ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
ಕೋಲ್ಕತಾ, ಮಾರ್ಚ್ 4: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳದ ಬಿಜೆಪಿಯ ಯುವ ನಾಯಕಿ ಪಮೇಲಾ ಗೋಸ್ವಾಮಿ ತಮಗೆ ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಆದರೆ ಅವರಿಗೆ ಜಾಮೀನು ನೀಡಲು ನಿರಾಕರಿಸಿರುವ ಎನ್ಡಿಪಿಎಸ್ ನ್ಯಾಯಾಲಯ, ಅವರ ಪೊಲೀಸ್ ಬಂಧನದ ಅವಧಿಯನ್ನು ಮಾರ್ಚ್ 18ರವರೆಗೂ ವಿಸ್ತರಿಸಿದೆ.
ತಮ್ಮ ಜೀವಕ್ಕೆ ಅಪಾಯವಿರುವುದು ಮಾತ್ರವಲ್ಲದೆ, ಕೋಲ್ಕತಾ ಪೊಲೀಸರಿಂದ ತಮ್ಮೊಂದಿಗೆ ಬಂಧನಕ್ಕೆ ಒಳಗಾಗಿರುವ ಸ್ನೇಹಿತ ಪ್ರಬೀರ್ ಅವರ ಜೀವಕ್ಕೂ ಬೆದರಿಕೆ ಇದೆ ಎಂದು ಪಮೇಲಾ ಹೇಳಿದ್ದಾರೆ. ಬಂಧನಕ್ಕೆ ಒಳಗಾಗಿರುವ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
'ಪ್ರಬೀರ್ನನ್ನು ಜೈಲಿನಲ್ಲಿ ಕೊಲ್ಲುವುದಾಗಿ ಕೆಲವು ದಿನಗಳ ಹಿಂದೆ ರಾಕೇಶ್ ಸಿಂಗ್ ನನಗೆ ಬೆದರಿಕೆ ಹಾಕಿದ್ದರು. ಅದರ ಸಾಕ್ಷ್ಯವನ್ನು ಜಂಟಿ ಆಯುಕ್ತರಿಗೆ ನಾನು ನೀಡಿದ್ದೆ. ನನ್ನ ಜೀವಕ್ಕೆ ತೀವ್ರ ಬೆದರಿಕೆ ಇದೆ. ಹೀಗಾಗಿ ಅದರ ಬಗ್ಗೆ ಸೂಕ್ತ ಗಮನ ಹರಿಸಬಹುದು ಎಂಬ ನಂಬಿಕೆಯೊಂದಿಗೆ ನಿಮ್ಮ ಮುಂದೆ (ಮಾಧ್ಯಮ) ಹೇಳುತ್ತಿದ್ದೇನೆ. ನನಗೆ ನ್ಯಾಯ ಬೇಕು' ಎಂದು ನ್ಯಾಯಾಲಯಕ್ಕೆ ತೆರಳುವ ವೇಳೆ ಪಮೇಲಾ ಹೇಳಿದ್ದಾರೆ.

ಪಮೇಲಾ ಗೋಸ್ವಾಮಿ ಹಾಗೂ ಅವರ ಸ್ನೇಹಿತ ಪ್ರಬೀರ್ ಕುಮಾರ್ ಡೇ ಅವರ ಜಾಮೀನು ಅರ್ಜಿಗಳನ್ನು ಎನ್ಡಿಪಿಎಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿತು. ಅದಕ್ಕೂ ಮೊದಲು ಸೋಮವಾರ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಜಾಮೀನು ಅರ್ಜಿಯನ್ನು ಸಹ ವಜಾಗೊಳಿಸಲಾಗಿತ್ತು.
ತಮ್ಮ ವಿರುದ್ಧದ ಸಂಚಿನ ಭಾಗವಾಗಿ ಇದರಲ್ಲಿ ಸಿಲುಕಿಸಲಾಗಿದೆ. ಕೋಲ್ಕತಾ ಪೊಲೀಸರು ಕಳೆದ ತಿಂಗಳು ತಮ್ಮ ಕಾರ್ನಿಂದ ವಶಪಡಿಸಿಕೊಂಡ ಕೊಕೇನ್ ಚೀಲಗಳನ್ನು ಅಲ್ಲಿ ಇರಿಸಲು ರಾಕೇಶ ಸಿಂಗ್ ತಮ್ಮ ಹಿಂಬಾಲಕರನ್ನು ಕಳುಹಿಸಿದ್ದರು ಎಂದು ಪಮೇಲಾ ಆರೋಪಿಸಿದ್ದಾರೆ. ಸಹ ಆರೋಪಿ ಪ್ರಬೀರ್ ಡೇ ಕೂಡ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿದ್ದಾರೆ.
'ನನ್ನನ್ನು ಅಲ್ಲಿ ಯಾವಾಗ ಬೇಕಾದರೂ ಕೊಲ್ಲಬಹುದು. ನನ್ನನ್ನು ಕೊಲೆ ಮಾಡಲು ಸಂಚು ನಡೆಯುತ್ತಿದೆ. ಜೈಲಿನಲ್ಲಿಯೇ ನನ್ನನ್ನು ಸಾಯಿಸಲು ಸಂಚು ನಡೆದಿದೆ ಎಂದು ನನ್ನ ವಕೀಲರಿಗೆ ತಿಳಿಸಿದ್ದೇನೆ. ನನ್ನನ್ನು ಇಂದು ರಾತ್ರಿಯೇ ಸಾಯಿಸಬಹುದು' ಎಂದು ಪ್ರಬೀರ್ ಹೇಳಿದ್ದಾರೆ.












Click it and Unblock the Notifications