'ತ್ರಿಪುರದ ಹೊಟೇಲ್ನಿಂದ ಹೊರಹೋಗಲು ಬಿಡುತ್ತಿಲ್ಲ': ಪ್ರಶಾಂತ್ ತಂಡಕ್ಕೆ ಗೃಹ ಬಂಧನ?
ಕೋಲ್ಕತ್ತಾ, ಜು.27: ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ತಾವು ಹೋಟೆಲ್ನಿಂದ ಹೊರಹೋಗದಂತೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ರ ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡವನ್ನು ತಡೆಯಲಾಗಿದೆ ಎಂದು ತಂಡವು ಆರೋಪಿಸಿದೆ.
ತ್ರಿಪುರದಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಂಡವು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ನ ಕೆಲವು ಸಮೀಕ್ಷೆಗಳನ್ನು ಮಾಡಲು ತೆರಳಿದ್ದರು ಎಂದು ಹೇಳಲಾಗಿದೆ. ''ತ್ರಿಪುರ ಪೊಲೀಸರು ಬೆಳಿಗ್ಗೆಯಿಂದ ಹೋಟೆಲ್ ಲಾಬಿ ಮತ್ತು ಹೊರಗಡೆ ನಿಂತಿದ್ದಾರೆ. ಐಪಿಎಸಿ ತಂಡದ 22 ಸದಸ್ಯರಲ್ಲಿ ಯಾರಿಗೂ ಆವರಣದಿಂದ ಹೊರಹೋಗಲು ಅವಕಾಶ ನೀಡುತ್ತಿಲ್ಲ,'' ಎಂದು ಸಂಘಟನೆಯ ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ತೃಣಮೂಲ ಕಾಂಗ್ರೆಸ್ನ ರಾಜಕೀಯ ಪರಿಸ್ಥಿತಿ ಮತ್ತು ಸಂಭಾವ್ಯ ಬೆಂಬಲ ನೆಲೆದ ಬಗ್ಗೆ ಸಮೀಕ್ಷೆ ನಡೆಸಲು ನಿರ್ಣಯಿಸಲು ಐಪಿಎಸಿ ನೌಕರರು ಅಗರ್ತಲಾದಲ್ಲಿದ್ದರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಚುನಾವಣೆ 2023 ರಲ್ಲಿ ನಡೆಯಲಿದೆ.

ಪೊಲೀಸರು ಬಂಧನಕ್ಕೆ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ. ಐಪಿಎಸಿ ತಂಡವು ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಮಾತ್ರ ಹೇಳುತ್ತದೆ. ತಂಡವು ಅಗತ್ಯವಿರುವ ಎಲ್ಲಾ ಕೋವಿಡ್ ಸಂಬಂಧಿತ ಮಾನದಂಡವನ್ನು ಪಾಲಿಸಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ಹೊಂದಿದೆ ಎಂದು ಐಪಿಎಸಿ ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಿರುವ ನಡುವೆ ಪ್ರಶಾಂತ್ ಕಿಶೋರ್ನ ತಂಡದ ಗೃಹ ಬಂಧನದ ಸುದ್ದಿ ವರದಿಯಾಗಿದೆ. 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ವಿರುದ್ಧ ವಿಪಕ್ಷಗಳ ಏಕತೆಯನ್ನು ಹೆಚ್ಚಿಸುವುದು ಈ ಭೇಟಿಯ ಉದ್ದೇಶವಾಗಿದೆ. ಈ ಹಿನ್ನೆಲೆ ದೀದಿ ಹಲವಾರು ವಿಪಕ್ಷ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗುತ್ತಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ಮತದಾನ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಕ್ಷದ ಸಂಸದ ಮತ್ತು ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಈ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ರ ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡವನ್ನು ಹೊಟೇಲ್ನಿಂದ ಹೊರಹೋಗಲು ಬಿಡದ ಬಗ್ಗೆ ಟ್ವೀಟ್ ಮಾಡಿದ್ದಾರೆ.
''ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡ ಭೂಮಿಗೆ ಕಾಲಿಡುವ ಮೊದಲೇ ತ್ರಿಪುರದ ಬಿಜೆಪಿಗೆ ಭಯ ಆರಂಭವಾಗಿದೆ. ಪಶ್ಚಿಮಬಂಗಾಳದಲ್ಲಿ ನಮ್ಮ ಗೆಲುವಿನಿಂದ ಬಿಜೆಪಿಗರು ತುಂಬಾ ಗಲಿಬಿಲಿಗೊಂಡಿದ್ದಾರೆ. ಈಗ 23 ಐಪಿಎಸಿ ಉದ್ಯೋಗಿಗಳನ್ನು ಗೃಹಬಂಧನದಲ್ಲಿರಿಸಿದ್ದಾರೆ.
ಈ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವು ಬಿಜೆಪಿಯ ದುರಾಡಳಿತದಲ್ಲಿ ಆಗುವ ಸಾವಿರ ಸಾವುಗಳಡಿಯಲ್ಲಿ ಸಾಯುತ್ತದೆ,'' ಎಂದು ಆರೋಪ ಮಾಡಿದ್ದಾರೆ.
ಆದರೆ ಹೋಟೆಲ್ನಲ್ಲಿ ತಂಡವನ್ನು ಪ್ರಶ್ನಿಸುವುದು ಸಾಮಾನ್ಯ ತಪಾಸಣೆಯ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ತ್ರಿಪುರದ ಪೊಲೀಸ್ ಅಧೀಕ್ಷಕ ಮಾಣಿಕ್ ದಾಸ್, "ಹೊರಗಿನವರು ಸುಮಾರು 22 ಜನರು ವಿವಿಧ ಸ್ಥಳಗಳಲ್ಲಿ ಸುತ್ತಾಡುತ್ತಿದ್ದರು. ಕೋವಿಡ್ ನಿರ್ಬಂಧಗಳು ಜಾರಿಯಲ್ಲಿರುವುದರಿಂದ, ಈ ಜನರು ಆಗಮಿಸಲು ಹಾಗೂ ನಗರದಲ್ಲಿ ಉಳಿಯುವ ಹಿಂದಿನ ಕಾರಣಗಳನ್ನು ನಾವು ವಿಚಾರಿಸುತ್ತಿದ್ದೇವೆ. ಈ ಜನರು ಎಲ್ಲರೂ ಸೋಮವಾರ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಿದ್ದರು. ವರದಿಗಳು ಇನ್ನಷ್ಟೇ ಬರಬೇಕಾಗಿದೆ,'' ಎಂದು ತಿಳಿಸಿದ್ದಾರೆ.
"ಇನ್ನು ಈ ಐಪಿಎಸಿ ಸದಸ್ಯರ ಆರ್ಟಿಪಿಸಿಆರ್ ಪರೀಕ್ಷೆಯ ವರದಿಗಳು ನಾಳೆ ಬರಲಿವೆ. ಸಂಶೋಧನೆಗೆ ಸಂಬಂಧಿಸಿದ ಕೆಲವು ಕೆಲಸಗಳಿಗಾಗಿ ತಂಡವು ಇಲ್ಲಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಪರೀಕ್ಷಾ ಫಲಿತಾಂಶಗಳು ಮತ್ತು ತನಿಖೆಯ ವರದಿ ಬಂದ ಬಳಿಕ ಈ ತಂಡದ ಬಿಡುಗಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು," ಎಂದು ಕೂಡಾ ಪಶ್ಚಿಮ ತ್ರಿಪುರದ ಪೊಲೀಸ್ ಅಧೀಕ್ಷಕ ಮಾಣಿಕ್ ದಾಸ್ ಹೇಳಿದ್ದಾರೆ.
ತೃಣಮೂಲ ರಾಜ್ಯ ಘಟಕದ ಮುಖ್ಯಸ್ಥ ಆಶಿಶ್ ಲಾಲ್ ಸಿಂಘಾ ಇದು "ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ಕಿಡಿಕಾರಿದ್ದಾರೆ. "ತ್ರಿಪುರದ ನಿವಾಸಿಯಾಗಿದ್ದರಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇದು ತ್ರಿಪುರದ ಸಂಸ್ಕೃತಿಯಲ್ಲ. ತ್ರಿಪುರದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಅವ್ಯವಹಾರದಿಂದಾಗಿ ಟಿಎಂಸಿಗೆ ಅಗಾಧ ಪ್ರತಿಕ್ರಿಯೆ ಮತ್ತು ಬೆಂಬಲ ದೊರೆತ ನಂತರ ಬಿಜೆಪಿ ಭಯಭೀತರಾಗಿದೆ," ಎಂದು ಟೀಕಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications