ಬಂಗಾಳದಿಂದ ಬಿಜೆಪಿಯನ್ನು ಓಡಿಸಲು ನನ್ನ ಒಂದು ಕಾಲು ಸಾಕು: ಮಮತಾ
ಕೋಲ್ಕತ್ತಾ, ಮಾರ್ಚ್ 16: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ನಂದಿಗ್ರಾಮ್ ನಲ್ಲಿ ನಡೆದ ಘಟನೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು.
ಪುರುಲಿಯಾದ ಬಾಘಮುಂಡಿಯಲ್ಲಿ ವ್ಹೀಲ್ ಚೇರ್ ನಲ್ಲಿ ಕುಳಿತುಕೊಂಡೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಮೊದಲ ರ್ಯಾಲಿ ನಡೆಸಿದರು. "ನಾನು ಗಾಯಗೊಂಡ ನಂತರ ಬಹಳಷ್ಟು ಜನರು ನಾನು ಮನೆಯಿಂದ ಹೊರಗೆ ಬರುವುದೇ ಇಲ್ಲ ಎಂಬ ನಿರೀಕ್ಷೆಯಲ್ಲಿದ್ದರು. ನಾನು ಹಲವು ಸಂದರ್ಭಗಳಲ್ಲಿ ಇಂಥ ದಾಳಿಗಳನ್ನು ಮತ್ತು ಗಾಯಗಳನ್ನು ಎದುರಿಸಿದ್ದೇನೆ. ಆದರೆ ಜನರನ್ನು ತಲುಪುವ ನನ್ನನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ" ಎಂದರು.
"ಪಶ್ಚಿಮ ಬಂಗಾಳ ರಾಜ್ಯದ ತುಂಬೆಲ್ಲಾ ವ್ಹೀಲ್ ಚೇರ್ ನಲ್ಲಿಯೇ ಸಂಚರಿಸುತ್ತೇನೆ. ದಾಳಿಯಿಂದ ನಾನು ಕೆಳಗೆ ಇಳಿಯುತ್ತೇನೆ ಎನ್ನುವುದು ಸುಳ್ಳು. ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಓಡಿಸುವುದಕ್ಕೆ ನನ್ನ ಒಂದು ಕಾಲು ಸಾಕು" ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

ದೀದಿ ವಿರುದ್ಧ ಅಮಿತ್ ಶಾ ವಾಗ್ದಾಳಿ:
ನಂದಿಗ್ರಾಮ್ ನಲ್ಲಿ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಕಾರಿನ ಬಾಗಿಲು ಮತ್ತು ಸೀಟಿನ ಮಧ್ಯೆ ಮಮತಾ ಬ್ಯಾನರ್ಜಿಯವರ ಕಾಲು ಸಿಲುಕಿಕೊಂಡು ಗಾಯಗೊಂಡಿದ್ದ ಘಟನೆಯನ್ನು ಅಮಿತ್ ಶಾ ಕೂಡಾ ಉಲ್ಲೇಖಿಸಿದ್ದರು. ಬಂಕೂರಾದ ರಾಣಿಬಂಧ್ ನಲ್ಲಿ ಮಾತನಾಡಿದ ಅಮಿತ್ ಶಾ, ಅಪಘಾತದ ನಂತರ ನೀವು ನೋವಿನಲ್ಲಿದ್ದೀರಿ. ಆದರೆ ನಿಮ್ಮ ಹಿಂಸಾಚಾರದ ರಾಜಕೀಯದಿಂದಾಗಿ ನಮ್ಮ 130 ಪಕ್ಷದ ಕಾರ್ಯಕರ್ತರನ್ನು ಕೊಲ್ಲಲ್ಪಟ್ಟಾಗ, ನಿಮಗೆ ಏನಾದರೂ ನೋವಾಯಿತೇ. ನಮ್ಮ ಹುತಾತ್ಮರ ತಾಯಂದಿರ ನೋವನ್ನು ನೀವು ಅನುಭವಿಸಿದ್ದೀರಾ?" ಎಂದು ಪ್ರಶ್ನೆ ಮಾಡಿದ್ದಾರೆ.
ನಂದಿಗ್ರಾಮ್ ಘಟನೆಯನ್ನು ಪಶ್ಚಿಮ ಬಂಗಾಳ ಸಿಎಂ 'ಪಿತೂರಿ' ಎಂದು ಹೇಳುತ್ತಿದ್ದಾರೆ. ಆದರೆ ನಾನು ಯಾವುದೇ ಪಿತೂರಿ ಸಿದ್ದಾಂತವನ್ನು ಬೆಳೆಸುತ್ತಿಲ್ಲ. ದಾಳಿ ಎಂದು ವಿವರಿಸಲಾದ ಘಟನೆಯನ್ನು ಚುನಾವಣಾ ಆಯೋಗವೇ ಅಪಘಾತ ಎಂದು ಸ್ಪಷ್ಟಪಡಿಸಿದೆ ಅಲ್ಲವೇ ಎಂದು ಅಮಿತ್ ಶಾ ಹೇಳಿದ್ದರು.
8 ಹಂತಗಳಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಮತದಾನ:
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications