ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜೊತೆ ಕೈಜೋಡಿಸುತ್ತಾ ಕಾಂಗ್ರೆಸ್-ಎಡಪಕ್ಷ?
ಕೋಲ್ಕತ್ತಾ, ಫೆಬ್ರವರಿ.14: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷವನ್ನು ಎದುರಿಸುವುದಕ್ಕೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಒಕ್ಕೂಟದಿಂದ ಸಾಧ್ಯವಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷವೊಂದಕ್ಕೇ ಬಿಜೆಪಿಯನ್ನು ಎದುರಿಸುವ ಶಕ್ತಿಯಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ತಪಸ್ ರಾಯ್ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಂಕೂರಾದ ಒಂಡಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಎಡಪಕ್ಷ ಮತ್ತು ಕಾಂಗ್ರೆಸ್ ಪಾರ್ಟಿಗಳು ಬಿಜೆಪಿಯನ್ನು ಸೋರಿಸಬೇಕಿದ್ದಲ್ಲಿ ಟಿಎಂಸಿ ಜೊತೆಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಬಂಗಾಳದ ಅಭಿವೃದ್ಧಿ ಬಯಸುವವರು ಟಿಎಂಸಿಯಲ್ಲಿ ಇರುವುದಿಲ್ಲ; ರಾಜಿಬ್
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ಮತ್ತು ಎಡಪಕ್ಷದ ನಾಯಕರಿಗೆ ನಾನು ಕೇಳಲು ಬಯಸುತ್ತೇನೆ. ನಿಮ್ಮಲ್ಲಿರುವ ಶಕ್ತಿಯಿಂದಲೇ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ. ಈ ಸತ್ಯದ ಬಗ್ಗೆ ನಿಮಗೂ ಅರಿವಿದೆ. ಅಂದ ಮೇಲೆ ಬಿಜೆಪಿ ವಿರುದ್ಧ ಹೋರಾಟಕ್ಕೆ ನೀವೂ ಏಕೆ ಟಿಎಂಸಿ ಜೊತೆಗೆ ಸೇರಿಕೊಳ್ಳಬಾರದು ಎಂದು ಟಿಎಂಸಿ ಶಾಸಕರೊಬ್ಬರು ಸಲಹೆ ನೀಡಿದ್ದಾರೆ.
ಬಿಜೆಪಿಗೆ ಮಮತಾ ಬ್ಯಾನರ್ಜಿ ಬಗ್ಗೆ ಭಯ:
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ತಡೆಯುವುದಕ್ಕೆ ಆಗುವುದಿಲ್ಲ. ಕಾಲುವೆ ಒಡೆಯುವುದರ ಮೂಲಕ ಮೊಸಳೆಗಳನ್ನು ತರುವುದಕ್ಕೆ ಸಾಧ್ಯವಿಲ್ಲ. ನಿಮ್ಮಲ್ಲಿರುವ ಸೀಮಿತ ಶಕ್ತಿಯಿಂದ ಬಿಜೆಪಿಯನ್ನು ಕಟ್ಟಿ ಹಾಕುವ ಸಾಮರ್ಥ್ಯವಿಲ್ಲ ಎಂದು ನಿಮಗೂ ತಿಳಿದಿದೆ. ಅದರ ಬದಲು ಬಿಜೆಪಿಗೆ ಭಯ ಹುಟ್ಟಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ನೀಡಿರಿ. ಆ ಮೂಲಕ ರಾಜ್ಯದಲ್ಲಿ ಬಿಜೆಪಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ:
ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಿಗೆ 2021ರಲ್ಲೇ ಚುನಾವಣೆ ನಡೆಯಲಿದೆ. ಕಳೆದ 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 44, ಎಡಪಕ್ಷ 33, ಟಿಎಂಸಿ 211 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರೆ, ಬಿಜೆಪಿ 3 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆದರೆ ಇತ್ತೀಚಿಗೆ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 18 ಅಭ್ಯರ್ಥಿಗಳು ಜಯ ಸಾಧಿಸಿದ್ದರು.