ಬಂಗಾಳದ ಜನರನ್ನು ಅರಾಜಕತೆಯತ್ತ ದೂಡುತ್ತಿದ್ದೀರಾ?; ದೀದಿಗೆ ಅಮಿತ್ ಶಾ ಪ್ರಶ್ನೆ
ಕೋಲ್ಕತ್ತಾ, ಏಪ್ರಿಲ್ 9: ಕೇಂದ್ರ ಭದ್ರತಾ ಪಡೆ ಸಂಬಂಧ ಹೇಳಿಕೆ ಕುರಿತಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹ ಸಚಿವ ಅಮಿತ್ ಶಾ, "ಬಂಗಾಳದ ಜನರನ್ನು ಅರಾಜಕತೆಯತ್ತ ದೂಡುತ್ತಿದ್ದೀರಾ ಹೇಗೆ" ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, "ಚುನಾವಣೆ ಕಾರ್ಯಕ್ಕೆ ರಾಜ್ಯದಲ್ಲಿ ಸಿಎಪಿಎಫ್ ನಿಯೋಜಿಸಿದರೆ, ಅದು ಗೃಹ ಸಚಿವಾಲಯದ ಅಡಿಯಲ್ಲಿ ಬರುವುದಿಲ್ಲ. ಇದು ಚುನಾವಣಾ ಆಯೋಗದ ಅಡಿಯಲ್ಲಿ ಬರುತ್ತದೆ. ಟಿಎಂಸಿ ಅಭ್ಯರ್ಥಿಗಳ ಭಾಷಣದಿಂದಲೇ ಅವರು ಸೋಲಿನ ಒತ್ತಡದಲ್ಲಿರುವುದು ಕಂಡುಬರುತ್ತಿದೆ. ಸಿಆರ್ಪಿಎಫ್ ಸಿಬ್ಬಂದಿಗೇ ಘೇರೋ ಎಂದಿರುವ ಮುಖ್ಯಮಂತ್ರಿ ಅಥವಾ ಮುಖ್ಯಸ್ಥರನ್ನು ನಾನು ನನ್ನ ಜೀವನದಲ್ಲೇ ನೋಡಿರಲಿಲ್ಲ ಎಂದು ದೂರಿದ್ದಾರೆ. ಮಮತಾ ಬ್ಯಾನರ್ಜಿ ಇಲ್ಲಿನ ಜನರನ್ನು ಅರಾಜಕತೆಯತ್ತ ದೂಡುತ್ತಿದ್ದಾರಾ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
"ಟಿಎಂಸಿ ಅಲ್ಪಸಂಖ್ಯಾತರ ಮತ ಗಳಿಸಲು ಏನೆಲ್ಲಾ ಮಾಡುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಅಲ್ಪಸಂಖ್ಯಾತರ ಮತಗಳೂ ಕೈಜಾರುತ್ತಿರುವ ಆತಂಕ ಟಿಎಂಸಿಗೆ ಕಾಡುತ್ತಿದೆ" ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ.

ಸದ್ಯಕ್ಕೆ ಮುಗಿದಿರುವ ಮೂರು ಹಂತಗಳ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಇರುವುದು ಸಾಬೀತಾಗಿದೆ. ಈ ಮೂರು ಹಂತಗಳಲ್ಲಿ 68 ಸೀಟುಗಳಲ್ಲಿ ಬಿಜೆಪಿ 63 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯಲಿದ್ದು, ಗೃಹ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಕೋಲ್ಕತ್ತಾದ ಭವಾನಿಪುರದಲ್ಲಿ ಮನೆ ಮನೆ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಮೂರು ಹಂತದ ಚುನಾವಣೆಗಳು ಪೂರ್ಣಗೊಂಡಿವೆ.












Click it and Unblock the Notifications