ಮತಕ್ಕಾಗಿ ಮಂತ್ರ: ಪಶ್ಚಿಮ ಬಂಗಾಳದಲ್ಲಿ ಇದೆಂಥಾ ರಾಜಕೀಯ ತಂತ್ರ!?
ಕೋಲ್ಕತ್ತಾ, ಮಾರ್ಚ್.10: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕಣದಲ್ಲಿ ಹಿಂದೂ ಧರ್ಮ ಮತ್ತು ಮಂತ್ರ ಪಠಣೆ ವಿಚಾರ ಭಾರಿ ಸದ್ದು ಮಾಡುತ್ತಿದೆ. "ನಾನೂ ಒಬ್ಬ ಹಿಂದೂ" ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರು ದುರ್ಗಾದೇವಿ ಮಂತ್ರ ಪಠಿಸಿ ತಾವೂ ಒಬ್ಬ ಹಿಂದೂ ಎಂದು ಘೋಷಿಸಿದ್ದರು. "ನೀವು ನನಗೆ ಹಿಂದುತ್ವದ ಬಗ್ಗೆ ಹೇಳಿ ಕೊಡುವುದಕ್ಕೆ ಬರಬೇಡಿ. ಲಕ್ಷ್ಮಿ, ಸರಸ್ವತಿ, ಕಾಳಿ ಮ್ತತು ದುರ್ಗಾದೇವಿ ಮಂತ್ರಗಳು ನನಗೂ ಬರುತ್ತವೆ ಎಂಬುದನ್ನು ನಾನು ನಿಮಗೆ ತೋರಿಸುತ್ತೇನೆ. ಬೂತ್ ಮಟ್ಟದ ಸಭೆ ಅಂತ್ಯಕ್ಕೂ ಮೊದಲು ಮಂತ್ರ ಪಠಣೆ ಮಾಡಿದ್ದರು.
ತೃಣಮೂಲ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಇತ್ತೀಚಿಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಿಮಗೆ ಧೈರ್ಯವಿದ್ದರೆ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಇದೇ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿಯವರಿಗೆ ಸವಾಲು ಹಾಕಿದ್ದರು.

ಮಮತಾ ಬ್ಯಾನರ್ಜಿ ಅವರಿಂದ ತಪ್ಪು ಮಂತ್ರ!?
ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಠಿಸಿದ ಮಂತ್ರದ ಸಾಲನ್ನು ಪ್ಲೇ ಮಾಡಿದ್ದರು. ಇನ್ನೊಂದು ಕಡೆಯಲ್ಲಿ ಆ ಮಂತ್ರದ ನಿಜವಾದ ಆಡಿಯೋವನ್ನು ಪ್ಲೇ ಮಾಡಲಾಗಿತ್ತು. ಹೀಗೆ ಎರಡು ಆಡಿಯೋಗಳನ್ನು ಪ್ರಸಾರ ಮಾಡಿದ ಸುವೇಂದು ಅಧಿಕಾರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ತಪ್ಪು ಮಂತ್ರ ಪಠಿಸಿದ್ದಾರೆ ಎಂದು ದೂಶಿಸಿದರು.

ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಿದ ಸುವೇಂದು ಅಧಿಕಾರಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರನ್ನು ಸುವೇಂದು ಅಧಿಕಾರಿ ಹೇಳಿದರು. ಮಮತಾ ಬ್ಯಾನರ್ಜಿ ಅವರು ಹೇಳಿದ ತಪ್ಪು ಮಂತ್ರಗಳನ್ನು ಸರಿಪಡಿಸುವುದಕ್ಕಾಗಿ ಯೋಗಿ ಆದಿತ್ಯನಾಥ್ ರನ್ನು ಆಹ್ವಾನಿಸುತ್ತೇವೆ. ಅವರು ಸರಿಯಾದ ರೀತಿಯಲ್ಲಿ ಈ ಮಂತ್ರಗಳನ್ನು ಪಠಿಸಲಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧ ಹಿಂದೂ ಅಸ್ತ್ರ
ಹಿಂದೂ ಧರ್ಮದ ವಿಚಾರವನ್ನೇ ಇಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿಯವರು ಇದೀಗ "ಇನ್ಶಲ್ಲಾ" ಎನ್ನುವುದನ್ನು ನಿಲ್ಲಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಭೋಸ್ ಜನ್ಮ ದಿನಾಚರಣೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವುದನ್ನೇ ಅಪರಾಧ ಎನ್ನುವಂತೆ ಹೇಳುತ್ತಾರೆ. ದೇವಸ್ಥಾನದಲ್ಲಿ ಯಾರು ಶೂ ಧರಿಸಿ ಹೋಗುತ್ತಿದ್ದರೋ ಅಂಥವರೇ ಇಂದು ತಾವು ಹಿಂದೂ ಎಂದು ಏಕೆ ಹೇಳಿಕೊಳ್ಳುತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದೇನು?
ನಂದಿಗ್ರಾಮ್ ಕ್ಷೇತ್ರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಪರೋಕ್ಷ ವಾಗ್ದಾಳಿ ನಡೆಸಿದರು. ಜನರ ಒತ್ತಾಯದ ಮೇರೆಗೆ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಹೇಳಿದರು. "ನಂದಿಗ್ರಾಮ್ ನಲ್ಲಿ ಕೆಲವರು ನನ್ನನ್ನು ಹೊರಗಿದವರು ಎಂದು ಹೇಳಿದರು. ಆ ಮಾತನ್ನು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ಹುಟ್ಟಿ ಬೆಳೆದದ್ದು ಪಕ್ಕದ ಬಿರ್ಭಮ್ ಜಿಲ್ಲೆಯಲ್ಲಿ, ಮತ್ತು ನನ್ನನ್ನು ಹೊರಗಿನವನೆಂದು ಕರೆಯುವ ವ್ಯಕ್ತಿ ಕೂಡ ಇಲ್ಲಿ ಹುಟ್ಟಿಲ್ಲ. ಇಂದು ನಾನು ಹೊರಗಿನವರಾಗಿಗಿದ್ದೇವೆ. ಗುಜರಾತ್ನಿಂದ ಬರುವವರು ಬಂಗಾಳದಲ್ಲಿ ಒಳಗಿನವರಾಗಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಸಿಡಿಮಿಡಿಗೊಂಡಿದ್ದರು.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ.2ರಂದು ಹೊರ ಬೀಳಲಿದೆ.












Click it and Unblock the Notifications