ನಾರದ ಹಗರಣ: ಟಿಎಂಸಿ ಮುಖಂಡರ ಮಧ್ಯಂತರ ಜಾಮೀನು ರದ್ದು
ಕೋಲ್ಕತಾ, ಮೇ 18: ನಾರದ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರಿಗೆ ಸೋಮವಾರ ಸಂಜೆ ಸಿಬಿಐ ನೀಡಿದ್ದ ಮಧ್ಯಂತರ ಜಾಮೀನಿಗೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ತಡರಾತ್ರಿ ತಡೆ ನೀಡಿದೆ.
ಮದನ್ ಮಿತ್ರ, ಫಿರ್ಹಾದ್ ಹಕೀಮ್ ಅಲಿಯಾಸ್ ಬಾಬ್ಬಿ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಸೋವನ್ ಚಟರ್ಜಿ ಅವರ ಜಾಮೀನು ರದ್ದಾಗಿದ್ದು, ಬಂಧಿತ ನಾಯಕರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಬುಧವಾರದ ತನಕ ಇರಿಸಲಾಗಿದೆ.
ಬಂಧಿತರಲ್ಲಿ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ಹಾಲಿ ಸಚಿವರಾಗಿದ್ದು ಮದನ್ ಮಿತ್ರಾ ಶಾಸಕರಾಗಿದ್ದಾರೆ. ಸೋವಾನ್ ಚಟರ್ಜಿ ಕೋಲ್ಕತ್ತಾದ ಮಾಜಿ ಮೇಯರ್ ಆಗಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ವರ್ಗಾವಣೆ ಮಾಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠ ಈ ಆದೇಶ ಜಾರಿ ಮಾಡಿತು. ಪರಿಣಾಮ ಬಂಧಿತ ನಾಯಕರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿದೆ.
ಕೇಂದ್ರ ಸರ್ಕಾರ ವಿರುದ್ಧ ಮಮತಾ ಕಿಡಿ
ಕೇಂದ್ರ ಸರ್ಕಾರ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ನಡುವೆ ಮತ್ತೊಮ್ಮೆ ಸಂಘರ್ಷ ಆರಂಭವಾಗಿದೆ. ಟಿಎಂಸಿ ಮುಖಂಡರನ್ನು ಸಿಬಿಐ ಬಂಧಿಸಿದ್ದನ್ನು ಖಂಡಿಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿ ಎದುರು ಧರಣಿ ಕುಳಿತು ಪ್ರತಿಭಟಿಸಿದರು.
ಸೋಮವಾರ ಸಂಜೆ ವೇಳೆಗೆ ನಡೆದ ವಿಚಾರಣೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ, ನಾಲ್ವರು ಆರೋಪಿಗಳನ್ನು ಸಿಬಿಐ ವಿಚಾರಣೆಗೆ ಕೋರಿಲ್ಲ. ಬದಲಿಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೋರಿತ್ತು. ಇದು ಬಂಧಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಆಧಾರವಲ್ಲ ಎಂದು ತಿಳಿಸಿ ಆರೋಪಿ ನಾಯಕರುಗಳಿಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯ ನೀಡಿತ್ತು.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಕಾನೂನು ಸಚಿವರು ತಮ್ಮ ಬೆಂಬಲಿಗರೊಂದಿಗೆ ನ್ಯಾಯಾಲಯಕ್ಕೆ ನುಗ್ಗಿದ ಘಟನೆಯನ್ನು ವಿವರಿಸಿ, ವಿಚಾರಣೆಯನ್ನು ವರ್ಗಾಯಿಸಲು ಸಿಆರ್ಪಿಸಿ ಸೆಕ್ಷನ್ 407 ರ ಅಡಿಯಲ್ಲಿ ಅಧಿಕಾರ ಚಲಾಯಿಸುವಂತೆ ಕೋರಿದರು.
ಸಿಆರ್ಪಿಸಿ ಸೆಕ್ಷನ್ 407 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಸಂತ್ರಸ್ತರು, ಆರೋಪಿಗಳು, ಸಾಕ್ಷಿಗಳು ಸೇರಿದಂತೆ ಎಲ್ಲಾ ಪಕ್ಷಕಾರರು ವಿಚಾರಣೆಗೆ ಒಳಪಡಬೇಕಾಗುತ್ತದೆ ಎಂದು ಅಡ್ವೊಕೇಟ್ ಜನರಲ್ ವಾದಿಸಿದರು.
ಸಿಬಿಐ ಕಚೇರಿಗೆ ಮುಖ್ಯಮಂತ್ರಿ ಮತ್ತು ನ್ಯಾಯಾಲಯಕ್ಕೆ ಕಾನೂನು ಸಚಿವರು ಬಂದಾಗ ಗುಂಪಿನ ಮೇಲುಗೈಯಾಗಿದೆ ಎಂದು ತಿಳಿಯುತ್ತಾರೆ ಎಂದು ನ್ಯಾಯಾಲಯ ಹೇಳಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದೆ.