ಬಂಗಾಳದಲ್ಲಿ ವಾಸವಿದ್ದರೆ ಬೆಂಗಾಲಿ ಕಲಿಯಲೇಬೇಕು: ದೀದಿ ಎಚ್ಚರಿಕೆ
ಕೋಲ್ಕತಾ, ಜೂನ್ 15: ಲೋಕಸಭೆ ಚುನಾವಣೆಯಲ್ಲಿನ ಆಘಾತಕಾರಿ ಹಿನ್ನಡೆ ಬಳಿಕ ರಾಜ್ಯದಲ್ಲಿ ಬಿಜೆಪಿ ನೆಲೆಯೂರದಂತೆ ತಡೆಯಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಷೆಯ ದಾಳ ಮುಂದಿಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಾಸಿಸುವವರು ಬೆಂಗಾಲಿ ಮಾತನಾಡಲು ಕಲಿಯಲೇಬೇಕು. ಬೆಂಗಾಲಿ ಭಾಷಿಕ ಜನರನ್ನು ಬೆಂಗಾಲಿಯೇತರರು ಗುರಿಯಾಗಿಸುವುದನ್ನು ಮುಂದುವರಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಕಂಚ್ರಪರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾವು ಬಂಗಾಳವನ್ನು ಮುಂದಕ್ಕೆ ತರಬೇಕಿದೆ. ನಾನು ಬಿಹಾರ, ಉತ್ತರ ಪ್ರದೇಶ, ಪಂಜಾಬ್ಗಳಿಗೆ ಹೋದಾಗ ಅವರ ಭಾಷೆಯನ್ನೇ ಮಾತನಾಡುತ್ತೇನೆ. ಯಾರಾದರೂ ಬಂಗಾಳದಲ್ಲಿ ವಾಸಿಸುತ್ತಿದ್ದರೆ, ಅವನು ಅಥವಾ ಅವಳು ಬೆಂಗಾಲಿ ಕಲಿಯಬೇಕು' ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹರಡಲು ಬಿಜೆಪಿಯೇ ಕಾರಣ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೆಂಗಾಲಿ ಕಲಿಯಲೇಬೇಕು
'ನಾನು ಬಿಹಾರದಲ್ಲಿ ಹಿಂದಿಯಲ್ಲಿ ಮಾತನಾಡುತ್ತೇನೆ. ಏಕೆಂದರೆ ಅದರ ಭಾಷೆ ಹಿಂದಿ. ತಮಿಳುನಾಡಿನಲ್ಲಿ ಮಾತ್ರವೇ ನಾನು ಕೆಲವು ಪದಗಳನ್ನು ತಮಿಳಿನಲ್ಲಿ ಮಾತನಾಡುತ್ತೇನೆ. ಏಕೆಂದರೆ ನನಗೆ ಆ ಭಾಷೆ ಬರುವುದಿಲ್ಲ. ನೀವು ಬಂಗಾಲದಲ್ಲಿ ವಾಸಿಸುವುದಾದರೆ ಬೆಂಗಾಲಿಯಲ್ಲಿ ಮಾತನಾಡಬೇಕು. ನೀವು ಬೇರೆ ಭಾಷೆ ಮಾತನಾಡಿದರೆ ನಮಗೇನೂ ಸಮಸ್ಯೆ ಇಲ್ಲ. ಆದರೆ ನೀವು ಬೆಂಗಾಲಿಯನ್ನೂ ಕಲಿಯಲೇಬೇಕು' ಎಂದರು.

ಬಂಗಾಳದ ಜನರು ಸುಮ್ಮನೆ ಇರುವುದಿಲ್ಲ
'ಬಂಗಾಳದಲ್ಲಿ ಉಳಿದುಕೊಂಡು ಬೈಕ್ಗಳಲ್ಲಿ ಸುತ್ತಾಡುವ ಕ್ರಿಮಿನಲ್ಗಳನ್ನು ನಾನು ಸಹಿಸುವುದಿಲ್ಲ. ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಬಂಗಾಳಿಯೇತರ ವ್ಯಕ್ತಿಗಳು ಬೆಂಗಾಲಿ ಮಾತನಾಡುವ ಜನರನ್ನು ಗುರಿಯಾಗಿರಿಸಿಕೊಂಡರೆ ಬಂಗಾಳದ ಜನರು ಸುಮ್ಮನೆ ಇರುತ್ತಾರೆಯೇ? ಮಹಾರಾಷ್ಟ್ರ ಮತ್ತು ಗುಜರಾತ್ನಿಂದ ಬಿಹಾರಿಗಳನ್ನು ಹೊರಹಾಕಿದಂತೆ ನಾವು ಜನರನ್ನು ಹೊರಹಾಕಲು ಬಯಸುವುದಿಲ್ಲ. ಆದರೆ, ಬಂಗಾಳದಲ್ಲಿ ವಾಸಿಸುತ್ತಾ, ಬಂಗಾಳಿಗಳನ್ನೇ ಬೆದರಿಸುವುದನ್ನು ಎಷ್ಟು ಕಾಲ ಎಂದು ಸಹಿಸಿಕೊಳ್ಳಲು ಸಾಧ್ಯ? ನಾನು ಇದನ್ನು ಸಹಿಸುವುದಿಲ್ಲ' ಎಂದರು.

ಬಿಜೆಪಿಯಿಂದ ಕೋಮು ಸಂಘರ್ಷದ ವಾತಾವರಣ
ಬಿಜೆಪಿ ಬಂಗಾಳಿಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಮಾಡುತ್ತಿದೆ. ಧಾರ್ಮಿಕ ಮೂಲಭೂತವಾದದ ವಿಷವನ್ನು ಬಿತ್ತುವ ಮೂಲಕ ಕೋಮುವಾದದ ಉದ್ವಿಗ್ನತೆಯ ವಾತಾವರಣ ಸೃಷ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ ಸೃಷ್ಟಿಸುತ್ತಿದ್ದಾರೆ. ರಾಜಬೊಂಗಿಗಳು ಮತ್ತು ಬಂಗಾಳಿಗಳು ಹಾಗೂ ಗೋರ್ಖಾಗಳು ಮತ್ತು ಬಂಗಾಳಿಗಳ ನಡುವೆ ಭಿನ್ನಾಭಿಪ್ರಾಯ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ವಾಸಿಸುತ್ತಿರುವ ಬಿಹಾರಿಗಳು ಮತ್ತು ಉತ್ತರ ಪ್ರದೇಶದ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಕೋಟ್ಯಧಿಪತಿ ಮಗಳಲ್ಲ
'ನೀವು ನನ್ನನ್ನು ನಿಂದಿಸುವುದರಿಂದ ಏನನ್ನೂ ಸಂಪಾದಿಸುವುದಿಲ್ಲ. ನೀವು ನನ್ನನ್ನು ಹೆಚ್ಚು ನಿಂದಿಸಿದಷ್ಟೂ ನಾವು ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ. ಮಮತಾ ಬ್ಯಾನರ್ಜಿ ವಿರುದ್ಧ ನಿಂದನಾತ್ಮಕ ಮಾತುಗಳನ್ನು ಆಡುವುದು ಸುಲಭ. ಏಕೆಂದರೆ ಆಕೆ ಕೋಟ್ಯಧಿಪತಿಯ ಮಗಳು ಅಲ್ಲ' ಎಂದು ಹೇಳಿದರು.












Click it and Unblock the Notifications