ಪಶ್ಚಿಮ ಬಂಗಾಳದಲ್ಲಿ ಮತದಾನ ಸಮಯ ಗಲಭೆ; ವರದಿ ಕೇಳಿದ ಚುನಾವಣಾ ಆಯೋಗ
ಕೋಲ್ಕತ್ತಾ, ಏಪ್ರಿಲ್ 1: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆ ನಂದಿಗ್ರಾಮದ ಬೋಯಲ್ ಪ್ರದೇಶದಲ್ಲಿ ನಡೆದ ಗಲಭೆ ಸಂಬಂಧ ಆಡಳಿತದಿಂದ ಚುನಾವಣಾ ಆಯೋಗ ವಿಸ್ತೃತ ವರದಿ ಕೇಳಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರುವಾರ ನಂದಿಗ್ರಾಮದ ಮತದಾನದ ಬೂತ್ಗಳಿಗೆ ಭೇಟಿ ನೀಡಿದ್ದರು. ಬೋಯಲ್ ಪ್ರದೇಶಕ್ಕೆ ಮಮತಾ ಬ್ಯಾನರ್ಜಿ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆಯನ್ನು ಕೂಗಿದ್ದಾರೆ. ಆನಂತರ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ ಉಂಟಾಗಿದ್ದು, ಬೂತ್ ನಂಬರ್ 7ರಲ್ಲಿ ಮತ್ತೆ ಮತದಾನ ನಡೆಸಬೇಕೆಂದು ಟಿಎಂಸಿ ನಾಯಕರು ಆಗ್ರಹಿಸಿದ್ದರು. ಈ ಬೆಳವಣಿಗೆಗಳಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಜೊತೆಗೆ ಪಶ್ಚಿಮ ಮಿಡ್ನಾಪುರದಲ್ಲಿ ಟಿಎಂಸಿ ಕಾರ್ಯಕರ್ತನನ್ನು ಕೊಲೆ ಮಾಡಿರುವ ಸಂಗತಿಯೂ ಬೆಳಕಿಗೆ ಬಂದಿತ್ತು.
ಇದೀಗ ಬೋಯಲ್ ಪ್ರದೇಶದಲ್ಲಿ ನಡೆದ ಈ ಗಲಭೆ ಹಾಗೂ ಟಿಎಂಸಿ ಕಾರ್ಯಕರ್ತನ ಕೊಲೆ ಈ ಎರಡು ಘಟನೆಗಳ ಕುರಿತು ಆಡಳಿತದಿಂದ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ವರದಿ ಕೇಳಿದ್ದಾರೆ.

ಮಾರ್ಚ್ 27ರಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು, ಏಪ್ರಿಲ್ 1ರಂದು ದಕ್ಷಿಣ 24 ಪರಗಣ, ಬಂಕುರ, ಪಶ್ಚಿಮ ಮಿಡ್ನಾಪುರ ಹಾಗೂ ಪೂರ್ವ ಮಿಡ್ನಾಪುರ ಜಿಲ್ಲೆಗಳ ಮೂವತ್ತು ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications