ಮೋದಿಗೆ, ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಸವಾಲು
ಕೋಲ್ಕತಾ, ಮೇ 16 : ಕಳೆದ ಐದು ವರ್ಷಗಳಲ್ಲಿ ನಿಮಗೆ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇನ್ನು ವಿದ್ಯಾಸಾಗರರ ಪುತ್ಥಳಿ ನಿರ್ಮಿಸುತ್ತೀರಾ? ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನರೇಂದ್ರ ಮೋದಿಯವರ ಮೇಲೆ ಕೆಂಡ ಕಾರಿದ್ದಾರೆ.
ವಿದ್ಯಾಸಾಗರರ ಪುತ್ಥಳಿ ನಿರ್ಮಿಸೆಂದು ಬಂಗಾಳದ ಜನರು ನಿಮ್ಮ ಮುಂದೆ ಭಿಕ್ಷೆ ಬೇಡುವುದಿಲ್ಲ. ನಿಮ್ಮ ಗೂಂಡಾ ನಾಯಕ ಇಲ್ಲಿ ಬಂದು, ಬಂಗಾಲ್ ಕಂಗಾಲ್ ಆಗಿದೆ ಎಂದಿದ್ದಾರೆ. ಬಂಗಾಳಿಗಳು ಕಂಗಾಲಾಗಿದ್ದಾರೆಯೆ? ಎಂದು ದೀದಿ ಮಮತಾ ಅವರು ಗುರುವಾರ ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದ್ದಾರೆ.
ವಿದ್ಯಾಸಾಗರರ ಪುತ್ಥಳಿ ನಿರ್ಮಿಸಲು ಬಂಗಾಳಿಗಳ ಬಳಿ ಹಣವಿದೆ. ಆದರೆ, 200 ವರ್ಷಗಳ ಹಿಂದಿನ ಪರಂಪರೆಯನ್ನು ನೀವು ವಾಪಸ್ ಕೊಡುತ್ತೀರಾ? ನೀವೇ (ಬಿಜೆಪಿ) ಪುತ್ಥಳಿಯನ್ನು ಧ್ವಂಸ ಮಾಡಿದ್ದೀರೆಂಬುದಕ್ಕೆ ನಮ್ಮ ಬಳಿ ಸಾಕ್ಷ್ಯವಿದೆ. ನಾಚಿಕೆಯಾಗುವುದಿಲ್ಲವೆ ಎಂದು ಅವರು ಡೈಮಂಡ್ ಹಾರ್ಬರ್ ನಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ಸುಳ್ಳು ಹೇಳಿದ್ದಕ್ಕೆ, ಸುಳ್ಳು ಹೇಳಿದಷ್ಟೂ ಬಸ್ಕಿಗಳನ್ನು ನೀವು ಹೊಡೆಯಬೇಕು. ನೀವು ನಮ್ಮ (ತೃಣಮೂಲ ಕಾಂಗ್ರೆಸ್) ವಿರುದ್ಧ ಮಾಡಿರುವ ಆರೋಪ (ಪುತ್ಥಳಿ ಧ್ವಂಸ ಮಾಡಿದ) ಸಾಬೀತು ಮಾಡಿ. ಇಲ್ಲದಿದ್ದರೆ ನಿಮ್ಮನ್ನು ಜೈಲಿಗೆ ಅಟ್ಟುತ್ತೇನೆ ಎಂದು ದೀದಿ ಮಮತಾ ಬ್ಯಾನರ್ಜಿ ಅವರು ಅಬ್ಬರಿಸಿದ್ದಾರೆ.
ನರೇಂದ್ರ ಮೋದಿಯವರು ಇಂದು ಸಭೆ ನಡೆಸಿದ ನಂತರ ನಮಗೆ ಯಾವುದೇ ಪ್ರಚಾರ ಸಭೆ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಚುನಾವಣಾ ಆಯೋಗ ಭಾರತೀಯ ಜನತಾ ಪಕ್ಷದ ಸಹೋದರ ಇದ್ದಂತೆ. ಮೊದಲು ಆಯೋಗ ಪಾರದರ್ಶಕವಾಗಿ ಕೆಲಸ ಮಾಡುತ್ತಿತ್ತು. ಈಗ ಬಿಜೆಪಿಗೆ ಮಾರಾಟವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಮಮತಾ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.
ಇದನ್ನು ಹೇಳಲು ನಿಜಕ್ಕೂ ದುಃಖವಾಗುತ್ತದೆ. ಆದರೆ, ಸತ್ಯವನ್ನು ಹೇಳುವುದರಿಂದ ನಾನು ಹಿಂಜರಿಯುವುದಿಲ್ಲ. ನಿಷೇಧ ಹೇರಿದ್ದರ ಬಗ್ಗೆ ಹೇಳುವುದಕ್ಕೇನೂ ಉಳಿದಿಲ್ಲ. ಆದರೆ, ನಾನು ಜೈಲಿಗೆ ಹೋಗಲೂ ಸಿದ್ಧ ಎಂದು ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರಕಾರಕ್ಕೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ. ಭಾಷಣದ ಕೊನೆಯಲ್ಲಿ 'ಚೌಕಿದಾರ್ ಚೋರ್ ಹೈ' ಎಂದು ಸಾರ್ವಜನಿಕರು ಹೇಳುವಂತೆ ಮಾಡಿದ್ದಾರೆ.
ಶುಕ್ರವಾರ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾಗಿತ್ತು. ಆದರೆ, ಅಲ್ಲಿ ಅಮಿತ್ ಶಾ ಅವರ ಸಭೆಯಲ್ಲಿ ದಂಗೆಗಳು ನಡೆದ ನಂತರ ಚುನಾವಣಾ ಆಯೋಗ ಗುರುವಾರ ರಾತ್ರಿ 10 ಗಂಟೆಯ ನಂತರ ಪ್ರಚಾರ ನಡೆಸುವಂತಿಲ್ಲ ಎಂದು ಆದೇಶ ನೀಡಿದೆ.












Click it and Unblock the Notifications