ಎಡರಂಗದ ಪ್ರಭಾವ ಇರುವ ಪ. ಬಂಗಾಳದಲ್ಲಿಯೇ ಬಂದ್ ಇಲ್ಲ
ಕೋಲ್ಕತಾ, ಜನವರಿ 8: ಸಾರಿಗೆ ಮಸೂದೆ ಮತ್ತು ಕಾರ್ಮಿಕ ವಿರೋಧಿ ನೀತಿ ವಿರುದ್ಧ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಕಾರ್ಮಿಕ ಹೋರಾಟ ಮುಂಚೂಣಿಯಲ್ಲಿರುವ ಪಶ್ಚಿಮ ಬಂಗಾಳದಲ್ಲಿಯೇ ಬೆಂಬಲ ವ್ಯಕ್ತವಾಗುತ್ತಿಲ್ಲ.
ವಾಣಿಜ್ಯ ಒಕ್ಕೂಟಗಳು ಕರೆ ನೀಡಿರುವ ಬಂದ್ ರಾಜ್ಯದಲ್ಲಿ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರದ ಜನ ವಿರೋಧಿ ನೀತಿ ವಿರೋಧಿಸಿ 48 ಗಂಟೆಗಳ ಭಾರತ್ ಬಂದ್ಗೆ 10 ಕೇಂದ್ರ ವಾಣಿಜ್ಯ ಒಕ್ಕೂಟಗಳು ಕರೆ ನೀಡಿವೆ.

'ಈ ಬಗ್ಗೆ ಒಂದು ಪದವನ್ನೂ ಬಳಸಲು ನಾನು ಇಷ್ಟಪಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ನಾವು ಯಾವುದೇ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದೇವೆ. ಈಗ ಆಗಿರುವುದು ಸಾಕು. ಕಳೆದ 34 ವರ್ಷಗಳಲ್ಲಿ ಬಂದ್ಗೆ ಕರೆ ನೀಡುವ ಮೂಲಕ ಅವರು (ಎಡ ರಂಗ) ರಾಜ್ಯವನ್ನು ಹಾಳುಗೆಡವಿದ್ದಾರೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಯಾವುದೇ ಉದ್ಯೋಗಿ ಮಂಗಳವಾರ ಮತ್ತು ಬುಧವಾರ ಸಾಂದರ್ಭಿಕ ರಜೆ (ಸಿಎಲ್) ಅಥವಾ ಅರ್ಧ ದಿನದ ರಜೆ ತೆಗೆದುಕೊಳ್ಳುವುದನ್ನು ನಿರ್ಬಂಧಿಸಿಲಾಗಿದೆ ಎಂದು ಪ. ಬಂಗಾಳ ಸರ್ಕಾರ ಪ್ರಕಟಿಸಿದೆ.
ಅಲ್ಲದೆ ಎರಡು ದಿನದ ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರಜೆಗಳನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ಒಂದು ವಾರದ ಹಿಂದೆಯೇ ಸೂಚನೆ ಹೊರಡಿಸಿತ್ತು.
ರಾಜ್ಯದಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಕೋಲ್ಕತಾ ನಗರದಲ್ಲಿ 500 ಹೆಚ್ಚುವರಿ ಬಸ್ಗಳು ರಸ್ತೆಗಿಳಿದಿವೆ. ಖಾಸಗಿ ಬಸ್ ಮಾಲೀಕರು ಮತ್ತು ಟ್ಯಾಕ್ಸಿ ಸಂಘಟನೆನೆಗಳು ಹಾಗೂ ಆಪ್ ಆಧಾರಿತ ಕ್ಯಾಬ್ ಸೇವೆಗಳು ಎಂದಿನಂತೆ ಓಡಾಟ ನಡೆಸುತ್ತಿವೆ.












Click it and Unblock the Notifications