"ಬಿಜೆಪಿಯವರು ದುಡ್ಡು ಕೊಟ್ಟರೆ ಮಟನ್ ತಿನ್ನಿ; ಆದರೆ ಮತ ಹಾಕಬೇಡಿ"
ಕೋಲ್ಕತ್ತಾ, ಫೆಬ್ರುವರಿ 09: ಮುಂಬರುವ ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ರಥಯಾತ್ರೆ ಮೂಲಕ ಪ್ರಚಾರ ಕಾರ್ಯ ನಡೆಸುತ್ತಿದೆ. ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ನದಿಯಾದ ನವದ್ವೀಪದಲ್ಲಿ ಚಾಲನೆ ನೀಡಿದ್ದು, ರಥಯಾತ್ರೆ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ರಥಯಾತ್ರೆ ಎಂಬುದು ಹೊರಗಿನವರು ನಮ್ಮ ರಾಜ್ಯಕ್ಕೆ ಭೇಟಿ ನೀಡಲು ಬಳಸುತ್ತಿರುವ "ಫೈವ್ ಸ್ಟಾರ್ ಬಸ್" ಎಂದು ಹೇಳಿದ್ದಾರೆ. ಒಳಗಿನವರು ಹಾಗೂ ಹೊರಗಿನವರು ಎಂಬ ಚರ್ಚೆಯನ್ನೇ ಚುನಾವಣಾ ಅಭಿಯಾನದ ಪ್ರಮುಖ ವಿಷಯವಾಗಿಟ್ಟುಕೊಂಡಿರುವ ತೃಣಮೂಲ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿದೆ. ಮುಂದೆ ಓದಿ...

"ಪಂಚತಾರಾ ಹೋಟೆಲ್ ಊಟ ತಿಂದು ಬಡವರ ಮನೆಯಲ್ಲಿ ಪೋಸ್"
ಪೂರ್ವ ವರ್ಧಮಾನ ಜಿಲ್ಲೆಯ ಕಲ್ನಾದಲ್ಲಿ ಮಂಗಳವಾರ ಪ್ರಚಾರ ಮೆರವಣಿಗೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, "ಹೊರಗಿನವರಾದ ಇವರು, ದೊಡ್ಡ ದೊಡ್ಡ ವಾಹನಗಳಲ್ಲಿ ಇಲ್ಲಿ ಓಡಾಡುತ್ತಿದ್ದಾರೆ. ಇವರು ಬಂಗಾಳ ನಿವಾಸಿಗಳಲ್ಲ. ಪಂಚತಾರಾ ಹೋಟೆಲ್ ಊಟ ತಿಂದು ಬಡವರ ಮನೆಗಳಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಅವರು ಇಲ್ಲಿ ತಯಾರಿಸಿದ್ದನ್ನು ತಿನ್ನುವುದಿಲ್ಲ. ಇವರೆಲ್ಲಾ ಬಡವರ ಪರವಿದ್ದಾರೆಯೇ" ಎಂದು ಪ್ರಶ್ನಿಸಿದ್ದಾರೆ.

"ದುಡ್ಡು ತೆಗೆದುಕೊಂಡು ಮಾಂಸ ತಿನ್ನಿ, ಮತ ಹಾಕಬೇಡಿ"
"ಬಿಜೆಪಿ ಸಾಕಷ್ಟು ಹಣ ಇಟ್ಟಿರುವ ಪಕ್ಷ. ಆದರೆ ಇದು ಅವರ ಹಣವಲ್ಲ, ಲೂಟಿ ಹೊಡೆದಿರುವ ಹಣ. ಅವರು ನಿಮಗೆ ಹಣ ಕೊಟ್ಟರೆ ಅದನ್ನು ತೆಗೆದುಕೊಂಡು ಅದರಲ್ಲಿ ಮಾಂಸ ತಿನ್ನಿ. ಆದರೆ ಅವರಿಗೆ ಮತ ಹಾಕಬೇಡಿ" ಎಂದು ಜನರಿಗೆ ಮೆರವಣಿಗೆಯಲ್ಲಿ ಹೇಳಿದ್ದಾರೆ.

ರೈತರಿಗೆ ಭರವಸೆ ನೀಡಿದ ಸಿಎಂ
ಬಿಜೆಪಿ ತಮ್ಮ ಮೇಲೆ ಮಾಡಿರುವ ರೈತ ವಿರೋಧಿ ಆರೋಪವನ್ನು ತಳ್ಳಿ ಹಾಕಿರುವ ಅವರು, "ಈ ಪಕ್ಷ ರೈತರು ಹಾಗೂ ಅವರ ಭೂಮಿಯನ್ನು ಕೊಳ್ಳೆ ಹೊಡೆಯುತ್ತಿದೆ.
ನೀವು ಬೆಳೆ ಬೆಳೆದರೆ ಅವರು ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ ಅಷ್ಟೆ. ನಾನು ರೈತರಿಂದ ಬೆಳೆ ಖರೀದಿಸಿ ಜನರಿಗೆ ನೀಡುತ್ತೇನೆ. ನಾವು ನಿಮಗೆ ಚೆಕ್ ನೀಡಿ ಧಾನ್ಯಗಳನ್ನು ಪಡೆಯುತ್ತೇವೆ. ನೀವು ಚಿಂತೆ ಮಾಡುವ ಅಗತ್ಯವಿಲ್ಲ" ಎಂದು ಭರವಸೆ ನೀಡಿದ್ದಾರೆ.

"ಬಂಗಾಳವನ್ನು ಗುಜರಾತ್ ಆಗಲು ಬಿಡುವುದಿಲ್ಲ"
ಇಡೀ ದೇಶವನ್ನೇ ಬಿಜೆಪಿ ಸ್ಮಶಾನ ಮಾಡಲು ಹೊರಟಿದೆ ಎಂದು ಆರೋಪಿಸಿರುವ ಬ್ಯಾನರ್ಜಿ, "ಬಂಗಾಳದಲ್ಲಿ ಹೀಗಾಗಲು ಬಿಡುವುದಿಲ್ಲ. ಅಸ್ಸಾಂ ಹಾಗೂ ತ್ರಿಪುರದಂಥ ಬಿಜೆಪಿ ಆಳ್ವಿಕೆಯ ರಾಜ್ಯಗಳನ್ನು ನೋಡಿ. ಅಲ್ಲಿ ಜನರು ಸಾಯುತ್ತಿದ್ದಾರೆ. ಹಾಗೆಯೇ ಇವರೆಲ್ಲಾ ಹೊರಗಿನಿಂದ ಜನ ತಂದು ಬಂಗಾಳವನ್ನು ನಾಶ ಮಾಡಲು ನೋಡುತ್ತಿದ್ದಾರೆ. ಬಂಗಾಳವನ್ನು ಗುಜರಾತ್ ಆಗಲು ಬಿಡುವುದಿಲ್ಲ" ಎಂದಿದ್ದಾರೆ.
ಸ್ನೇಹಿತರ ಮಧ್ಯೆಯೇ ಬಿಜೆಪಿ ಜಗಳ ತರುತ್ತಿದೆ. ನಾನು ಹಿಂದೂ, ಮುಸ್ಲಿಮರನ್ನು ಅಥವಾ ಇನ್ನಾರನ್ನಾದರೂ ದ್ವೇಷಿಸುತ್ತೇನೆ ಎಂದು ಎಂದಾದರೂ ಹೇಳಿದ್ದೇನೆಯೇ? ನಮ್ಮ ಪೋಷಕರು ನಮಗೆ ಹೀಗೆ ಹೇಳಿಕೊಟ್ಟಿಲ್ಲ. ನಾವು ಒಟ್ಟಿಗೆ ಕುಳಿತು ಒಟ್ಟಿಗೆ ತಿಂದು ಬೆಳೆದವರು ಎಂದು ಹೇಳಿದ್ದಾರೆ.












Click it and Unblock the Notifications