ಕೊರೊನಾವೈರಸ್ ಪರೀಕ್ಷೆ ಮಾಡಿಸಿಕೊಳ್ಳದ ನಾಲ್ವರಿಗೆ ಪಾಸಿಟಿವ್ ವರದಿ!
ಕೋಲ್ಕತ್ತಾ, ಆಗಸ್ಟ್.19: ಕೊರೊನಾವೈರಸ್ ಸೋಂಕಿತ ತಪಾಸಣೆಯಲ್ಲಿ ಯಡವಟ್ಟುಗಳು ಆಗುತ್ತಿರುವುದು ಹೊಸತೇನಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳದ ನಾಲ್ವರಿಗೆ ಸೋಂಕು ತಗಲಿರುವ ಬಗ್ಗೆ ವರದಿಯನ್ನು ನೀಡಿದ್ದು ಅಚ್ಚರಿ ಮೂಡಿಸಿದೆ.
Recommended Video
ಪಶ್ಚಿಮ ಬಂಗಾಳದ ದಿನಜ್ ಪುರ್ ಜಿಲ್ಲೆ ಬೆಲೋನ್ ಗ್ರಾಮದ ಗೋಲ್ಪೋಖೊರ್ 2ನೇ ಬ್ಲಾಕ್ ನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವತ್ರಿಕ ಕೊವಿಡ್-19 ತಪಾಸಣೆ ನಡೆಸಲಾಗಿತ್ತು. ವಾರ್ಡ್ ನಲ್ಲಿರುವ 80 ಜನರ ಪೈಕಿ 73 ಜನರನ್ನು ಆಗಸ್ಟ್.11ರಂದು ಆರ್ ಟಿ-ಪಿಸಿಆರ್ ತಪಾಸಣೆ ನಡೆಸಲಾಗಿತ್ತು.
ಕೊವಿಡ್-19 ತಪಾಸಣೆ ನಡೆಸಿದ ಮೂರು ದಿನಕ್ಕೆ ಅಂದರೆ ಆಗಸ್ಟ್.14ರಂದು ಪರೀಕ್ಷಾ ವರದಿಯು ಬಂದಿತ್ತು. ಈ ವೇಳೆ ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಗಾಗದೇ ತಪ್ಪಿಸಿಕೊಂಡಿದ್ದ ಏಳು ಮಂದಿಯ ಪೈಕಿ ನಾಲ್ವರಿಗೆ ಕೊವಿಡ್-19 ಸೋಂಕು ತಗಲಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿತ್ತು.

ಕೊರೊನಾವೈರಸ್ ಪರೀಕ್ಷೆ ಮಾಡಿಸಿಕೊಳ್ಳದವರಿಗೆ ಪಾಸಿಟಿವ್ ವರದಿ
ಕೊರೊನಾವೈರಸ್ ಸೋಂಕು ತಪಾಸಣೆ ನಡೆಸುವ ಸಂದರ್ಭದಲ್ಲಿ ಯಾವುದೇ ತಪಾಸಣೆಗೆ ಒಳಗಾಗದ ನಾಲ್ವರಿಗೆ ಸೋಂಕು ತಗಲಿರುವ ಬಗ್ಗೆ ವರದಿ ನೀಡಿರುವುದು ಬೆಳಕಿಗೆ ಬಂದಿದೆ. ಸ್ವ್ಯಾಬ್ ನೀಡದ ವ್ಯಕ್ತಿಗಳಿಗೆ ಪಾಸಿಟಿವ್ ಎಂದು ವರದಿ ನೀಡಿದ್ದರ ಹಿಂದೆ ಲೋಪದೋಷವಿರುವುದು ಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸದಿರುವುದು ಇದರಿಂದ ಗೊತ್ತಾಗುತ್ತದೆ. ನಾಲ್ವರು ನೀಡಿರುವ ದೂರನ್ನು ಪಡೆದುಕೊಂಡಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ತೌಫ್ ಅಲಮ್ ತಿಳಿಸಿದ್ದಾರೆ.

ಕೊವಿಡ್-19 ತಪಾಸಣೆ ಮಾಡದೇ ಪಾಸಿಟಿವ್ ಕೊಟ್ಟಿದ್ದೇಗೆ?
"ಆಗಸ್ಟ್.11ರಂದು ಕೊರೊನಾವೈರಸ್ ತಪಾಸಣೆಗಾಗಿ ಮುಂದೆ ನಿಂತಿದ್ದ ಉದ್ದದ ಸಾಲನ್ನು ಕಂಡು ನಾನು ಅಲ್ಲಿಂದ ವಾಪಸ್ ತೆರೆಳಿದ್ದೆನು. ನಾನು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಗಾಗಿಲ್ಲ. ನನ್ನಿಂದ ಯಾವುದೇ ರೀತಿ ಸ್ವ್ಯಾಬ್ ಸಂಗ್ರಹವನ್ನೂ ಮಾಡಿಲ್ಲ. ಹೀಗಿದ್ದರೂ ನನಗೆ ಕೊರೊನಾವೈರಸ್ ಪಾಸಿಟಿವ್ ಇದೆ ಎಂದು ವರದಿ ನೀಡಿದ್ದನ್ನು ಕಂಡು ಅಚ್ಚರಿ ಉಂಟಾಗುತ್ತಿದೆ ಎಂದು ಹರುನ್ ರಶೀನ್ ತಿಳಿಸಿದ್ದಾರೆ.

ಕೊರೊನಾವೈರಸ್ ತಪಾಸಣೆಯೇನು ವ್ಯಾಪಾರವೇ?
ಕೊರೊನಾವೈರಸ್ ಸೋಂಕು ಪರೀಕ್ಷೆ ನಡೆಸದೇ ಪಾಸಿಟಿವ್ ಎಂದು ವರದಿ ನೀಡಿದ್ದು ಹೇಗೆ ಎಂದು ಸೂರಜ್ ಅಲಮ್ ಪ್ರಶ್ನೆ ಮಾಡಿದ್ದಾರೆ. ಆಗಸ್ಟ್.11ರಂದು ತಮ್ಮ ವೈಯಕ್ತಿಕ ಕಾರ್ಯದ ಮೇಲೆ ಕಂಡಿ ಪ್ರದೇಶಕ್ಕೆ ತೆರಳಿದ್ದರು. ಅಸಲಿಗೆ ನಾನು ಕೊವಿಡ್-19 ತಪಾಸಣೆಗೆ ಒಳಗಾಗಿಲ್ಲ ಎಂದ ಮೇಲೆ ಸೋಂಕು ತಗಲಿರುವ ಬಗ್ಗೆ ಪಾಸಿಟಿವ್ ಎಂದು ಹೇಗೆ ಗೊತ್ತಾಗುತ್ತದೆ. ಕೊರೊನಾವೈರಸ್ ಸೋಂಕು ತಪಾಸಣೆ ನಡೆಸುವುದು ಒಂದು ವ್ಯಾಪಾರವಾಗುತ್ತಿದೆಯಾ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊರೊನಾವೈರಸ್ ಸ್ಥಿತಿಗತಿ
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಪಶ್ಚಿಮ ಬಂಗಾಳದಲ್ಲಿ 122753ಕ್ಕೆ ಏರಿಕೆಯಾಗಿದೆ. ಈ ಪೈಕಿ 92690 ಸೋಂಕಿತರು ಗುಣಮುಖರಾಗಿದ್ದು, 27535 ಸಕ್ರಿಯ ಪ್ರಕರಣಗಳಿವೆ. ಮಹಾಮಾರಿಗೆ ರಾಜ್ಯದಲ್ಲಿ ಇದುವರೆಗೂ 2528 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.












Click it and Unblock the Notifications