ಬಿಜೆಪಿ ಸೇರಿದ 24 ಗಂಟೆಗಳಲ್ಲಿ ಪಕ್ಷಕ್ಕೆ ಗುಡ್ ಬೈ ಹೇಳಿದ ಆಟಗಾರ
ಕೋಲ್ಕತಾ, ಜುಲೈ 24: ಕೊರೊನಾವೈರಸ್ ಕಾಟದ ನಡುವೆ 2021ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಟಿಎಂಸಿ ಸಿದ್ಧತೆ ಜೋರಾಗಿ ನಡೆಸಿವೆ.
'2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಪಶ್ಚಿಮ ಬಂಗಾಳದಿಂದ ಹೊರಹಾಕುತ್ತೇವೆ. ತೃಣಮೂಲ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸಲಿದೆ. ಮುಂದಿನ ಚುನಾವಣೆ, ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಹೊಸ ದಿಕ್ಕನ್ನು ತೋರಿಸುತ್ತದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣ ರಣ ಕಹಳೆ ಊದಿದ್ದಾರೆ.
'2021ರ ಚುನಾವಣೆಯಲ್ಲಿ ಬಿಜೆಪಿಯನ್ನು ಬಂಗಾಳದಿಂದ ಹೊರಹಾಕುತ್ತೇವೆ'
ಇನ್ನೊಂದೆಡೆ ಭಾರತೀಯ ಜನತಾ ಪಕ್ಷವು ವಿವಿಧ ಪಕ್ಷವು ವಿವಿಧ ರಂಗಗಳ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೆಳೆಯತೊಡಗಿದೆ. ಆದರೆ, ಮಾಜಿ ಫುಟ್ಬಾಲರ್ ಮೆಹ್ತಾಬ್ ಹುಸೇನ್ ಅವರು ಬಿಜೆಪಿ ಸೇರಿದ 24 ಗಂಟೆಗಳಲ್ಲೇ ಪಕ್ಷವನ್ನಷ್ಟೇ ಅಲ್ಲ ರಾಜಕೀಯದಿಂದಲೇ ದೂರ ಉಳಿಯುತ್ತಿರುವುದಾಗಿ ಘೋಷಿಸಿದ್ದಾರೆ. ಬಿಜೆಪಿ ತೊರೆಯಲು ವೈಯಕ್ತಿಕ ಕಾರಣ ನೀಡಿದ್ದಾರೆ. ಆದರೆ, ಆಡಳಿತಾರೂಢ ಟಿಎಂಸಿ ಒತ್ತಡ ಹೇರಿ ಈ ರೀತಿ ಮಾಡಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಕೋಲ್ಕತಾ ಮೈದಾನದಲ್ಲಿ ಮಿಡ್ ಫೀಲ್ಡ್ ಜನರಲ್ ಎಂದೇ ಜನಪ್ರಿಯರಾಗಿದ್ದ ಈಸ್ಟ್ ಬೆಂಗಾಳ ತಂಡದ ಮಾಜಿ ನಾಯಕ ಹುಸೇನ್ ಅವರು ಸ್ವಇಚ್ಛೆಯಿಂದ ರಾಜಕೀಯ ಪ್ರವೇಶಿಸಿದೆ. ಆದರೆ, ಕುಟುಂಬಸ್ಥರಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ, ನಾನು ರಾಜಕೀಯದಿಂದ ದೂರ ಉಳಿಯುತ್ತಿದ್ದೇನೆ, ನನ್ನ ಹಿಂಬಾಲಕರಿಗೆ ಈ ಮೂಲಕ ಕ್ಷಮೆಯಾಚಿಸುತ್ತಿದ್ದೇನೆ ಎಂದಿದ್ದಾರೆ.
2018-19ರಂದು ಕೊನೆಯ ಬಾರಿಗೆ ಮೋಹನ್ ಬಗಾನ್ ಪರ ಆಡಿದ್ದ ಹುಸೇನ್, ಭಾರತ ಪರ 30 ಪಂದ್ಯಗಳಲ್ಲಿ 2 ಗೋಲು ಬಾರಿಸಿದ್ದರು. ಪತ್ನಿ ಮೌಮಿಯಾ, ಮಕ್ಕಳು ಜಿದಾನ್, ಝಾವಿ ಹಾಗೂ ಹಿತೈಷಿಗಳಿಗೆ ನನ್ನ ನಿರ್ಣಯದ ಬಗ್ಗೆ ಇಷ್ಟವಿರಲಿಲ್ಲ ಎಂದಿದ್ದಾರೆ. ಆದರೆ, ತೃಣ ಮೂಲ ಕಾಂಗ್ರೆಸ್ ನಾಯಕರು, ಹುಸೇನ್ ಮೇಲೆ ಒತ್ತಡ, ಬೆದರಿಕೆ ಹಾಕಿ, ರಾಜಕೀಯದಿಂದ ದೂರಾಗುವಂತೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಎಲ್ಲಾ ಆರೋಪಿಗಳನ್ನು ಅಲ್ಲಗೆಳೆದಿದ್ದಾರೆ.