ಸುಳ್ಳು ಹೇಳಿದ್ದು ಸಾಬೀತಾದರೆ ಮೋದಿ ಬಸ್ಕಿ ಹೊಡೆಯಬೇಕು; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಏಪ್ರಿಲ್ 14: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿಷೇಧ ವಿಧಿಸಿದ್ದು, ನಿಷೇಧದ ಅವಧಿ ಕೊನೆಗೊಂಡ ನಂತರ ಮಮತಾ ಬ್ಯಾನರ್ಜಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಮತುವಾ ಜನಾಂಗಕ್ಕೆ ಮಮತಾ ಬ್ಯಾನರ್ಜಿ ಏನೂ ಮಾಡಿಲ್ಲ ಎಂದು ಮೋದಿ ಆರೋಪಿಸಿದ್ದು, ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, "ಈ ಮಾತು ನಿಜವಾದರೆ ನಾನು ರಾಜಕೀಯ ತೊರೆಯುತ್ತೇನೆ. ಆದರೆ ಮೋದಿ ಸುಳ್ಳು ಹೇಳಿರುವುದು ಸಾಬೀತಾದರೆ, ಕಿವಿ ಹಿಡಿದುಕೊಂಡು ಬಸ್ಕಿ ಹೊಡೆಯಬೇಕು" ಎಂದು ಹೇಳಿದ್ದಾರೆ. ಮುಂದೆ ಓದಿ...
ಚುನಾವಣಾ ಪ್ರಚಾರಕ್ಕೆ ನಿಷೇಧ ವಿರೋಧಿಸಿ ಮಮತಾ ಬ್ಯಾನರ್ಜಿ ಧರಣಿ
ಬಸ್ಕಿ ಹೊಡೆಯಬೇಕು ಎಂದು ಸವಾಲು ಹಾಕಿದ ದೀದಿ
"ಮೋದಿ ಅವರು ಕೃಷ್ಣಾನಗರದಲ್ಲಿ ನಡೆದ ಸಭೆಯಲ್ಲಿ, ಮತುವಾ ಸಮುದಾಯಕ್ಕೆ ಮಮತಾ ದೀದಿ ಏನೂ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಾನು ಸಾರ್ವಜನಿಕವಾಗಿ ಅವರಿಗೆ ಸವಾಲು ಹಾಕುತ್ತಿದ್ದೇನೆ. ನಾನು ಈ ಸಮುದಾಯಕ್ಕೆ ಏನೂ ಮಾಡಿಲ್ಲ ಎನ್ನುವುದು ಹೌದಾದರೆ ನಾನು ರಾಜಕೀಯವನ್ನೇ ತೊರೆಯುತ್ತೇನೆ. ನೀವು ಸುಳ್ಳು ಹೇಳಿದ್ದು ಸಾಬಿತಾದರೆ, ಕಿವಿ ಹಿಡಿದುಕೊಂಡು ಬಸ್ಕಿ ಹೊಡೆಯಬೇಕು" ಎಂದು ಹೇಳಿದ್ದಾರೆ.
"ನನ್ನ ಬಳಿ ಇಂಥ ಒಳತಂತ್ರ ನಡೆಯುವುದಿಲ್ಲ"
ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ನಾನು ಭಾಗವಹಿಸುವುದನ್ನು ತಡೆಯಲು ಬಿಜೆಪಿ ಕಡೆಯಿಂದ ಯತ್ನಗಳು ನಡೆಯುತ್ತಿವೆ. ಆದರೆ ನಾನು ಜಗಳಗಂಟಿ. ನನ್ನ ಬಳಿ ಇಂಥ ಒಳತಂತ್ರಗಳು ನಡೆಯುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಧರಣಿ ನಡೆಸಿದ್ದ ಮಮತಾ ಬ್ಯಾನರ್ಜಿ
ಚುನಾವಣಾ ಆಯೋಗ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ಹೇರಿದ್ದ ನಿಷೇಧದ ವಿರುದ್ಧ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು. ತಮ್ಮನ್ನು ನಿಷೇಧಿಸಿರುವ ಆಯೋಗದ ಕ್ರಮವನ್ನು ಮಮತಾ ಬ್ಯಾನರ್ಜಿ ಅಸಾಂವಿಧಾನಿಕ ಎಂದು ಹೇಳಿದ್ದರು.
ಏಪ್ರಿಲ್ 17ರಂದು ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಬಿಜೆಪಿ ಪ್ರಚಾರ ನಡೆಸಬಹುದು. ನಾನು ನಡೆಸಬಾರದು ಎಂದರೆ ಏನರ್ಥ? ಇದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಬಂಗಾಳದ ಜನ ಈ ವಿಷಯವನ್ನು ನೋಡಿಕೊಳ್ಳುತ್ತಾರೆ. ಅವರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಬರಾಸತ್ನಲ್ಲಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ."ದ್ವೇಷ ಬಿತ್ತುವಂತೆ ಏಕೆ ಮಾತನಾಡುತ್ತಿದ್ದೀರ?"
ಚುನಾವಣಾ ಪ್ರಚಾರದಲ್ಲಿ ಬಿಜೆಪಿಯವರು ಏಕೆ ದ್ವೇಷ ಬಿತ್ತುವಂತೆ ಮಾಡುತ್ತಿದ್ದಾರೆ? ಚುನಾವಣಾ ಆಯೋಗ ಇದಕ್ಕೆ ಮಧ್ಯ ಪ್ರವೇಶಿಸಬೇಕು. ಚುನಾವಣೆ, ಮತದಾನದ ಮೇಲೆ ಪ್ರಭಾವ ಬೀರಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ದದೀದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದೆ.