ಪಶ್ಟಿಮ ಬಂಗಾಳ: ಯುವಕರನ್ನು ಸೆಳೆಯುವ ಬಿಜೆಪಿ ಯೋಜನೆ ಉಲ್ಪಾ-ಪಲ್ಟಾ!
ಕೋಲ್ಕತ್ತಾ, ಜನವರಿ.11: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಯುವ ಜನಾಂಗವನ್ನು ಸೆಳೆಯಲು ರೂಪಿಸಿದ ಯೋಜನೆಯನ್ನು ಬಿಜೆಪಿ ತಡೆ ಹಿಡಿದಿದೆ. ರಾಜ್ಯದ 75 ಲಕ್ಷ ಯುವಕರನ್ನು ಭೇಟಿ ಮಾಡುವುದಕ್ಕಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿತ್ತು.
ಕಳೆದ ಡಿಸೆಂಬರ್.13ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ರಾಜ್ಯ ಬಿಜೆಪಿ ಅಧಿಕೃತವಾಗಿ ಚಾಲನೆ ನೀಡಿತ್ತು. ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಖಾತ್ರಿ ಕಾರ್ಡ್ ನೀಡುವ ಯೋಜನೆಯನ್ನು ಮೊದಲಿಗೆ ಬಿಜೆಪಿ ರೂಪಿಸಿತ್ತು.
ವಿಧಾನಸಭಾ ಚುನಾವಣೆ ನಂತರ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬಂದರೆ ಈ ಉದ್ಯೋಗ ಖಾತ್ರಿ ಕಾರ್ಡ್ ನ್ನು ಯುವಕರು ನೇಮಕಾತಿ ಪ್ರಮಾಣಪತ್ರ ಎಂದು ತಪ್ಪಾಗಿ ತಿಳಿದುಕೊಳ್ಳುವ ಅಪಾಯವಿರುತ್ತದೆ ಎಂದು ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ಬಿಜೆಪಿ ಮೊದಲು ರೂಪಿಸಿದ ಯೋಜನೆಗೆ ಬ್ರೇಕ್ ಹಾಕಿದೆ ಎಂದು ತಿಳಿದು ಬಂದಿದೆ.

ಯುವಕರನ್ನು ಸೆಳೆಯುವ ಯೋಜನೆಯಲ್ಲಿ ಬದಲಾವಣೆ:
ಪಶ್ಚಿಮ ಬಂಗಾಳದಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಬಿಜೆಪಿಯು ಪ್ರಚಾರದ ವೈಖರಿಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ತಿಳಿಸಿದ್ದಾರೆ. ಬಿಜೆಪಿಯು ನೀಡಲು ಉದ್ದೇಶಿಸಿದ ಉದ್ಯೋಗ ಖಾತ್ರಿ ಕಾರ್ಡ್ ಗಳನ್ನು ಯುವಕರು ತಪ್ಪಾಗಿ ಅರ್ಥೈಸಿಕೊಳ್ಳಲು ಆರಂಭಿಸಿದರು. ಈ ಹಿನ್ನೆಲೆ ಬದಲಾದ ರೀತಿಯಲ್ಲಿ ಮನೆ ಮನೆ ಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಐಟಿ ವಲಯದಲ್ಲಿ ಉದ್ಯೋಗ ಸೃಷ್ಟಿ:
ರಾಜ್ಯದಲ್ಲಿ ಐಟಿ ವ್ಯಾಸಂಗ ಮಾಡಿರುವವರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈಗಾಗಲೇ ಕರ್ಮೋ ಭೂಮಿ ಎಂಬ ಯೋಜನೆ ಜಾರಿಗೊಳಿಸಿದ್ದಾರೆ. ಕಳೆದ 2020ರ ಜೂನ್.08ರಂದು ಜಾರಿಗೊಳಿಸಲಾದ ಯೋಜನೆಯಡಿ 37000 ಜನರಿಗೆ ಉದ್ಯೋಗ ಸೃಷ್ಟಿಸುವುದಕ್ಕೆ ಉದ್ದೇಶಿಸಲಾಗಿದೆ. ಈ ಪೈಕಿ ಈಗಾಗಲೇ 3000ಕ್ಕೂ ಹೆಚ್ಚು ನಿರುದ್ಯೋಗಿಗಳು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications