈ ದೇಶದ ಸುಪ್ರಸಿದ್ಧ ಪುತ್ರರು ಮತ್ತು ಪುತ್ರಿಯರಾದ ಈಶ್ವರಚಂದ್ರ ವಿದ್ಯಾಸಾಗರ್, ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ, ದೇಶಬಂಧು ಚಿತ್ತರಂಜನ್ ದಾಸ್, ಶ್ರೀ ಅರಬಿಂದೋ, ಮಾತಂಗಿನಿ ಹಜ್ರಾ, ನಜ್ರುಲ್, ಬಿರ್ಸಾ ಮುಂಡಾ ಮತ್ತು ಅನೇಕ ದೇಶಭಕ್ತರ ಚಿತ್ರಗಳು ಅದರಲ್ಲಿ ಇದ್ದವು," ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ.
"ಕೇಂದ್ರದ ನಿರ್ಧಾರದಿಂದಾಗಿ ರಾಜ್ಯದ ಜನರಿಗೆ ನೋವು"
"ಕೇಂದ್ರ ಸರ್ಕಾರದ ಈ ಧೋರಣೆಯಿಂದ ಪಶ್ಚಿಮ ಬಂಗಾಳದ ಜನರಿಗೆ ತೀವ್ರ ನೋವು ಉಂಟಾಗಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಬಂಗಾಳವು ಮುಂಚೂಣಿಯಲ್ಲಿದೆ," ಎಂದು ಪ್ರತಿಪಾದನೆ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪಶ್ಚಿಮ ಬಂಗಾಳವು ದೇಶದ ಸ್ವಾತಂತ್ರ್ಯಕ್ಕಾಗಿ ಭಾರೀ ಹೋರಾಟ ನಡೆಸಿದೆ ಎಂದು ಹೇಳಿದ್ದಾರೆ. "ನಮ್ಮ ಸ್ವಾತಂತ್ರ್ಯದ 75 ನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭವನ್ನು ಆಚರಿಸುವ ರಾಷ್ಟ್ರದ ಸಮಾರಂಭದಲ್ಲಿ ಅದರ ವೀರ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ನೆನಪಿಸಲು ಅವಕಾಶವಿಲ್ಲ ಎಂಬುವುದು ಆಘಾತಕಾರಿ," ಎಂದು ಪತ್ರದಲ್ಲಿ ಮಮತಾ ಬ್ಯಾನರ್ಜಿ ಉಲ್ಲೇಖ ಮಾಡಿದ್ದಾರೆ.
'ಮೋದಿ ಸಭೆಯಲ್ಲಿ ಭಾಗವಹಿಸಲ್ಲ' ಎಂದ ಮಮತಾ ಬ್ಯಾನರ್ಜಿ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, "ಕೇಂದ್ರದ ನಿರ್ಧಾರದ ವಿರುದ್ಧ ಪಕ್ಷವು ಪ್ರತಿಭಟಿಸಲಿದೆ. ಕಳೆದ ವರ್ಷವೂ ಕೇಂದ್ರವು ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕರಿಸಿದಾಗ ಯಾವುದೇ ಕಾರಣವನ್ನು ನೀಡಲಿಲ್ಲ. ಈ ವರ್ಷವೂ ಯಾವುದೇ ಕಾರಣವನ್ನು ನೀಡಲಿಲ್ಲ. ನಾವು ಅದರ ವಿರುದ್ಧ ಪ್ರತಿಭಟಿಸುತ್ತೇವೆ," ಎಂದು ತಿಳಿಸಿದ್ದಾರೆ. ಈ ನಡುವೆ ನೇತಾಜಿ ಜನ್ಮದಿನವನ್ನು ನೆನಪಿಸಲು ಜನವರಿ 24 ರ ಬದಲಿಗೆ ಜನವರಿ 23 ರಿಂದ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಪ್ರಾರಂಭಿಸಲು ಕೇಂದ್ರ ನಿರ್ಧರಿಸಿದೆ.
ಕೇರಳದ ಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ತಿರಸ್ಕಾರ
ಇತ್ತೀಚಿನ ವರ್ಷಗಳಲ್ಲಿ ಮೂರನೇ ಬಾರಿಗೆ ಕೇರಳದ ಗಣರಾಜ್ಯೋತ್ಸವ ಸ್ತಬ್ಧಚಿತ್ರವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದ ನಂತರ ಕೇರಳದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇರಳವು ಈ ಬಾರಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸ್ತಬ್ಧಚಿತ್ರದ ಪ್ರಸ್ತಾಪ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಆದಿ ಶಂಕರರ ಸ್ತಬ್ಧಚಿತ್ರ ಮಾಡುವಂತೆ ಹೇಳಿ ಶ್ರೀ ನಾರಾಯಣ ಗುರು ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿದೆ. ಈ ಬಗ್ಗೆ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ, "ಇದು ದುಃಖಕರವಾಗಿದೆ. ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಏಕೆ ತಿರಸ್ಕರಿಸಲಾಯಿತು ಎಂದು ನನಗೆ ತಿಳಿದಿಲ್ಲ. ಕೇಂದ್ರವು ಸಮಾಜ ಸುಧಾರಕನ ವಿರುದ್ಧ ಏಕೆ ನಿಂತಿದೆ ಎಂದು ನಮಗೆ ತಿಳಿದಿಲ್ಲ. ರಾಜ್ಯ ಬಿಜೆಪಿ ಕೂಡ ಈ ಪಕ್ಷಪಾತವನ್ನು ಮಾಡುತ್ತಿದೆ. ಸಂಬಂಧಪಟ್ಟ ಜನರು ರಾಜ್ಯಕ್ಕೆ ವಿವರಣೆಯನ್ನು ನೀಡಬೇಕಾಗಿದೆ," ಎಂದು ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)