ಪಶ್ಚಿಮ ಬಂಗಾಳ; "ಗೋಲಿಮಾರೋ" ಘೋಷಣೆ ಕೂಗಿದ ಮೂವರು ಬಿಜೆಪಿ ಕಾರ್ಯಕರ್ತರ ಬಂಧನ
ಕೋಲ್ಕತ್ತಾ, ಜನವರಿ 21: ಮುಂಬರುವ ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸನ್ನದ್ಧವಾಗುತ್ತಿದ್ದು, ಈಗಾಗಲೇ ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ಪ್ರಚಾರ ಮೆರವಣಿಗೆಯಲ್ಲಿ ಕೆಲವು ಅಹಿತಕರ ಘಟನೆಗಳೂ ವರದಿಯಾಗುತ್ತಿದ್ದು, "ಗೋಲಿ ಮಾರೋ"ದಂಥ ಪ್ರಚೋದನಾಕಾರಿ ಘೋಷಣೆ ಮತ್ತೆ ಮತ್ತೆ ಕೇಳಿಬರುತ್ತಿವೆ.
ಬುಧವಾರ ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿಯೂ "ಗೋಲಿ ಮಾರೋ" (ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ) ಘೋಷಣೆ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂದೂರು ದಾಖಲಿಸಿಕೊಂಡಿದ್ದು, ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಈಚೆಗೆ ಸಮಾವೇಶವೊಂದರಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು 'ಬಂಗಾಳದ ದೇಶದ್ರೋಹಿಗಳಿಗೆ ಗುಂಡಿಕ್ಕಿ' ಎಂದು ಘೋಷಣೆ ಕೂಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿ ಘಟಕ, ಟಿಎಂಸಿ ತನ್ನದು ಶಾಂತಿಯ ಸಮಾವೇಶ ಎಂದು ಹೇಳಿಕೊಳ್ಳುತ್ತಿದೆ. ಆದರೆ ದಕ್ಷಿಣ ಕೋಲ್ಕತಾದ 'ಶಾಂತಿ ಜಾಥಾ'ದಲ್ಲಿ 'ಗೋಲಿ ಮಾರೋ' ಘೋಷಣೆ ಕೇಳಿಬಂದಿದೆ" ಎಂದು ಟೀಕಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಟಿಎಂಸಿ ಸಚಿವ ಫರ್ಹಾಮ್ ಹಕಿಮ್, "ನಾವು ಇದಕ್ಕೆ ಬೆಂಬಲ ನೀಡುವುದಿಲ್ಲ. ಇದು ಬಿಜೆಪಿ ಕೇಂದ್ರ ಸಚಿವರೊಬ್ಬರು ಮಾಡಿದ್ದ ಘೋಷಣೆ. ಸಮಾವೇಶದಲ್ಲಿ ಕೂಗಿದ್ದು ನಿಜವಾದ ಟಿಎಂಸಿ ಬೆಂಬಲಿಗರೇ ಅಥವಾ ಹೊರಗಿನವರೇ ಎಂಬುದನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದೇನೆ. ನಮಗೆ ಶಾಂತಿಯಲ್ಲಿ ನಂಬಿಕೆ ಇದೆ' ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಬುಧವಾರ ಬಿಜೆಪಿ ಸಮಾವೇಶದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಹೂಗ್ಲಿ ಜಿಲ್ಲೆಯ ಬಿಜೆಪಿ ಯುವ ವಿಭಾಗದ ಮುಖ್ಯಸ್ಥ ಸುರೇಶ್ ಸಾಹು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುವೇಂದು ಅಧಿಕಾರಿ ಹಾಗೂ ಸಂಸದ ಲಾಕೆಟ್ ಚಟರ್ಜಿ ಹಾಗೂ ರಾಜ್ಯ ಸಭಾ ಸದಸ್ಯರಾದ ಸ್ವಪನ್ ದಾಸ್ ಗುಪ್ತಾ ಅವರನ್ನು ಮೆರವಣಿಗೆ ಮಾಡುತ್ತಿದ್ದ ಟ್ರಕ್ ನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಈ ಘೋಷಣೆ ಕೂಗಿದ್ದರು.












Click it and Unblock the Notifications