ನಂದಿಗ್ರಾಮದಲ್ಲಿ ಮಮತಾ ಸೋಲು ಖಚಿತ ಎಂದರೇ ಪ್ರಶಾಂತ್ ಕಿಶೋರ್?: ಆಂತರಿಕ ಸಮೀಕ್ಷೆ ಸೋರಿಕೆ?
ಕೋಲ್ಕತಾ, ಮಾರ್ಚ್ 31: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಕದನ ಸಾಕಷ್ಟು ಕುತೂಹಲ ಮೂಡಿಸಿದೆ. ಟಿಎಂಸಿ-ಬಿಜೆಪಿ ನಡುವೆ ನೇರ ಹಣಾಹಣಿ ಎಂದೇ ಕರೆಯಲಾಗಿರುವ ಬಂಗಾಳದಲ್ಲಿ ಬಿಜೆಪಿ ನಿಜಕ್ಕೂ ಅಧಿಕಾರಕ್ಕೆ ಬರುವ ಅವಕಾಶ ಇದೆಯೇ? ಎಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲಬಹುದು? ನಂದಿಗ್ರಾಮದಲ್ಲಿ ದೀದಿಯ ಸವಾಲು ಏನಾಗಲಿದೆ ಎನ್ನುವುದು ಅತಿ ಹೆಚ್ಚು ಕಾತರ ಮೂಡಿಸಿರುವ ಪ್ರಶ್ನೆಗಳು.
ಈ ಬಾರಿಯೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಯಾವುದೇ ಅಡೆತಡೆಗಳಿಲ್ಲದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಇಲ್ಲಿ ಯಾವುದೇ ರೀತಿಯ ಪೈಪೋಟಿ ನೀಡಲಾರದು ಎಂದು ಟಿಎಂಸಿ ಪರ ಚುನಾವಣಾ ತಂತ್ರ ರೂಪಿಸುತ್ತಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಆದರೆ, ಪ್ರಶಾಂತ್ ಕಿಶೋರ್ ನಡೆಸಿರುವ ಆಂತರಿಕ ಸಮೀಕ್ಷೆಯೊಂದು ಸೋರಿಕೆಯಾಗಿದ್ದು, ಅದರಲ್ಲಿ ಅವರು ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮಮತಾ ಸೋಲು ಅನುಭವಿಸಲಿದ್ದಾರೆ ಎಂದು ಉಲ್ಲೇಖಿಸಿರುವ ಚಿತ್ರ ವೈರಲ್ ಆಗಿದೆ.
ಬಾಂಗ್ಲಾದೇಶಕ್ಕೆ ಮೋದಿ ಪ್ರವಾಸದ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ನ ಆಂತರಿಕ ಸಮೀಕ್ಷೆಯ ವರದಿ ಎನ್ನಲಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಮಮತಾ ಪರವಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಅವರೇ, ನಂದಿಗ್ರಾಮದಲ್ಲಿ ದೀದಿ ಸೋಲುವ ಸಾಧ್ಯತೆ ಹೆಚ್ಚಿದೆ ಎಂದಿರುವುದು ಸಂಚಲನ ಮೂಡಿಸಿದೆ. ಮುಂದೆ ಓದಿ.
ಮಮತಾಗೆ ಸೋಲು ಎಂದ ಸಮೀಕ್ಷೆ
ಏಪ್ರಿಲ್ 1ರಂದು ಎರಡನೆಯ ಹಂತದ ಚುನಾವಣೆಯಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಂತದ ಚುನಾವಣೆಯಲ್ಲಿ ಬಿಜೆಪಿ 23 ಸೀಟುಗಳಲ್ಲಿ ಜಯಗಳಿಸಿದರೆ, ಟಿಎಂಸಿ ಕೇವಲ ಐದು ಸೀಟುಗಳಿಗೆ ಸೀಮಿತವಾಗಲಿದೆ. ಅಲ್ಲದೆ, ನಂದಿಗ್ರಾಮದಲ್ಲಿ ಮಮತಾ ಸೋಲು ಅನುಭವಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ ಎನ್ನಲಾಗಿದೆ. ಆದರೆ ಇದರ ಅಧಿಕೃತತೆ ಇದುವರೆಗೂ ದೃಢಪಟ್ಟಿಲ್ಲ.
ಇದು ನಕಲಿ ವರದಿ ಎಂದ ಟಿಎಂಸಿ
ಇದು ನಕಲಿ ವರದಿ. ನಂದಿಗ್ರಾಮದಲ್ಲಿ ಬಿಜೆಪಿ ಭಾರಿ ಅಂತರದ ಸೋಲು ಕಾಣಲಿದೆ ಎಂದು ಟಿಎಂಸಿ ಹೇಳಿದೆ. 'ದೊಡ್ಡ ಸೋಲನ್ನು ನಿರೀಕ್ಷಿಸಿರುವ ಬಿಜೆಪಿ, ಸುಳ್ಳು ಸುದ್ದಿಗಳನ್ನು ಹರಡಿಸುವ ಮೂಲಕ ತನ್ನಿಂದ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿದೆ. ಈ ದಾಖಲೆಯು ಬಿಜೆಪಿಯ ನಾಯಕರು ಮತ್ತು ಅವರ ಭರವಸೆಗಳಂತೆಯೇ ನಕಲಿ ಮತ್ತು ವಿಶ್ವಾಸಾರ್ಹವಾಗಿಲ್ಲ. ನಕಲಿ ವರದಿಗಳನ್ನು ಹಂಚುವುದರಿಂದ ಪ್ರಯೋಜನವಾಗುವುದಿಲ್ಲ' ಎಂದು ಅದು ವ್ಯಂಗ್ಯವಾಡಿದೆ.
ಹೈಪ್ ಸೃಷ್ಟಿಸಿದ್ದ ಬಿಜೆಪಿ
ಬಂಗಾಳದ ಚುನಾವಣೆಯು ಮುಖ್ಯಮಂತ್ರಿ ಮಮತಾ ಮತ್ತು ಪ್ರಧಾನಿ ಮೋದಿ ಅವರ ನಡುವಿನ ಹೋರಾಟ. ಉಳಿದ ವಿಚಾರಗಳು ಇಲ್ಲಿ ಮುಖ್ಯವಲ್ಲ. ಕಳೆದ ವರ್ಷ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಬಿಜೆಪಿಯ ಸುತ್ತಲೂ ಅತಿಯಾದ ಪ್ರಚಾರ ಸೃಷ್ಟಿಸಲಾಗಿತ್ತು. ರಾಜ್ಯದಲ್ಲಿ ಬಿಜೆಪಿ 200 ಸೀಟುಗಳಲ್ಲಿ ಗೆಲ್ಲಲಿದೆ, ಅಧಿಕಾರಕ್ಕೆ ಬರಲಿದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಇದು ಸತ್ಯವಲ್ಲ ಎಂದು ಸಾರ್ವಜನಿಕವಾಗಿ ಹೇಳುವುದು ನಮಗೆ ಮುಖ್ಯವಾಗಿತ್ತು. ಬಿಜೆಪಿ 200 ಸೀಟುಗಳನ್ನು ಗೆಲ್ಲುವ ಯಾವ ಸನ್ನಿವೇಶವೂ ಆಗಲೂ ಇರಲಿಲ್ಲ. ಈಗ ಕೂಡ ಇಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ನೂರು ಸೀಟು ದಾಟಿದರೂ ಕೆಲಸ ತ್ಯಜಿಸುತ್ತೇನೆ
'ಇತರೆ ರಾಜ್ಯಗಳಿಗಿಂತ ಬಂಗಾಳದಲ್ಲಿನ ರಾಜಕೀಯ ವಿಭಿನ್ನ. ಆದರೆ ಕಳೆದ 30-35 ವರ್ಷಗಳಿಗಿಂತ ಈ ಬಾರಿಯ ಚುನಾವಣೆ ವಿಶಿಷ್ಟವಾಗಿದೆ. ಬಂಗಾಳದಲ್ಲಿ ಎಂದಿಗೂ ಅಡಳಿತಾರೂಢ ಪಕ್ಷಕ್ಕೆ ಕೇಂದ್ರದಲ್ಲಿನ ಅಡಳಿತ ಪಕ್ಷ ಸವಾಲು ಹಾಕಿದ್ದೇ ಇಲ್ಲ. ಎಡಪಕ್ಷಗಳು ಆಡಳಿತ ನಡೆಸುತ್ತಿದ್ದಾಗ ಅದಕ್ಕೆ ಕಾಂಗ್ರೆಸ್ ಸವಾಲೊಡ್ಡಿರಲಿಲ್ಲ. ಇದೇ ಮೊದಲ ಬಾರಿ ಪ್ರಾದೇಶಿಕ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸವಾಲು ಹಾಕಿದೆ. ಆದರೆ ಅದಕ್ಕೆ ಗೆಲ್ಲಲು ಸಾಧ್ಯವೇ ಇಲ್ಲ. ನೂರಂಕಿ ದಾಟಲು ಅವರು ಹೆಣಗಾಡುವುದು ಖಚಿತ. ಈ ಹೇಳಿಕೆಗೆ ನಾನು ಬದ್ಧ. ಒಂದು ವೇಳೆ ಅವರು ಅದನ್ನು ಸಾಧಿಸಿದರೆ ನಾನು ಯಾರಿಗೂ ರಾಜಕೀಯ ನೆರವು ನೀಡುವುದಿಲ್ಲ. ಈ ಕ್ಷೇತ್ರವನ್ನು ನಾನು ತ್ಯಜಿಸುತ್ತೇನೆ' ಎಂದು ಪ್ರಶಾಂತ್ ಪುನರುಚ್ಚರಿಸಿದ್ದಾರೆ.
ಗೆಲ್ಲಲು ಸಹಾಯ ಮಾಡುವಂತೆ ಎದುರಾಳಿ ಸುವೇಂದು ಅಧಿಕಾರಿ ಆಪ್ತನಿಗೆ ಮಮತಾ ಮನವಿ!