ನಾರದ ಸ್ಟಿಂಗ್ ಪ್ರಕರಣ: ಪಶ್ಚಿಮ ಬಂಗಾಳದ ಸಚಿವರ ವಿರುದ್ಧ ಚಾರ್ಜ್ಶೀಟ್
ಕೋಲ್ಕತಾ, ಸೆಪ್ಟೆಂಬರ್ 01: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ತಲ್ಲಣಗೊಳಿಸಿದ ನಾರದ ಸ್ಟಿಂಗ್ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಕ್ಯಾಬಿನೆಟ್ ಸಚಿವರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಜೊತೆಗೆ ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಮಾಜಿ ಮೇಯರ್, ಸಚಿವ ಸೋವನ್ ಚಟರ್ಜಿ ಅವರ ವಿರುದ್ಧ ವಿಶೇಷ ನ್ಯಾಯಲಯದಲ್ಲಿ ಜಾರಿ ನಿರ್ದೇಶನಾಲಯದಿಂದ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
ದೋಷರೋಪಣ ಪಟ್ಟಿಯಲ್ಲಿ ಹೆಸರಿಸಲಾಗಿರುವ ಮುಖಂಡರಿಗೆ ನ್ಯಾಯಾಲಯವು ಸಮನ್ಸ್ ನೀಡಿದ್ದು, ಆರೋಪಿಗಳು ನವೆಂಬರ್ 16ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಹಾಲಿ ಶಾಸಕರ ವಿರುದ್ಧ ಕ್ರಮ ಜರುಗಿಸುವ ಮುನ್ನ ಬಂಗಾಳದ ವಿಧಾನಸಭಾಪತಿಗಳ ಅನುಮತಿ ಪಡೆದು ಕ್ರಮ ಜರುಗಿಸಲು ಸೂಚಿಸಲಾಗಿದೆ.
ಇದಕ್ಕೂ ಮುನ್ನ 2016ರಲ್ಲಿ ಭಾರಿ ಗದ್ದಲ ಉಂಟು ಮಾಡಿದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹಕೀಂ, ಮಿತ್ರಾ ಹಾಗೂ ಚಟರ್ಜಿ ಮನೆ, ಕಚೇರಿ ಮೇಲೆ ದಾಳಿ ನಡೆಸಿ, ಬಂಧಿಸಲಾಗಿತ್ತು. ನಂತರ ಎಲ್ಲರೂ ಜಾಮೀನು ಪಡೆದು ಹೊರ ಬಂದಿದ್ದರು. ಇದು ರಾಜಕೀಯ ದ್ವೇಷದ ಕ್ರಮ ಎಂದು ಸಿಬಿಐ ಕಚೇರಿ ವಿರುದ್ಧ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸಿದ್ದರು.

ಕೊಲ್ಕೊತ್ತಾ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ(ಇ.ಡಿ) ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ. ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 120 ಬಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 13 (1)(ಎ) 13 (1)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 13 ನಾಯಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಲಾಗಿತ್ತು, ಹಲವರನ್ನು ಬಂಧಿಸಲಾಗಿತ್ತು.
ಬಂಧನವಾದ ಒಂದು ದಿನದ ನಂತರ ವಿಶೇಷ ನ್ಯಾಯಾಲಯವು ನಾಲ್ವರಿಗೆ ಜಾಮೀನು ನೀಡಿದರೂ, ಕೆಲವೇ ಗಂಟೆಗಳಲ್ಲಿ ಕೋಲ್ಕತ್ತಾ ಹೈಕೋರ್ಟ್ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು. ನಾಲ್ವರನ್ನು ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿಗೆ ಕರೆದೊಯ್ಯಲಾಗಿತ್ತು.
ಏನಿದು 'ನಾರದಾ ಸ್ಟಿಂಗ್'?: ಮ್ಯಾಥ್ಯೂ ಸ್ಯಾಮುಯಲ್ ನೇತೃತ್ವ ನಾರದಾ ಎನ್ನುವ ಸುದ್ದಿ ವಾಹಿನಿ ಈ ಸ್ಟಿಂಗ್ ಆಪರೇಷನ್ ನಡೆಸಿತ್ತು. 2016 ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಈ ಸ್ಟಿಂಗ್ ಆಪರೇಷನ್ ನಡೆಸಿ ಹಲವು ಚಾನಲ್ಗಳಲ್ಲಿ ಪ್ರಸಾರವಾಗಿತ್ತು. ಈ ಕುಟುಕು ಕಾರ್ಯಾಚರಣೆಯಲ್ಲಿ 13 ಟಿಎಂಸಿ ನಾಯಕರು ಲಂಚ ತೆಗೆದುಕೊಳ್ಳುವ ದೃಶ್ಯಗಳಿದ್ದವು. ನಾರದಾ ಚಾನಲ್ ಖೊಟ್ಟಿ ಕಂಪೆನಿಯೊಂದನ್ನು ಸೃಷ್ಟಿಸಿ ಈ ನಾಯಕರ ಬಳಿ ಸಹಾಯ ಕೇಳುವ ನೆಪದಲ್ಲಿ ಹೋಗಿದ್ದರು. ನಂತರ ಲಂಚ ನೀಡಿದ್ದರು. ಇವೆಲ್ಲಾ ವಿಡಿಯೋದಲ್ಲಿ ದಾಖಲಾಗಿತ್ತು. ಕೊಲ್ಕೊತ್ತಾ ಹೈಕೋರ್ಟ್ ಮಾರ್ಚ್ 17, 2017ರಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ತನಿಖೆಗೆ ತಡೆ ನೀಡುವಂತೆ ಕೋರಿ ಪಶ್ಚಿಮ ಬಂಗಾಳ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಯಿತಾದರೂ ಅರ್ಜಿ ತಿರಸ್ಕರಿಸಿದ್ದರಿಂದ ತನಿಖೆ ಮುಂದುವರಿದಿದೆ.












Click it and Unblock the Notifications