ಬಿಜೆಪಿ ಸೇರಿದ ಮಮತಾ ಬ್ಯಾನರ್ಜಿ ಮಾಜಿ ಆಪ್ತೆ ಭಾರತಿ ಘೋಶ್
ಕೊಲ್ಕತಾ,ಫೆಬ್ರವರಿ 05: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತೆ, ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಶ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸದಸ್ಯೆಯಾಗಿದ್ದಾರೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ಮುಖಂಡ ಮುಕುಲ್ ರಾಯ್, ಕೈಲಾಶ್ ವಿಜಯ್ ವರ್ಗಿಯ ಅವರ ಸಮ್ಮುಖದಲ್ಲಿ ಭಾರತಿ ಅವರು ಬಿಜೆಪಿ ಸೇರಿದರು.
ಸುಲಿಗೆ ಮತ್ತು ಅಪರಾಧಿ ಸಂಚಿನ ಆರೋಪ ಎದುರಿಸುತ್ತಿರುವ ಭಾರತಿ ಅವರ ಮೇಲೆ ಸಿಐಡಿ ಕಣ್ಣಿಟ್ಟಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದ ಘೋಶ್ ಅವರು ಅವರು ಆಗಸ್ಟ್ 15, 2014ರಂದು ಸೇವಾ ಪದಕ ಲಭಿಸಿತ್ತು.
ದೀದಿ-ಸಿಬಿಐ ವಿವಾದ LIVE: 'ಸತ್ತರೂ ಮುಂದಿಟ್ಟ ಹೆಜ್ಜೆ ಹಿಂದಿಡೋಲ್ಲ!'
2014ರ ಲೋಕಸಭೆ ಚುನಾವಣೆ ಹಾಗೂ 2016ರ ಅಸೆಂಬ್ಲಿ ಚುನಾವಣೆ ವೇಳೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ಪಶ್ಚಿಮ ಮಿಡ್ನಾಪೂರ್ ನ ಎಸ್ಪಿಯಾಗಿ 6 ವರ್ಷ ಕಾರ್ಯನಿರ್ವಹಿಸಿದ್ದರು. ನಂತರ ಸಶಸ್ತ್ರ ಮೀಸಲು ಪಡೆ 3ನೇ ಬೆಟಾಲಿಯನ್ ಗೆ ವರ್ಗಾವಣೆ ಮಾಡಲಾಗಿತ್ತು.
ಭಾರತಿ ಘೋಶ್ರನ್ನು ಪಕ್ಷಕ್ಕೆ ಸ್ವಾಗತಿಸಿರುವ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕುಟುಂಬ ಬೆಳೆಯುತ್ತಲೇ ಹೋಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಚಂದನ್ ಮಜಿ ಎಂಬವರು ಸಲ್ಲಿಸಿದ ಸುಲಿಗೆ ಮತ್ತು ಅಪರಾಧಿ ಸಂಚಿನ ದೂರಿನ ಆಧಾರದಲ್ಲಿ ಸಿಐಡಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಈ ಬಗ್ಗೆ ಸಿಐಡಿ ಪಶ್ಚಿಮ ಮಿಡ್ನಾಪೊರ್ನ ಘತಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೋಷಾರೋಪದಲ್ಲಿ ಭಾರತಿ ಘೋಶ್ ಸೇರಿದಂತೆ ಎಂಟು ಮಂದಿಯನ್ನು ತಲೆಮರೆಸಿಕೊಂಡ ಆರೋಪಿಗಳು ಎಂದು ತಿಳಿಸಿದೆ.
ಸತ್ತರೂ ಸರಿ, ಹೋರಾಟ ಬಿಡೆನು: ಮಮತಾ ಬ್ಯಾನರ್ಜಿ
ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿರುವ ಘೋಶ್, "ನಾನು ತಲೆಮರೆಸಿಕೊಂಡಿಲ್ಲ ಮತ್ತು ಶೀಘ್ರದಲ್ಲಿ ಜನರ ಮುಂದೆ ಬರುತ್ತೇನೆ. ನನ್ನನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹಾಗಾಗಿ ನಾನು ತಲೆಮರೆಸಿಕೊಂಡಿಲ್ಲ. ಜನರು ನನ್ನ ಘನತೆಗೆ ಕುಂದುಂಟು ಮಾಡಲು ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ" ಎಂದು ಧ್ವನಿಮುದ್ರಣ ಕಳಿಸಿದ್ದರು.