ಕೊಲ್ಕತ್ತಾದಲ್ಲಿ RSS ಕಾರ್ಯಕರ್ತನ ಹತ್ಯೆ ಪ್ರಕರಣ: ಕಾರಣ ಬಾಯ್ಬಿಟ್ಟ ಆರೋಪಿ
ಕೊಲ್ಕತ್ತಾ, ಅಕ್ಟೋಬರ್ 15: ಕೊಲ್ಕತ್ತಾದಲ್ಲಿ ಅಕ್ಟೋಬರ್ 10 ರಂದು ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಆತ ತಾನು ಕೊಲೆ ಮಾಡಲು ಕಾರಣವೇನು ಎಂದು ಬಾಯ್ಬಿಟ್ಟಿದ್ದಾನೆ.
ತಾನು ಹಣಕ್ಕಾಗಿ ಈ ಕೊಲೆ ಮಾಡಿದ್ದೇನೆ ಎಂದು ಆರೋಪಿ ಉತ್ಪಾಲ್ ಬೆಹೆರಾ ಒಪ್ಪಿಕೊಂಡಿದ್ದಾನೆ. ಉತ್ಪಾಲ್, ಬೊಂಧು ಪಾಲ್ ಅವರಿಗೆ 24,000 ರೂಪಾಯಿಗಳನ್ನು ನೀಡಿದ್ದರು. ಅದನ್ನು ವಾಪಸ್ ಕೇಳಲು ಹೋದಾಗ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಆದ್ದರಿಂದ ಪ್ರತೀಕಾರ ತೀರಿಸಿಕೊಳ್ಳಲು ನಾನು ಅವರನ್ನು ಕೊಂದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.
ಅಕ್ಟೋಬರ್ 10 ರಂದು ಆರೆಸ್ಸೆಸ್ ಕಾರ್ಯಕರ್ತ ಬೊಂಧು ಪ್ರಕಾಶ್ ಪಾಲ್, ಗರ್ಭಿಣಿ ಪತ್ನಿ ಬ್ಯೂಟಿ ಪಾಲ್ ಮತ್ತು ಪುತ್ರ ಆನಂದ್ ಪಾಲ್ ಅವರನ್ನು ಅವರ ಮನೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಮಾಡಲಾಗಿತ್ತು.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನ ಜಿಯಾಗಂಜ್ ಎಂಬಲ್ಲಿ ಈ ಕುಟುಂಬ ವಾಸವಿತ್ತು. ಕೆಲವು ದುಷ್ಕರ್ಮಿಗಳು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಕೊಲೆ ಮಾಡಲು ಬಳಸಿದ ಆಯುಧವನ್ನು ಪೊಲೀಸರು ಪತ್ತೆ ಮಾಡಿದ್ದರು. ನಂತರ ಉತ್ಪಾಲ್ ಬೆಹೆರಾ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು.












Click it and Unblock the Notifications