ಪಶ್ಚಿಮ ಬಂಗಾಳ; ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸುಳಿವು ಕೊಟ್ಟ ಬಿಜೆಪಿ ಮುಖ್ಯಸ್ಥ
ನವದೆಹಲಿ, ಮಾರ್ಚ್ 30: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಕುತೂಹಲ ಮುಂದುವರೆದಿದ್ದು, ಈ ಮಧ್ಯೆ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ದಿಲೀಪ್ ಘೋಷ್, ಹಾಲಿ ಶಾಸಕರೇ ಮುಖ್ಯಮಂತ್ರಿಯಾಗಬೇಕೆಂದೇನು ಇಲ್ಲ ಎಂದು ಹೇಳುವ ಮೂಲಕ ಸಣ್ಣ ಸುಳಿವನ್ನು ನೀಡಿದ್ದಾರೆ.
ಈ ಹಿಂದೆ, ಮಿಡ್ನಾಪುರದಿಂದ ಶಾಸಕರಾಗಿರುವ ದಿಲೀಪ್ ಘೋಷ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಮುಂದುವರೆದಿತ್ತು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕ ದಿಲೀಫ್ ಘೋಷ್ ಪ್ರತಿಪಾದಿಸಿದ್ದು, ಪಕ್ಷಕ್ಕೆ ಬಲವಾದ ಬೆಂಬಲ ಸಿಕ್ಕಿದೆ. ರಾಜ್ಯದಲ್ಲಿ ಪಕ್ಷ ಮುನ್ನೆಲೆಗೆ ಬಂದೇ ಬರುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲ ಹಂತದ ಮತದಾನದ ನಂತರ ಬಿಜೆಪಿಗೆ ಗೆಲುವಿನ ವಿಶ್ವಾಸ ಬಂದಿದೆ. ಆದರೆ ಟಿಎಂಸಿ ನಾಯಕರಿಗೆ ಒತ್ತಡ ಉಂಟಾಗಿದೆ. ಪ್ರತಿ ಹಂತದ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವಿನೆಡೆಗೆ ಸಾಗುತ್ತದೆ. ಪ್ರತಿ ಹಂತದಲ್ಲೂ ಟಿಎಂಸಿ ಕಾರ್ಯಕರ್ತರಿಗೆ ಸೋಲಿನ ಅನುಭವವಾಗುತ್ತದೆ ಎಂದು ಘೋಷ್ ಹೇಳಿದ್ದಾರೆ.
ಬಿಜೆಪಿ ಗೆದ್ದರೆ ಹಾಲಿ ಶಾಸಕರು ಮುಖ್ಯಮಂತ್ರಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಘೋಷ್, "ಇದನ್ನು ಪಕ್ಷ ನಿರ್ಧರಿಸುತ್ತದೆ. ಆದರೆ ಹಾಲಿ ಶಾಸಕರೇ ಮುಖ್ಯಮಂತ್ರಿಯಾಗುವುದು ಅನಿವಾರ್ಯವೇನಲ್ಲ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದಾಗ ಅವರು ಶಾಸಕರಾಗಿರಲಿಲ್ಲ" ಎಂದು ಉತ್ತರಿಸಿದ್ದಾರೆ.












Click it and Unblock the Notifications