ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ
ಕೋಲ್ಕತ್ತಾ, ಜು.22: ಪೆಗಾಸಸ್ ಸ್ಪೈವೇರ್ ಬಳಸಿ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರ ಫೋನ್ಗಳನ್ನು ಹ್ಯಾಕ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೋದಿ ಸರ್ಕಾರದ ಮೇಲಿನ ದಾಳಿಯನ್ನು ತೀವ್ರಗೊಳಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆಗಿನ ದೀದಿ ಸಭೆಗಳ ಮೇಲೆ ಕಣ್ಗಾವಲು ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಕೆಲವು ದಿನಗಳ ಹಿಂದೆ ನಾನು ಪ್ರಶಾಂತ್ ಕಿಶೋರ್ ಮತ್ತು ಇತರರೊಂದಿಗೆ ಸಭೆಯಲ್ಲಿದ್ದೇನೆ ಎಂದು ನಾನು ನಿಮಗೆ ಹೇಳಿದ್ದೆ. ಸರ್ಕಾರ ಸಭೆಯ ಬಗ್ಗೆ ಬೇಹುಗಾರಿಕೆ ನಡೆಸಿ ಮಾಹಿತಿ ಪಡೆದಿದೆ. ಪ್ರಶಾಂತ್ ಕಿಶೋರ್ ಫೋನ್ ಹ್ಯಾಕ್ ಮಾಡಲಾಗಿದೆ. ಪೆಗಾಸಸ್ ಸ್ಪೈವೇರ್ ಮೂಲಕ ಸರ್ಕಾರಕ್ಕೆ ನಮ್ಮ ಸಭೆಯ ಬಗ್ಗೆ ತಿಳಿದು ಬಂದಿದೆ," ಎಂದು ತಿಳಿಸಿದ್ದಾರೆ.
ಭಾನುವಾರ, ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟವು ಇಬ್ಬರು ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು ಮತ್ತು ಭಾರತದ ಹಲವಾರು ಉದ್ಯಮಿಗಳು ಮತ್ತು ಕಾರ್ಯಕರ್ತರು ಸೇರಿದಂತೆ 300 ಕ್ಕೂ ಹೆಚ್ಚು ಮಂದಿಯ ಮೊಬೈಲ್ ಫೋನ್ ಸಂಖ್ಯೆಗಳನ್ನು ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕಿಂಗ್ ಮಾಡಲಾಗಿದೆ ಎಂದು ವರದಿ ಮಾಡಿದೆ.

ಕೋಲಾಹಲಕ್ಕೆ ಕಾರಣವಾದ ಪೆಗಾಸಸ್
ನಡೆಯುತ್ತಿರುವ ಮಾನ್ಸೂನ್ ಅಧಿವೇಶನಕ್ಕೂ ಒಂದು ದಿನ ಮೊದಲು ಬಂದ ಪೆಗಾಸಸ್ ವರದಿಯು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಲು ಕಾರಣವಾಯಿತು. ಆದರೆ ಐಟಿ ಸಚಿವ ಮಾನ್ಸೂನ್ ಅಧಿವೇಶನಕ್ಕೂ ಒಂದು ದಿನ ಮೊದಲು ಈ ವರದಿ ಬಂದಿರುವುದು ಕಾಕತಾಳೀಯವೇನಲ್ಲ ಎಂದು ಹೇಳಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಪೆಗಾಸಸ್ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫ್ರಾನ್ಸ್, ಇಸ್ರೇಲ್ ಸೇರಿದಂತೆ ಹಲವಾರು ದೇಶಗಳು ಈ ವಿಚಾರದಲ್ಲಿ ತನಿಖೆ ಆರಂಭಿಸಿದೆ.

ಪೆಗಾಸಸ್ ವಿಚಾರದಲ್ಲಿ ದೀದಿ ವಾಗ್ದಾಳಿ
ಪೆಗಾಸಸ್ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ ಸರ್ಕಾರ ತಮ್ಮದೇ ಜನರನ್ನು ನಂಬುವುದಿಲ್ಲ. ತಮ್ಮ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದರು. "ಕೆಲವು ಆರ್ಎಸ್ಎಸ್ ನಾಯಕರು ಫೋನ್ಗಳನ್ನು ಸಹ ಕಣ್ಗಾವಲಿನಲ್ಲಿ ಇರಿಸಲಾಗಿದೆ," ಎಂದು ಕೂಡಾ ದೀದಿ ಹೇಳಿದರು.
"ಕೇಂದ್ರ ಸರ್ಕಾರ ಹಲವಾರು ಫೋನ್ಗಳನ್ನು ಟ್ಯಾಪ್ ಮಾಡುತ್ತಿದ್ದಾರೆ. ಉದಾಹರಣೆಗೆ, ಪ್ರಶಾಂತ್ ಕಿಶೋರ್ ಫೋನ್ ಅನ್ನು ಟ್ಯಾಪ್ ಮಾಡುತ್ತಿದ್ದಾರೆ. ನನ್ನ ಫೋನ್ ಅನ್ನು ಸಹ ಟ್ಯಾಪ್ ಮಾಡಬಹುದು. ನಾನು ಬಳಸುವ ಫೋನ್ ಈಗ ನಿಷ್ಪ್ರಯೋಜಕವಾಗಿದೆ. ನಾನು ಅದನ್ನು ಆಳವಾದ ಫ್ರಿಜ್ನಲ್ಲಿ ಇಡಬೇಕೇ? ಅಥವಾ ನಾನು ಅದನ್ನು ನಾಶಮಾಡಬಹುದೇ? ಏನು ಮಾಡುವುದು," ಎಂದು ಪ್ರಶ್ನಿಸಿದ್ದಾರೆ.
"ಪೆಗಾಸಸ್ ಸ್ಪೈವೇರ್ ಹೆಚ್ಚು ದೊಡ್ಡ ಪಿತೂರಿ. ಈ ಬೇಹುಗಾರಿಕೆ ವಿರುದ್ದ ಸಾಂಕೇತಿಕ ಪ್ರತಿಭಟನೆಯಾಗಿ, ನಾನು ನನ್ನ ಫೋನ್ನಲ್ಲಿ ಪ್ಲ್ಯಾಸ್ಟರ್ ಹಾಕಿದ್ದೇನೆ," ಎಂದು ಹೇಳಿರುವ ದೀದಿ, ಈ ವಿಷಯದಲ್ಲಿ ಸರ್ಕಾರವು ತನಿಖೆಗೆ ಆದೇಶಿಸಬೇಕು,'' ಎಂದು ಆಗ್ರಹಿಸಿದ್ದಾರೆ.

ಚುನಾವಣಾ ನಂತರ ಹಿಂಸಾಚಾರದ ಬಗ್ಗೆ ದೀದಿ ಹೇಳಿದ್ದೇನು?
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ನಂತರ ಹಿಂಸಾಚಾರದ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, "ಇಲ್ಲಿ ಏನೂ ಸಂಭವಿಸಿಲ್ಲ. ರಾಜ್ಯವು ಚುನಾವಣಾ ಆಯೋಗದ ಅಧೀನದಲ್ಲಿದ್ದಾಗ ಏನಾಯಿತು," ಎಂದು ಪ್ರಶ್ನಿಸಿದ್ದಾರೆ. "ನಾನು ಮೇ 5 ರಂದು ಪ್ರಮಾಣವಚನ ಸ್ವೀಕರಿಸಿ ಪೊಲೀಸರನ್ನು ನಿಯೋಜಿಸಿದ್ದೇನೆ. ಬಿಜೆಪಿ ಗೆದ್ದ ಸ್ಥಾನಗಳಲ್ಲಿ ನಮ್ಮ ಜನರನ್ನು ಕೊಂದಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯರೊಬ್ಬರು ಬಿಜೆಪಿ ಸದಸ್ಯರಾಗಿದ್ದಾರೆ. ಬಿಜೆಪಿ ಆ ಸದಸ್ಯರಿಗೆ ಏನು ಹೇಳಿದೆಯೋ ಅದನ್ನೇ ಆ ಸದಸ್ಯರು ಮಾಧ್ಯಮಕ್ಕೆ ಹೇಳುತ್ತಿದ್ದಾರೆ," ಎಂದು ಮಮತಾ ಬ್ಯಾನರ್ಜಿ ದೂರಿದರು

ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದ ದೀದಿ
ಬುಧವಾರ ಪೆಗಾಸಸ್ ವಿಚಾರದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. "ಮಿಸ್ಟರ್ ಮೋದಿ, ಪರವಾಗಿಲ್ಲ. ನಾನು ನಿಮ್ಮ ಮೇಲೆ ವೈಯಕ್ತಿಕವಾಗಿ ಹಲ್ಲೆ ಮಾಡುತ್ತಿಲ್ಲ. ಆದರೆ ನೀವು ಮತ್ತು ಗೃಹ ಸಚಿವರಾಗಿರಬಹುದು, ನೀವು ವಿರೋಧ ಪಕ್ಷದ ನಾಯಕರ ವಿರುದ್ಧ ಏಜೆನ್ಸಿಗಳನ್ನು ನಿಯೋಜಿಸುತ್ತಿದ್ದೀರಿ. ನೀವು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ," ಎಂದು ಆರೋಪಿಸಿದ್ದರು. "ಪಿಎಂ ಮೋದಿ ಸರ್ಕಾರವು ಜನರ ಕಲ್ಯಾಣಕ್ಕೆ ಬದಲಾಗಿ ಸ್ಪೈವೇರ್ಗಾಗಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ. ಪೆಟ್ರೋಲ್ ಬೆಲೆಯನ್ನು ನೋಡಿ. ಭಾರತ ಸರ್ಕಾರವು ಇಂಧನ ತೆರಿಗೆಯಿಂದಲೇ 3.7 ಲಕ್ಷ ಕೋಟಿ ಸಂಗ್ರಹಿಸಿದೆ. ಹಣ ಎಲ್ಲಿಗೆ ಹೋಗುತ್ತಿದೆ?," ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು.
ಇನ್ನು ಜುಲೈ25 ರಂದು ಮಮತಾ ಬ್ಯಾನರ್ಜಿ ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಶರದ್ ಪವಾರ್, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ವಿಪಕ್ಷ ನಾಯಕರನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ದೀದಿ, ''ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನೀಡಿದ್ದಾರೆ. ಭೇಟಿಯಾಗಲಿದ್ದೇನೆ,'' ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications