ನೇತಾಜಿ ಸಮಾರಂಭದಲ್ಲಿ ಜೈ ಶ್ರೀರಾಮ್ ಘೋಷಣೆ: ಬಿಜೆಪಿಗೆ RSS ಎಚ್ಚರಿಕೆ
ಕೋಲ್ಕತ್ತಾ, ಜನವರಿ.27: ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ "ಜೈ ಶ್ರೀರಾಮ್" ಘೋಷಣೆ ಕೂಗಿರುವುದು ವಿಧ್ವಂಸಕ ಕೃತ್ಯವಾಗಿದೆ. ಈ ದುಷ್ಕೃತ್ಯ ಎಸಗಿದವರನ್ನು ಕಡ್ಡಾಯವಾಗಿ ಪತ್ತೆ ಮಾಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ತಿಳಿಸಿದೆ.
ಜನವರಿ.23ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ವಿಕ್ಟೋರಿಯಾ ಸ್ಮಾರಕದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ 125ನೇ ಜನ್ಮದಿನದ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಸೇರಿದ್ದರು. ಈ ವೇಳೆ "ಜೈ ಶ್ರೀರಾಮ್" ಎಂಬ ಘೋಷಣೆ ಕೂಗಿಲಾಗಿತ್ತು.
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
ಸರ್ಕಾರ ಆಯೋಜಿಸಿದ ನೇತಾಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀರಾಮನ ಪರ ಘೋಷಣೆ ಕೂಗುವುದು ತರವಲ್ಲ. ಭಾರತೀಯ ಜನತಾ ಪಕ್ಷ ಇಂಥ ನಡುವಳಿಕೆಯನ್ನು ಪ್ರೋತ್ಸಾಹಿಸುವಂತಿಲ್ಲ ಎಂದು ಆರ್ಎಸ್ಎಸ್ ಹೇಳಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಶ್ರೀರಾಮನ ಪರ ಘೋಷಣೆ ಏಕೆ?
"ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂಥ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಪರವಾಗಿ ಘೋಷಣೆ ಕೂಗಬಾರದು" ಎಂದು ಪಶ್ಚಿಮ ಬಂಗಾಳದ ಆರ್ಎಸ್ಎಸ್ ಕಾರ್ಯದರ್ಶಿ ಜಿಷ್ಣು ಬಸು ತಿಳಿಸಿದ್ದಾರೆ.
ಘಟನೆ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ ಬೇಸರ
ನೇತಾಜಿ ಅವರ ತವರು ನೆಲದಲ್ಲಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮ ನಡೆಸಿತ್ತು. ಆದರೆ ಇಂಥ ಸಮಾರಂಭದಲ್ಲಿ ನೇತಾಜಿಯವರಿಗೆ ಗೌರವ ಸೂಚಿಸುವ ಬದಲಿಗೆ ಶ್ರೀರಾಮನ ಪರವಾಗಿ ಘೋಷಣೆ ಕೂಗಿರುವ ಘಟನೆ ಬಗ್ಗೆ ಆರ್ಎಸ್ಎಸ್ ಬೇಸರ ವ್ಯಕ್ತಪಡಿಸಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರು ಯಾರು ಎಂಬುದನ್ನು ಗುರುತಿಸಬೇಕಿದೆ. ಈ ರೀತಿ ದುಷ್ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಬಿಜೆಪಿಯು ಪತ್ತೆ ಮಾಡಬೇಕಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆರ್ಎಸ್ಎಸ್ ಹೇಳಿದೆ.
"ಬಿಜೆಪಿಯು ಆಹ್ವಾನ ನೀಡಿ ಅವಮಾನ ಮಾಡಿದೆ"
"ನೇತಾಜಿ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕೋಲ್ಕತ್ತಾದಲ್ಲಿ ಆಯೋಜಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರದ ಸಾಂಸ್ಕೃತಿಕ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಇದು ಸರ್ಕಾರಿ ಕಾರ್ಯಕ್ರಮವೇ ಹೊರತೂ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮವಲ್ಲ. ಸರ್ಕಾರದ ಕಾರ್ಯಕ್ರಮದಲ್ಲಿ ಒಂದು ಘನತೆ, ಶಿಸ್ತು ಮತ್ತು ಬದ್ಧತೆ ಇರಬೇಕಿತ್ತು. ಇಲ್ಲಿ ಯಾರನ್ನೂ ಕರೆದು ಅವಮಾನಿಸುವ ಕಾರ್ಯ ನಡೆಯಬಾರದು. ನಾನು ಇಲ್ಲಿ ಮಾತನಾಡುವುದಿಲ್ಲ. ಜೈ ಬಾಂಗ್ಲಾ, ಜೈ ಹಿಂದ್" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಿಡಿ ಕಾರಿದ್ದರು.
"ನೇತಾಜಿಯವರಿಗೆ ಅವಮಾನಸಿತಾ ಬಿಜೆಪಿ?"
ಆಹ್ವಾನ ನೀಡಿದ್ದರು ಎಂಬ ಕಾರಣಕ್ಕೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ವೇಳೆ ಕೆಲವು ಮತಾಂಧ ದೇಶದ್ರೋಹಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎದುರಿಗೆ ನನಗೇ ಕೀಟಲೆ ಮಾಡುವ ಧೈರ್ಯ ಪ್ರದರ್ಶಿಸಿದರು. ಅವರು ಯಾರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನೀವು ನನಗೆ ಗನ್ ತೋರಿಸಿದರೆ, ನಾನು ನಿಮಗೆ ಶಸ್ತ್ರಾಸ್ತ್ರಗಳನ್ನು ತೋರಿಸಬಲ್ಲೆ. ಆದರೆ ನನಗೆ ಗನ್ ಹಿಡಿದು ಮಾಡುವ ರಾಜಕಾರಣದ ಮೇಲೆ ನಂಬಿಕೆಯಿಲ್ಲ ಎಂದರು. ಅಲ್ಲದೇ, "ನೀವು ನೇತಾಜಿಯವರನ್ನು ಅವಮಾನಿಸಿದ್ದೀರಿ. ನೀವು ಟ್ಯಾಗೋರ್ ಅವರ ಜನ್ಮಸ್ಥಳವನ್ನೇ ತಪ್ಪಾಗಿ ಉಲ್ಲೇಖಿಸಿದ್ದೀರಿ. ವಿದ್ಯಾಸಾಗರ್ ಅವರ ಪ್ರತಿಮೆಯನ್ನು ನೀವು ನಾಶಪಡಿಸಿದ್ದೀರಿ. ಬಿರ್ಸಾ ಮುಂಡಾ ಎಂದು ಭಾವಿಸಿ ಬೇರೆ ಯಾವುದೋ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೀರಿ. ಇದು ನಿಮ್ಮ ತಪ್ಪುಗಳಿಗೆ ಹಿಡಿದ ಕೈಗನ್ನಡಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.