ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
ಕೋಲ್ಕತ್ತಾ, ಜನವರಿ 23: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಸಂದರ್ಭ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡಲು ನಿರಾಕರಿಸಿದ ಸಂಗತಿಯೂ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉಪಸ್ಥಿತರಿದ್ದು, ಭಾಷಣಕ್ಕೆ ಮಮತಾ ಬ್ಯಾನರ್ಜಿ ವೇದಿಕೆ ಮೇಲೆ ಬರುತ್ತಿದ್ದಂತೆಯೇ ಕೆಲವರು "ಜೈಶ್ರೀರಾಮ್" ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಮಮತಾ ಬ್ಯಾನರ್ಜಿ ಕೆಲವೇ ಮಾತುಗಳನ್ನು ಆಡಿ ವೇದಿಕೆಯಿಂದ ನಿರ್ಗಮಿಸಿದರು.
"ಇದು ಸರ್ಕಾರಿ ಕಾರ್ಯಕ್ರಮ. ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮದಲ್ಲಿ ಘನತೆ ಕಾಯ್ದುಕೊಳ್ಳಬೇಕು" ಎಂದು ಕೋಪದಿಂದಲೇ ಭಾಷಣ ಆರಂಭಿಸಿ ನೇತಾಜಿ ಅವರ ಜನ್ಮದಿನವನ್ನು ಕೋಲ್ಕತ್ತಾದಲ್ಲಿ ಆಚರಿಸಲು ತೀರ್ಮಾನಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದಷ್ಟೇ ಹೇಳಿ ವೇದಿಕೆಯಿಂದ ನಿರ್ಗಮಿಸಿದರು.
ಆನಂತರ ಈ ಘಟನೆ ಕುರಿತು ಚರ್ಚೆಗಳೂ ಆರಂಭವಾಗಿವೆ. ಬಿಜೆಪಿ-ತೃಣಮೂಲ ಕಾಂಗ್ರೆಸ್ ನಡುವಿದ್ದ ಸಮರದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಈ ಸಂಗತಿ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಸಚಿವ ಅನಿಲ್ ವಿಜ್, "ಮಮತಾ ಬ್ಯಾನರ್ಜಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಿರುವುದು ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತೆ ಆಗಿದೆ. ಹೀಗಾಗೇ ತಮ್ಮ ಭಾಷಣ ನಿಲ್ಲಿಸಿದ್ದಾರೆ" ಎಂದು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಸದಸ್ಯರು ಜೈಶ್ರೀರಾಮ್ ಘೋಷಣೆ ಕೂಗಿರುವ ನಡೆಯನ್ನು ಖಂಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಎಂಪಿ ಡೇರಕ್ ಒಬ್ರಿಯಾನ್, ಮಮತಾ ಬ್ಯಾನರ್ಜಿ ಮಾತನಾಡಿದ ವಿಡಿಯೋ ಹಂಚಿಕೊಂಡು, "ಘನತೆ ಎಂಬುದನ್ನು ಕಲಿಸಲು ಸಾಧ್ಯವಿಲ್ಲ. ದಡ್ಡ ಜನರಿಗೆ ಘನತೆಯಾಗಿ ಇರಲು ಹೇಳಿಕೊಡಲೂ ಸಾಧ್ಯವಿಲ್ಲ. ಈ ವಿಡಿಯೋ ನೋಡಿ, ಘನತೆಗೆ ತಕ್ಕಂತೆ ಉತ್ತರ ನೀಡಿದ ಸಿಎಂ ಮಮತಾ ಬ್ಯಾನರ್ಜಿಯವರನ್ನು ನೋಡಿ" ಎಂದು ಟ್ವೀಟ್ ಮಾಡಿದ್ದಾರೆ.
"ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ರಾಜಕೀಯ, ಧರ್ಮದ ಘೋಷಣೆಗಳನ್ನು ಕೂಗುವುದನ್ನು ನಾನು ಖಂಡಿಸುತ್ತೇನೆ" ಎಂದು ಟಿಎಂಸಿ ಲೋಕಸಭಾ ಸಂಸದೆ ನುಸ್ರತ್ ಜಹಾನ್ ರೂಹಿ ಕೂಡ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಬಿಜೆಪಿ-ಟಿಎಂಸಿ ನಡುವೆ ಇದ್ದ ಕದನ ಈ ಘಟನೆಯಿಂದ ಮತ್ತಷ್ಟು ಹೆಚ್ಚಾದಂತೆ ಆಗಿದೆ.












Click it and Unblock the Notifications